ಒರಾಯನ್, ಗೋಪಾಲನ್ ಮಾಲ್ನಿಂದ ರಾಜಾಕಾಲುವೆ ಒತ್ತುವರಿ
ಬೆಂಗಳೂರು, ಆಗಸ್ಟ್ 23 : ರಾಜ ಕಾಲುವೆ ಒತ್ತುವರಿ ವಿಚಾರದಲ್ಲಿ ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಅವರು ಮೌನ ಮುರಿದಿದ್ದಾರೆ. 'ಒರಾಯನ್ ಮತ್ತು ಗೋಪಾಲನ್ ಮಾಲ್ಗಳಿಂದ ಸಹ ರಾಜ ಕಾಲುವೆ ಒತ್ತುವರಿಯಾಗಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ಮರು ಸರ್ವೇಗೆ ಆದೇಶ ನೀಡಲಾಗಿದೆ' ಎಂದು ಅವರು ಹೇಳಿದ್ದಾರೆ.
ಸೋಮವಾರ ಸಂಜೆ ರಾಜ ಕಾಲುವೆ ಒತ್ತುವರಿ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಮೇಯರ್, 'ರಾಜಾಜಿನಗರದ ಒರಾಯನ್ ಹಾಗೂ ಮೈಸೂರು ರಸ್ತೆಯ ಗೋಪಾಲನ್ ಮಾಲ್ಗಳಿಂದ ಕೂಡ ರಾಜಕಾಲುವೆ ಒತ್ತುವರಿಯಾಗಿದೆ' ಎಂದರು.['ಜೆ.ಪಿ.ನಗರವೋ ಮತ್ತೊಂದು ನಗರವೋ ಒತ್ತುವರಿ ತೆರವು ಖಚಿತ']

'ರಾಜ ಕಾಲುವೆ ಮೇಲೆ ಒರಾಯನ್ ಮಾಲ್ ನಿರ್ಮಾಣಕ್ಕಾಗಿ ಕಟ್ಟಡ ನಕ್ಷೆ ಮಂಜೂರು ಮಾಡಿದ್ದಕ್ಕೆ ಹಿಂದಿನ ಆಯುಕ್ತರಾಗಿದ್ದ ಸಿದ್ದಯ್ಯ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕಟ್ಟಡ ನಿರ್ಮಾಣವಾಗಿದೆ' ಎಂದು ಹೇಳಿದರು.[ಒತ್ತುವರಿ ತೆರವಿಗೆ ತೊಂದರೆ ಇಲ್ಲ ಎಂದ ದರ್ಶನ್]
'ಬಡ ಕುಟುಂಬಗಳ ಮನೆಗಳನ್ನು ಮಾತ್ರ ತೆರವುಮಾಡಲಾಗುತ್ತಿದೆ. ದೊಡ್ಡ ಕಟ್ಟಡಗಳನ್ನು ಹಾಗೇ ಬಿಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ರಾಜ ಕಾಲುವೆ ಮೇಲಿರುವ ದೊಡ್ಡ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ' ಎಂದು ತಿಳಿಸಿದರು.[ಮಾನ್ಯತಾ ಟೆಕ್ ಪಾರ್ಕ್ ಮೇಲೆ ಬಿಬಿಎಂಪಿ ಕಣ್ಣು]
'ಒರಾಯನ್, ಗೋಪಾಲನ್ ಮಾಲ್ ಮಾತ್ರವಲ್ಲ ಎಸ್.ಎಸ್. ಆಸ್ಪತ್ರೆ ಕಟ್ಟಡ ಹಾಗೂ ನಟ ದರ್ಶನ್ ಅವರ ಮನೆ ಸಹ ರಾಜ ಕಾಲುವೆ ವ್ಯಾಪ್ತಿಯಲ್ಲಿದೆ ಎಂಬ ಮಾಹಿತಿ ಇದೆ. ಈ ಕಟ್ಟಡಗಳು ಇರುವ ಪ್ರದೇಶದಲ್ಲಿ ಮರು ಸರ್ವೇ ಮಾಡಬೇಕು ಎಂಬ ಆದೇಶ ನೀಡಲಾಗಿದೆ. ಸರ್ವೇ ವರದಿಗಾಗಿ ಕಾಯುತ್ತಿದ್ದೇವೆ' ಎಂದರು.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ ಸೈಟ್ ನಲ್ಲಿ ಲಭ್ಯ]
30 ಸರ್ವೇಯರ್ಗಳು ವಾಪಸ್ : ಹಿಂದೆ ರಾಜ ಕಾಲುವೆ ಸರ್ವೇ ಮಾಡಿದ್ದ 30 ಸರ್ವೇಯರ್ಗಲು ಬೇರೆಡೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಅವರು ವಾಪಸ್ ಬಂದರೆ ಒತ್ತುವರಿ ತೆರವು ಕಾರ್ಯ ಸುಲಭವಾಗಲಿದೆ ಎಂದು ಬಿಬಿಎಂಪಿ ನಿರ್ಧರಿಸಿದ್ದು, ಅವರನ್ನು ವಾಪಸ್ ಕರೆಸಲು ನಿರ್ಧರಿಸಿದೆ.
ವಿವಿಧ ಜಿಲ್ಲೆಗಳಲ್ಲಿರುವ ಅವರು ಬೆಂಗಳೂರಿಗೆ ಬರಲಿದ್ದು ಸರ್ವೇ ಕಾರ್ಯ ಮುಗಿಯುವ ತನಕ ಇಲ್ಲೇ ನೆಲೆಸಲಿದ್ದಾರೆ.
ಈಗ ಒತ್ತುವರಿ ತೆರವು ಮಾಡಿದ ಪ್ರದೇಶಗಳಲ್ಲಿ ರಾಜಕಾಲುವೆ ನಿರ್ಮಾಣ ಕಾರ್ಯ ತಕ್ಷಣ ಆರಂಭವಾಗಲಿದೆ. ಬಾಕಿ ಇರುವ ಪ್ರದೇಶದಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಲಿದೆ.












Click it and Unblock the Notifications