ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ ಯಾಕೆ: ಕಾರಣ ಇಲ್ಲಿದೆ
ಬೆಂಗಳೂರು, ಆಗಸ್ಟ್ 30: ಈ ಬಾರಿ ಅತೀವೃಷ್ಟಿ ಹಾನಿ ಜೊತೆಗೆ ಸಾಲು ಸಾಲು ಹಬ್ಬಗಳು ಆರಂಭವಾದ ಕಾರಣ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆಯೂ ದುಬಾರಿಯಾಗಿದ್ದು, ಈರುಳ್ಳಿ ಬೆಲೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮಳೆ ಹೆಚ್ಚಳದ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದ್ದು, ಬೆಲೆ ಗಗನಕ್ಕೇರಿದೆ.
ಕರ್ನಾಟಕದಲ್ಲಿ ಈರುಳ್ಳಿ ಉತ್ಪಾದನೆ ಕುಗ್ಗಿದ್ದು ಅಗತ್ಯದಷ್ಟು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನೆರೆಯ ರಾಜ್ಯವಾದ ಮಹಾರಾಷ್ಟ್ರದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದ್ದು, ಸಾಗಾಟ ವೆಚ್ಚವೂ ಸೇರಿ ಈರುಳ್ಳಿ ದರ ಮತ್ತಷ್ಟು ದುಬಾರಿಯಾಗಿದೆ. ಸದ್ಯ ಒಂದು ಕೆಜಿ ಈರುಳ್ಳಿಯ ಬೆಲೆ 60-70 ರೂಪಾಯಿ ಯಿದ್ದು, ಸಗಟು ದರ ಕ್ವಿಂಟಲ್ಗೆ ಕನಿಷ್ಠ 2 ಸಾವಿರದಿಂದ ಗರಿಷ್ಠ 4,500 ರೂಪಾಯಿ ಇದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 55 ರಿಂದ 60 ರೂಪಾಯಿಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.

ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಉತ್ತರ ಕರ್ನಾಟಕದಿಂದ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಸದ್ಯ ಉತ್ತರ ಕರ್ನಾಟಕದ ಮಾರುಕಟ್ಟೆಗಳಲ್ಲಿಯೂ ಕೂಡ ಈರುಳ್ಳಿ ಲಭ್ಯವಿಲ್ಲದೇ ದರ ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ ವಿವಿಧ ಸಂತೆಗಳಲ್ಲಿ ಈರುಳ್ಳಿಯನ್ನು ಕನಿಷ್ಠ 50 ರಿಂದ ಗರಿಷ್ಠ 80 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಈರುಳ್ಳಿಗೆ ಕೆಜಿಗೆ 40 ರಿಂದ 50 ರೂಪಾಯಿ ಇರುತ್ತದೆ. ಆದರೆ ಇದೀಗ ದಿಢೀರ್ ಬೆಲೆ ದುಪ್ಪಟ್ಟು ಆಗಿದೆ. ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈರುಳ್ಳಿ ಬೆಳೆ ಕಡಿಮೆ ಇರುತ್ತದೆ. ಈ ವೇಳೆ ಹಬ್ಬ ಹರಿದಿನಗಳು ಹೆಚ್ಚಿಗೆ ಇರುವುದರಿಂದ ಬೇಡಿಕೆ ಕೂಡ ಹೆಚ್ಚಿಗೆ ಇರುತ್ತದೆ. ಹೀಗಾಗಿ, ಸಣ್ಣಪುಟ್ಟ ವ್ಯಾಪಾರಸ್ಥರು ಮಾಮೂಲಿ ದರಕ್ಕಿಂತ ಸ್ವಲ್ಪ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ.
ಹೊಸ ಫಸಲು ಕಟಾವಿಗೆ ಬರಲು ಇನ್ನೂ ಎರಡು ತಿಂಗಳು ಇರುವ ಕಾರಣ ಇನ್ನೂ ಕೆಲ ದಿನಗಳು ಈರುಳ್ಳಿ ಕೆ.ಜಿಗೆ 80 ರಿಂದ 90 ರೂಪಾಯಿವರೆಗೂ ಏರಬಹುದು ಎಂದು ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರು ತಿಳಿಸಿದ್ದಾರೆ. ಹೀಗಾಗಿ ಗಣೇಶ ಹಬ್ಬದ ಸಮಯದಲ್ಲಿ ಈರುಳ್ಳಿಯ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications