'ಪಿಒಪಿ ಗಣಪತಿ ಮೂರ್ತಿ ಮಾರಾಟಕ್ಕೆ ಮೌಖಿಕ ಒಪ್ಪಿಗೆ ನೀಡಿದ್ದಾರೆ'
ಬೆಂಗಳೂರು, ಆಗಸ್ಟ್ 23: ಗಣೇಶ ಚತುರ್ಥಿ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಮೊದಲ ಬದಲಾವಣೆ ಕಾಣಿಸುವುದು ಇಲ್ಲಿನ ಜೆಸಿ ರಸ್ತೆಯಲ್ಲಿ. ಗಣೇಶನ ಮೂರ್ತಿ ತಯಾರಕರು ಚತುರ್ಥಿಗೆ ಎರಡು ತಿಂಗಳ ಮೊದಲೇ ಭಾರೀ ಗಾತ್ರದ ಗಣೇಶನ ಮೂರ್ತಿಗಳನ್ನು ತಯಾರಿಸಿ ರಸ್ತೆ ಅಕ್ಕಪಕ್ಕದಲ್ಲೆಲ್ಲಾ ಜೋಡಿಸಿಡುತ್ತಾರೆ.
ಹಬ್ಬದ ಸೀಸನ್ ಬಸ್ ದರ: ಖಾಸಗಿ ಬಸ್ಸುಗಳ ಜೊತೆ KSRTC ಪೈಪೋಟಿ
ಆದರೆ, ಇನ್ನು ಮುಂದೆ ಈ ರೀತಿಯ ಭಾರೀ ಗಣೇಶನ ವಿಗ್ರಹಗಳನ್ನು ಇಲ್ಲಿ ನೋಡಲು ಸಾಧ್ಯವಿಲ್ಲ. ಕಾರಣ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳನ್ನು ಸರಕಾರ ನಿಷೇಧಿಸಿದೆ.
In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ
"ಎರಡು ವರ್ಷಗಳ ಹಿಂದೆ ತಯಾರಿಸಿದ ಮೂರ್ತಿಗಳನ್ನು ಮಾತ್ರ ಮಾರುತ್ತಿದ್ದೇವೆ. ಈಗ ಹೊಸದಾಗಿ ನಾವು ಪಿಒಪಿ ಮೂರ್ತಿಗಳನ್ನು ತಯಾರಿಸುತ್ತಿಲ್ಲ. ಪಿಒಪಿ ಮೂರ್ತಿಗಳನ್ನು ನಿಷೇಧಿಸಿದ್ದರಿಂದ ಇನ್ನು ಮುಂದೆ ಭಾರೀ ಗಣೇಶನ ವಿಗ್ರಹಗಳನ್ನು ತಯಾರಿಸಲು ಸಾಧ್ಯವಿಲ್ಲ," ಎನ್ನುತ್ತಾರೆ ಗಣೇಶನ ವಿಗ್ರಹ ತಯಾರಕರಾದ ಶ್ರೀನಿವಾಸ್.
ಬೆಂಗಳೂರು ಉತ್ಸವಗಳಲ್ಲಿ ಕನ್ನಡಿಗರ ಅವಗಣನೆ ಅನವರತ
"ಎರಡು ವರ್ಷಗಳ ಹಿಂದಿನ ಮೂರ್ತಿಗಳನ್ನು ಮಾತ್ರ ಮಾರುತ್ತೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯವರ ಬಳಿ ಹೇಳಿದ್ದೇವೆ. ಅವರು ಬಾಯಿ ಮಾತಿನಲ್ಲಿ ಆಯ್ತು ಎಂದಿದ್ದಾರೆ. ಲಿಖಿತವಾಗಿ ಮಾರಾಟ ಮಾಡಲು ಅನುಮತಿ ಕೊಟ್ಟಿಲ್ಲ. ಕಳೆದ ಬಾರಿ ಕಾವೇರಿ ಗಲಾಟೆಯಿಂದ ನಮ್ಮಲ್ಲಿ 15 ಸಾವಿರ ಮೂರ್ತಿಗಳು ಹೆಚ್ಚಾಗಿ ಉಳಿದು ಬಿಟ್ಟಿತು," ಎನ್ನುತ್ತಾರೆ ಅವರು.
