ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ, ಮೂವರ ಬಂಧನ
ಬೆಂಗಳೂರು, ಮೇ. 14: ಕೊರೊನಾ ಎರಡನೇ ಅಲೆ ನಾನಾ ಕಾಳದಂಧೆಗಳಿಗೆ ಎಡೆ ಮಾಡಿಕೊಟ್ಟಿದೆ. ಆರೋಗ್ಯ ಇಲಾಖೆ ತೆಗೆದುಕೊಂಡ ಅಡ್ಡ ತೀರ್ಮಾನಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹೆಜ್ಜೆ- ಹೆಜ್ಜೆಗೂ ಮೆಡಿಕಲ್ ಮಾಫಿಯಾಗಳು ಹುಟ್ಟಿಕೊಂಡು ಜನರನ್ನು ಸುಲಿಗೆ ಮಾಡುತ್ತಿವೆ. ರೆಮ್ಡೆಸಿವಿರ್, ಆಕ್ಸಿಜನ್, ಬೆಡ್ ಜತೆಗೆ ಇದೀಗ ಆಕ್ಸಿಜನ್ ಸಿಲಿಂಡರ್ಗಳನ್ನು ಕೂಡ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಆಕ್ಸಿಜನ್ನನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನನ್ನು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ರಾಜ್ ಕುಮಾರ್, ಅನೀಲ್ ಕುಮಾರ್ ಮತ್ತು ಮಂಜುನಾಥ್ ಬಂಧಿತರು. ಇವರು ದುಬಾರಿ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಕ್ಸಿಜನ್ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಈ ಹಿಂದೆ ಮಾರಾಟ ಮಾಡಿರುವ ಕುರಿತು ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಲಕ್ಷಾಂತರ ಮೌಲ್ಯದ ಆಕ್ಸಿಜನ್ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
Recommended Video
ಮೂರು ಸಾವಿರ ಮೌಲ್ಯದ ಆಕ್ಸಿಜನ್ ಸಿಲಿಂಡರ್ಗಳನ್ನು ಹತ್ತು ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಪೀಣ್ಯಾದಲ್ಲಿನ ಇಂಡಸ್ಟ್ರೀ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಮ್ಯಾನೇಜರ್ನನ್ನು ಬಂಧಿಸಿದ್ದರು. ಈ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಆಕ್ಸಿಜನ್ ಸಿಲಿಂಡರ್ ದಂಧೆ ಬಯಲಿಗೆ ಎಳೆದಿದ್ದರು. ಇದೀಗ ಮೆಡಿಕಲ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹುತೇಕರು ಕೊರೊನಾ ಅವಾಂತರ ದುರ್ಲಾಭ ಪಡೆಯಲು ನಾನಾ ದಂಧೆಗಳನ್ನು ಹುಟ್ಟಿ ಹಾಕಿದ್ದಾರೆ. ಸರ್ಕಾರ ಮೊದಲೇ ಎಚ್ಚೆತ್ತುಕೊಂಡಿದ್ದಲ್ಲಿ, ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸರ್ಕಾರ ಎಡವಿದ ಕಾರಣದಿಂದ ಹೆಜ್ಜೆ ಹೆಜ್ಜೆಗೂ ಮೆಡಿಕಲ್ ಮಾಫಿಯಾ ಸೃಷ್ಟಿಯಾಗಿ ಜನರ ರಕ್ತ ಹೀರುತ್ತಿದೆ ಎಂದು ವೈದ್ಯರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.