ನಮ್ಮದು ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲ; ಹೈಕೋರ್ಟ್ ಕಿಡಿ
ಬೆಂಗಳೂರು, ಜನವರಿ 15; ನಮ್ಮದು ಕಲ್ಯಾಣ ರಾಜ್ಯ ಆಳ್ವಿಕೆಯೇ ಹೊರತು, ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲ, ಇಲ್ಲಿ ಸಂವಿಧಾನಬದ್ಧವಾಗಿಯೇ ಎಲ್ಲ ನಡೆಯಬೇಕು, ಇಲ್ಲವಾದರೆ ಊರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ಬಿಡಿಎ ವಿರುದ್ಧ ಕಿರಿ ಕಾರಿದೆ.
ಅಲ್ಲದೆ, ಸಾರ್ವಜನಿರಿಗೆ ಸೇರಿದ ನಿವೇಶನವನ್ನು ಸಿಎ ನಿವೇಶನವೆಂದು ಘೋಷಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಆ ವೇಳೆ ಅರ್ಜಿದಾರರ ನಿವೇಶನಕ್ಕೆ ಸಂಬಂಧಿಸಿದಂತೆ ಬಿಡಿಎ ಆದೇಶ ರದ್ದುಪಡಿಸಲಾಗಿದೆ.
ದುಬಾರಿ ದಂಡ ವಿಧಿಸಲು ಇದು ಸೂಕ್ತ ಪ್ರಕರಣವಾಗಿದೆಯಾದರೂ, ಬಿಡಿಎ ವಕೀಲರ ಮನವಿ ಹಿನ್ನೆಲೆಯಲ್ಲಿ ದಂಡ ವಿಧಿಸುವ ನಿರ್ಧಾರದಿಂದ ನ್ಯಾಯಾಲಯ ಹಿಂದೆ ಸರಿದಿದೆ ಎಂದೂ ಸಹ ಎಚ್ಚರಿಕೆ ನೀಡಿದೆ. ರದ್ದುಪಡಿಸಲಾದ ಆದೇಶಗಳ ಸಂಬಂಧ ಬಿಡಿಎ ಯಾವುದೇ ಕ್ರಮಕೈಗೊಂಡಿದ್ದರೆ ಅವುಗಳನ್ನು 6 ವಾರಗಳಲ್ಲಿ ಹಿಂಪಡೆಯಬೇಕು ಎಂದು ಹೇಳಿದೆ.

ಬಿಡಿಎ ಆಯುಕ್ತರು 2013ರಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಪದ್ಮನಾಭನಗರದ ಬಿ. ವಿ. ಓಂಪ್ರಕಾಶ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಕೋರ್ಟ್ ಏನು ಹೇಳಿದೆ?; ಸೊಸೈಟಿಯು 1985ರ ಜೂ. 7ರಂದು ಓಂಪ್ರಕಾಶ್ ಅವರಿಗೆ 2 ನಿವೇಶನಗಳನ್ನು ಕ್ರಯ ಮಾಡಿಕೊಟ್ಟಿದೆ. ಈ ಕ್ರಯ ಪತ್ರದಲ್ಲಿ ಕೆಲ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ1997ರ ಮಾ.29ರಂದು ಮತ್ತೊಂದು ಕ್ರಯಪತ್ರ ಮಾಡಿಕೊಡಲಾಗಿದೆ.
ಅಸಲಿ ಕ್ರಯ ಪತ್ರಕ್ಕೆ 30 ವರ್ಷಗಳಾಗಿವೆ. ಕ್ರಯಪತ್ರದ ಬಳಿಕ ಅರ್ಜಿದಾರರಿಗೆ ಖಾತಾ ವರ್ಗಾವಣೆ ಮಾಡಿಕೊಡಲಾಗಿದೆ. ಇದಕ್ಕೆ ತೆರಿಗೆ ಪಾವತಿಸಿರುವ ರಸೀದಿಗಳನ್ನೂ ಅರ್ಜಿದಾರರು ಹೊಂದಿದ್ದಾರೆ. ಆನಂತರ ಈ ನಿವೇಶನಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದು, ಸಾಕಷ್ಟು ಹಣ ವೆಚ್ಚ ಮಾಡಿ ಅರ್ಜಿದಾರರು ಕಟ್ಟಡ ನಿರ್ಮಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಸಂವಿಧಾನದ ಪರಿಚ್ಛೇದ 300ಎ ಅಡಿಯಲ್ಲಿಆಸ್ತಿಯ ಹಕ್ಕುಗಳನ್ನು ಖಾತ್ರಿಪಡಿಸಲಾಗಿದೆ. ನಮ್ಮದು ಕಲ್ಯಾಣ ರಾಜ್ಯದ ಆಳ್ವಿಕೆ ಒಳಪಟ್ಟಿದೆಯೇ ಹೊರತು ಈಸ್ಟ್ ಇಂಡಿಯಾ ಕಂಪನಿ ಆಡಳಿತಕ್ಕೆ ಒಳಪಟ್ಟಿಲ್ಲ. ಆದ್ದರಿಂದ , ಪ್ರಕರಣದಲ್ಲಿಬಿಡಿಎ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಏನಿದು ಪ್ರಕರಣ?; ಶ್ರೀ ರಾಧಾಕೃಷ್ಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಭಿವೃದ್ಧಿಪಡಿಸಿರುವ ಖಾಸಗಿ ಬಡಾವಣೆಯನ್ನು 1973ರ ಅ.24ರಂದೇ ಅಂದರೆ ಬಿಡಿಎ ಕಾಯ್ದೆ-1976 ಜಾರಿಗೆ ಬರುವ ಮೊದಲೇ ಕಟ್ಟಡ ನಿರ್ಮಾಣ ಕ್ಷೇತ್ರದ ತರಬೇತಿ ಮಂಡಳಿ (ಸಿಐಟಿಬಿ) ಅನುಮೋದಿಸಿದೆ.
ಒಪ್ಪಿಗೆ ನೀಡಲಾಗಿದ್ದ ಲೇಔಟ್ ಮಧ್ಯದಲ್ಲಿಅರ್ಜಿದಾರರ ನಿವೇಶನಗಳಾದ 86 ಮತ್ತು 86ಎ ಇವೆ. ಬಿಡಿಎ ಕಾಯ್ದೆ-1976 ಜಾರಿಗೆ ಬರುವ ಮೊದಲೇ ಅಭಿವೃದ್ಧಿಪಡಿಸಲಾದ ಲೇಔಟ್ನಲ್ಲಿರುವ ಅರ್ಜಿದಾರರ ಅರ್ಜಿದಾರರ ನಿವೇಶಗಳನ್ನು ಸಿಎ ನಿವೇಶನ ಎಂದು 2013ರ ಜೂ.20ರಂದು ಬಿಡಿಎ ಆಯುಕ್ತರು ಆದೇಶಿಸಿದ್ದಾರೆ. ಇದನ್ನು ಒಪ್ಪಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಲೇಔಟ್ ಯೋಜನೆಗೆ ಒಪ್ಪಿಗೆ ನೀಡಿರುವ ಬಗ್ಗೆ ಆಕ್ಷೇಪಣೆಯಲ್ಲಿ ಬಿಡಿಎ ಸೊಲ್ಲೆತ್ತಿಲ್ಲ. ತನಿಖೆ ನಡೆಸಲಾಗಿದೆಯೇ ಎಂಬುದರ ಬಗ್ಗೆ ಪ್ರಮಾಣಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ, ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.












Click it and Unblock the Notifications