50- 15 ಸಾವಿರದವರೆಗೆ ದರ
"ನಮ್ಮಲ್ಲಿ ಸಣ್ಣ ಮೂರ್ತಿಗಳಿಂದ ಹಿಡಿದ 15 ಅಡಿಯ ಮೂರ್ತಿಗಳವರೆಗಿನ ಮೂರ್ತಿಗಳು ಇವೆ. ಮನೆಯಲ್ಲಿ ಪೂಜಿಸುವ ಮೂರ್ತಿಗಳು 50 ರೂ. ನಿಂದ 800 ರೂಪಾಯಿವರೆಗೆ ಬರುತ್ತವೆ. ಇವೆಲ್ಲಾ ಮಣ್ಣಿನ ಮೂರ್ತಿಗಳು. ಇನ್ನು ಸಾರ್ವಜನಿಕವಾಗಿ ಪೂಜಿಸುವ 8 ಅಡಿಯ ಮಣ್ಣಿನ ಗಣಪತಿಗಳೂ ಇವೆ. ಇವುಗಳ ದರ 15,000 ರೂಪಾಯಿವರೆಗೂ ಇದೆ. ಇವೆಲ್ಲಾ ಪರಿಸರ ಗಣಪತಿಗಳು," ಎನ್ನುತ್ತಾರೆ ಶ್ರೀನಿವಾಸ್.
ಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿ
ಮಣ್ಣಿನ ಮೂರ್ತಿಗಳಿಗೆ ಕುದುರಿದ ಬೇಡಿಕೆ
"72 ವರ್ಷಗಳಿಂದ ನಾವು ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದೇವೆ. ನಾವೆಲ್ಲಾ ಹಿಂದೆಯೂ ಮಣ್ಣಿನ ಗಣಪತಿಗಳನ್ನು ಮಾಡುತ್ತಿದ್ದೆವು. ಆದರೆ ಯಾವಾಗ ಫ್ಯಾನ್ಸಿ ಗಣಪತಿಗಳು ಬಂತೋ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಕಡಿಮೆಯಾಯಿತು. ಇದೀಗ ಸರಕಾರ ನಿಷೇಧ ಹೇರಿರುವುದರಿಂದ ಮತ್ತೆ ಮಣ್ಣಿನ ಗಣೇಶನ ಮೂರ್ತಿಗಳನ್ನು ಮಾಡುತ್ತಿದ್ದೇವೆ," ಎನ್ನುತ್ತಾರೆ ಅವರು.
ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ
ಕೆರೆಗೆ ಬಿಡಬೇಡಿ ಇಲ್ಲಿ ತನ್ನಿ
"ಪಿಒಪಿ ಗಣಪತಿಗಳ ಬಗ್ಗೆ ಜನಕ್ಕೆ ಭಯ ಮೂಡಿಸಿದ್ದಾರೆ. ಹೀಗಾಗಿ ಕೊಳ್ಳಲು ಜನರು ಹಿಂದೇಟು ಹಾಕುತ್ತಾರೆ. ಇದಕ್ಕಾಗಿ ಗಣಪತಿ ಬಿಡಲು ನಾವೇ ವ್ಯವಸ್ಥೆ ಮಾಡಿಕೊಂಡಿದ್ದೇವೆ. ದೊಡ್ಡ ದೊಡ್ಡ ನೀರಿನ ಟ್ಯಾಂಕ್ ಗಳನ್ನು ಇಲ್ಲಿ ಇಟ್ಟಿದ್ದೇವೆ. ಜನರು ಬಂದು 1-5 ಅಡಿಯ ಗಣಪತಿಗಳನ್ನು ಇಲ್ಲಿ ಬಿಡಬಹುದು. ಎಷ್ಟೇ ಗಣಪತಿ ಬಿಟ್ಟರೂ ಅವುಗಳ ವಿಲೇವಾರಿಗೆ ನಾವು ವ್ಯವಸ್ಥೆ ಮಾಡಿದ್ದೇವೆ," ಎಂದು ವಿಶ್ವಾಸದಿಂದ ನುಡಿಯುತ್ತಾರೆ ಶ್ರೀನಿವಾಸ್.
ಕನ್ನಡದ ಗಂಧಗಾಳಿಯಿಲ್ಲದ ಗಣೇಶೋತ್ಸವ ಯಾರಿಗೆ ಬೇಕು?
ಮಣ್ಣಿನ ಮರುಬಳಕೆ
ನಾವು ಟ್ಯಾಂಕ್ ನಲ್ಲಿ ಬಿಟ್ಟ ಗಣಪತಿಗಳಿಂದ ಪರಿಸರ ಮಾಲಿನ್ಯ ಮಾಡುವುದಿಲ್ಲ. ಅದನ್ನು ಪುಡಿ ಮಾಡಿ ಮತ್ತೆ ಬಳಸುತ್ತೇವೆ ಎನ್ನುತ್ತಾರೆ ಶ್ರೀನಿವಾಸ್.
"ಇನ್ನು ಪಿಒಪಿಯಿಂದ ಪರಿಸರ ಮಾಲಿನ್ಯ ಆಗುತ್ತದೆ ಎನ್ನುವುದು ಸುಳ್ಳು. ಪರಿಸರ ಮಾಲಿನ್ಯ ಆಗುವುದಿಲ್ಲ. ಹಾಗೆ ನೋಡಿದರೆ ಆವೆ ಮಣ್ಣು ಕೆರೆಯ ತಳದಲ್ಲಿ ಸಂಗ್ರವಾಗುತ್ತದೆ. ಇದನ್ನು ಯಾರೂ ತೆಗೆಯುವುದಿಲ್ಲ. ಮಕ್ಕಳು ಆಡಲು ಹೋಗಿ ಈ ಆವೆ ಮಣ್ಣು ಹಿಡಿದುಕೊಳ್ಳುತ್ತದೆ. ಮಕ್ಕಳು ಸಾಯುತ್ತಾರೆ," ಎಂದು ವಾದಿಸುತ್ತಾರೆ ಅವರು.
100 ಕೆರೆ ತೆಗೆಸುತ್ತೇನೆ
"ಮುಂದಿನ ವರ್ಷ ಸರಕಾರ ಅನುಮತಿ ನೀಡದರೆ ನಾನು 100 ಕೆರೆ ತೆಗೆಯಲು ಸಿದ್ಧವಿದ್ದೇನೆ. ನಮಗೆ ದಾನಿಗಳಿದ್ದಾರೆ. ಸರಕಾರಿ ಜಾಗ ನೀಡಿದರೆ 5 ಹಳ್ಳಿಗಳಿರುವ ಗ್ರಾಮಕ್ಕೊಂದರಂತೆ 100 ಕೆರೆಗಳನ್ನು ನಿರ್ಮಿಸುತ್ತೇನೆ. ಇದರಲ್ಲಿ ಗಣಪತಿ ಬಿಡಬಹುದು. ಯಾವ ಪರಿಸರ ಮಾಲಿನ್ಯವೂ ಆಗುವುದಿಲ್ಲ," ಎಂದು ತಮ್ಮ ಯೋಜನೆಯನ್ನು ಮುಂದಿಡುತ್ತಾರೆ ಶ್ರೀನಿವಾಸ್.
ಜೇಡಿ ಮಣ್ಣಿನ ಸಮಸ್ಯೆ
ಈ ಸಂದರ್ಭದಲ್ಲಿ ಅವರು ಜೇಡಿ ಮಣ್ಣಿನ ಸಮಸ್ಯೆ ಬಗ್ಗೆಯೂ ಗಮನ ಸೆಳೆಯುತ್ತಾರೆ. ನಾವು ಹಿಂದೆ ಕೆರೆಗಳಿಂದ ಜೇಡಿ ಮಣ್ಣು ಸಂಗ್ರಹಿಸುತ್ತಿದ್ದೆವು. ಆದರೆ ಈಗ ಕೆರೆಗಳೇ ಇಲ್ಲ. ಮಣ್ಣು ಸಂಗ್ರಹಿಸುವುದೂ ಕಷ್ಟವಾಗಿದೆ. ಆರು ತಿಂಗಳ ಮೊದಲೇ ಪರಿಸರ ಇಲಾಖೆ ಬಳಿ ಮಣ್ಣು ಸಂಗ್ರಹಿಸಲು ಅನುಮತಿಗಾಗಿ ಬೇಡಿಕೆ ಇಡುತ್ತೇವೆ. ಅದಕ್ಕೂ ಅಲೆದಾಡಿಸುತ್ತಾರೆ. ಇಲ್ಲಿ ಮೂರ್ತಿಗಳನ್ನು ಸಂಗ್ರಹಿಸಿ ಇಡುವುದಕ್ಕೂ ಕಷ್ಟ. ಮಳೆ ಬಂದರೆ ಮೂರ್ತಿಗಳಿಗೆ ತೊಂದರೆಯಾಗುತ್ತದೆ," ಎನ್ನುತ್ತಾರೆ ಮೂರ್ತಿಗಳನ್ನು ಮಾರಾಟ ಮಾಡುತ್ತಾ ಬಂದಿರುವ ಶ್ರೀನಿವಾಸ್.
ಅಮೆರಿಕಾಗೂ ಹೋಗ್ತಾನೆ ಗಣೇಶ
"ನಾವು ತಯಾರಿಸಿದ ಗಣೇಶನ ಮೂರ್ತಿ ಅಮೆರಿಕಾದ ನ್ಯೂಯಾರ್ಕ್, ವಾಷಿಂಗ್ಟನ್, ಆಸ್ಟ್ರೇಲಿಯಾಗಳಿಗೆಲ್ಲಾ ಹೋಗುತ್ತದೆ. ಬೆಂಗಳೂರಿನಿಂದ ಮೂಡಿಗೆರೆ ತನಕ ನಾವು ಮೂರ್ತಿ ತಲುಪಿಸುತ್ತೇವೆ. ವಿದೇಶಗಳಿಗಾದರೆ ನಾಲ್ಕು ತಿಂಗಳ ಮೊದಲೇ ಕಳುಹಿಸಿ ಕೊಡುತ್ತೇವೆ. ಅಲ್ಲಿ ತಲುಪಿದಾಗ ಜನರು ಮೂರ್ತಿ ಸಿಕ್ಕಿತು ಎಂದು ಸಂಭ್ರಮದಿಂದ ಹೇಳುತ್ತಾರೆ. ಅದೇ ನಮ್ಮ ಪಾಲಿನ ಪ್ರಶಸ್ತಿ," ಎನ್ನುತ್ತಾರೆ ಶ್ರೀನಿವಾಸ್.
ತರಹೇವಾರಿ ಗಣೇಶನ ಮೂರ್ತಿಗಳು
ಇಲ್ಲಿ ತರಹೇವಾರಿ ಗಣೇಶನ ಮೂರ್ತಿಗಳಿವೆ. ಪಾರ್ವತಿ ಜತೆಗಿರುವ ಗಣೇಶ, ಮಣ್ಣಿನ ಮೂರ್ತಿ, ಪಿಒಪಿ ಮೂರ್ತಿ, ಸಣ್ಣದು ದೊಡ್ಡದು, ಗೌರಿಯ ಮೂರ್ತಿ ಸೇರಿದಂತೆ ಹಲವಾರು ಗಣೇಶನ ಮೂರ್ತಿಗಳು ಇಲ್ಲಿವೆ.
ಮುಗಿ ಬಿದ್ದ ಜನ
ಗಣೇಶನ ಮೂರ್ತಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು. ಗುರುವಾರ ಗೌರಿ-ಗಣೇಶನ ಹಬ್ಬ ಆರಂಭವಾಗಲಿರುವುದರಿಂದ ಕೊನೆಯ ದಿನ ಮೂರ್ತಿ ಖರೀದಿಗೆ ಭಾರಿ ಜನ ಸಮುದಾಯವೇ ಮಾವಳ್ಳಿ ಸುತ್ತ ಮುತ್ತಾ ನೆರೆದಿತ್ತು. ಇದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಕಂಡು ಬಂತು. ಕೊನೆಗೆ ಟ್ರಾಫಿಕ್ ಪೊಲೀಸರು ರಸ್ತೆ ಬದಿಯ ವಾಹನಗಳನ್ನು ತೆರವುಗೊಳಿಸಿ ಟ್ರಾಫಿಕ್ ಸುಗಮಗೊಳಿಸಿದರು.
ಗಾಂಧಿ ಬಜಾರಲ್ಲೂ ಜನವೋ ಜನ
ಅತ್ತ ಬೆಂಗಳೂರಿನ ಪ್ರಮುಖ ಮಾರುಕಟ್ಟೆ ಗಾಂಧಿ ಬಜಾರಲ್ಲೂ ಜನ ಜಾತ್ರೆಯೇ ನರೆದಿತ್ತು. ಬಾಳೆ ಗಿಡ, ಹೂವು, ಮಾವಿನ ತಳಿರು ತೋರಣ, ಹೂವು ಮೊದಲಾದ ಪೂಜಾ ಸಾಮಾಗ್ರಿಗಳನ್ನು ಖರೀದಿಸಲು ತಂಡೋಪತಂಡವಾಗಿ ಜನ ಆಗಮಿಸುತ್ತಲೇ ಇದ್ದರು.
ವ್ಯಾಪಾರ ಕುಸಿತ
"ಮೊನ್ನೆಯಷ್ಟೇ ವರಮಹಾಲಕ್ಷ್ಮೀ ಹಬ್ಬ ಬಂದಿದ್ದರಿಂದ ಈ ಬಾರಿ ಜನ ಹೆಚ್ಚು ಹಣ ಬಿಚ್ಚುತ್ತಿಲ್ಲ. ಜತೆಗೆ ಹೂವು, ಹಣ್ಣು, ಬಾಳೆದಿಂಡಿನ ದರಗಳೂ ಹೆಚ್ಚಾಗಿವೆ. ಹೀಗಾಗಿ ಜನ ಸ್ವಲ್ಪ ಖರೀದಿಯಿಂದ ದೂರ ಉಳಿದಿದ್ದಾರೆ," ಎನ್ನುತ್ತಾರೆ ಗಾಂಧಿ ಬಜಾರಿನ ಹೂವಿನ ವ್ಯಾಪಾರಿ ತಿಮ್ಮಯ್ಯ.
"ಮಲ್ಲಿಗೆ ದರ ಕೆಜಿಗೆ 1500 ರೂಪಾಯಿ ಇದೆ. ಸೇವಂತಿಗೆ 300 ರೂಪಾಯಿ ಇದೆ. ಬಾಳೆ ದಿಂಡು 50 ರೂಪಾಯಿಯಿಂದ 200 ರೂಪಾಯಿವರೆಗೂ ಇದೆ. 100 ಗ್ರಾಂ ಹೂವಿಗೆ 20 ರೂಪಾಯಿ ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತೇವೆ," ಎನ್ನುತ್ತಾರೆ ಅವರು.