ಬೆಂಗಳೂರು: ಸಕ್ರಿಯ ಪ್ರಕರಣ 25,370, ಆಸ್ಪತ್ರೆಯಲ್ಲಿ ಇರುವವರು 1,025
ಬೆಂಗಳೂರು, ಜ 8: ಕರ್ನಾಟಕದಲ್ಲಿ ಹೊಸ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ. ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 30,113 ಇದರಲ್ಲಿ ಬೆಂಗಳೂರಿನ ಪಾಲು 25,370. ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತಕ್ಕಿಂತಲೂ ಕಮ್ಮಿಯಿದೆ.
ಕೊರೊನಾ ಚೈನ್ ಅನ್ನು ಬ್ರೇಕ್ ಮಾಡಲು ಸರಕಾರ ವೀಕೆಂಡ್ ಕರ್ಫ್ಯೂವನ್ನು ಜಾರಿಗೆ ತಂದಿದೆ, ಸೋಂಕಿನ ಪ್ರಮಾಣ ಏನೇನೂ ಇಲ್ಲದ ಜಿಲ್ಲೆಗಳಲ್ಲೂ ಕರ್ಫ್ಯೂ ಜಾರಿಗೆ ತಂದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇವೆಲ್ಲದರ ನಡುವೆ ಆರೋಗ್ಯ ಸಚಿವರ ನೀಡಿರುವ ಹೇಳಿಕೆ ಮುಂದಿನ ದಿನಗಳಲ್ಲಿ ನಿರ್ಬಂಧದಲ್ಲಿ ಸಡಿಲಿಕೆಯ ಮುನ್ಸೂಚನೆಯಂತಿದೆ.
ಓಮಿಕ್ರಾನ್ ಕೇಸುಗಳು ಹೆಚ್ಚಾಗುತ್ತಿದ್ದರೂ ಹೊರ ರೋಗಿ ವಿಭಾಗದಿಂದಲೇ ಗುಣಮುಖರಾಗಬಹುದು ಎನ್ನುವ ಹೇಳಿಕೆಯನ್ನು ವೈದ್ಯಲೋಕ ಹೇಳಿರುವುದರಿಂದ, ಜನರು ಸರಕಾರದ ನಿರ್ಬಂಧಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೆಲವೊಂದು ಸಡಿಲಿಕೆಯನ್ನು ಶುಕ್ರವಾರ (ಜ 7) ಸಂಜೆ ಸರಕಾರ ಪ್ರಕಟಿಸಿತ್ತು. ಪ್ರವಾಸ ಮಾಡುವವರಿಗೆ ಕೆಲವೊಂದು ನಿರಾಳತೆಯನ್ನು ಸರಕಾರ ನೀಡಿತ್ತು.
ಲಾಕ್ಡೌನ್ ವಿಚಾರದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿರುವ ಹೇಳಿಕೆ ಜನರಿಗೆ ತುಸು ನೆಮ್ಮದಿಯನ್ನು ತಂದಿದೆ. ಜೊತೆಗೆ, ಸಚಿವರು ಬೆಂಗಳೂರಿನ ಕೇಸುಗಳ ಅಂಕಿಅಂಶದ ಜೊತೆಗೆ ಸಾರ್ವಜನಿಕರಿಗೆ ಭಯ ಬೇಡ ಎನ್ನುವ ಮಾತನ್ನೂ ಹೇಳಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗುವುದು
ಸರಕಾರದ ವೀಕೆಂಡ್ ಕರ್ಫ್ಯೂಗೆ ಎಲ್ಲಾ ವಲಯದಿಂದ ಆಕ್ರೋಶ ವ್ಯಕ್ತವಾಗಿತ್ತು, ಬೊಮ್ಮಾಯಿ ಸರಕಾರದ ಸಚಿವರೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಮುಂದಿನ ವಾರದ ವೀಕೆಂಡ್ ಕರ್ಫ್ಯೂ ವೇಳೆ ಇನ್ನಷ್ಟು ಕ್ಷೇತ್ರಗಳು ನಿರ್ಬಂಧದಿಂದ ಹೊರ ಬರುವ ಸಾಧ್ಯತೆಯಿದೆ. "ಹಲವು ವಲಯದವರು ಕರ್ಫ್ಯೂ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಅವರೆಲ್ಲರ ಕಷ್ಟದ ಬಗ್ಗೆ ನಮಗೆ ಅರಿವಿದೆ, ಮುಂದಿನ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ವಿಸ್ಕೃತವಾಗಿ ಚರ್ಚಿಸಲಾಗುವುದು"ಎಂದು ಬೊಮ್ಮಾಯಿ ಭರವಸೆಯನ್ನು ನೀಡಿದ್ದಾರೆ.

ಖ್ಯಾತ ವೈದ್ಯ ಡಾ.ರಾಜು ಕೃಷ್ಣಮೂರ್ತಿ
ಬೆಂಗಳೂರಿನಲ್ಲಿ 25,370 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಒಂದೇ ದಿನ 6,812 ಕೇಸುಗಳು ದಾಖಲಾಗಿದ್ದವು ಮತ್ತು ಮೂವರು ಮೃತ ಪಟ್ಟಿದ್ದರು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣಗಳಿದ್ದರೂ, ಆಸ್ಪತ್ರೆಯಲ್ಲಿ ದಾಖಲಾಗಿರುವವರ ಸಂಖ್ಯೆ 1,025. ಹಾಗಾಗಿ, ಇದರ ತೀವ್ರತೆಯನ್ನು ಇದರಿಂದ ತಿಳಿಯಬಹುದಾಗಿದೆ. ಖ್ಯಾತ ವೈದ್ಯ ಡಾ.ರಾಜು ಕೃಷ್ಣಮೂರ್ತಿಯವರೂ ಓಮಿಕ್ರಾನ್ ವೈರಸ್ ಮಾರಣಾಂತಿಕವಲ್ಲ ಎಂದು ಹೇಳಿದ್ದರು.

ಸೋಂಕಿಗೆ ಒಳಗಾದ ಶೇ. 96ರಷ್ಟು ಜನರಿಗೆ ಅತಿಸಣ್ಣ ಲಕ್ಷಣ
ಪ್ರತಿದಿನ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿರುವುದು ನಿಟ್ಟುಸಿರು ಬಿಡುವಂತಹ ವಿಚಾರ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ. 4.15 ಇದ್ದರೆ, ಮೃತ ಪಡುತ್ತಿರುವವರ ಪ್ರಮಾಣ ಶೇ. 0.04. ಸೋಂಕಿಗೆ ಒಳಗಾದ ಶೇ. 96ರಷ್ಟು ಜನರಿಗೆ ಅತಿಸಣ್ಣ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ವೈದ್ಯರು ಕೂಡಾ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಇದರಿಂದಾಗಿ, ಮೂರನೇ ಅಲೆಯ ತೀವ್ರತೆ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ.

ಇನ್ನು ಮುಂದೆ ಸಂಪೂರ್ಣ ಲಾಕ್ಡೌನ್ ಮಾಡುವುದಿಲ್ಲ, ಡಾ.ಸುಧಾಕರ್
"ಮೊದಲನೇ ಅಲೆಯ ಸಂದರ್ಭದಲ್ಲಿ ವೈರಸ್ ಬಗ್ಗೆ ಸ್ಪಷ್ಟ ಚಿತ್ರಣ ನಮಗಿರಲಿಲ್ಲ, ಹಾಗಾಗಿ ಲಾಕ್ಡೌನ್ ಮೊರೆ ಹೋಗಬೇಕಾಯಿತು. ಈಗ ನಮಗೆ ಅನುಭವವಿದೆ, ಸೋಂಕು ಉಲ್ಬಣಗೊಳ್ಳುತ್ತಿದ್ದರೂ ಅದರ ತೀವ್ರತೆ ಕಮ್ಮಿಯಿದೆ. ಇನ್ನು ಮುಂದೆ ಸಂಪೂರ್ಣ ಲಾಕ್ಡೌನ್ ಮಾಡುವುದಿಲ್ಲ, ವ್ಯಾಪಾರ ವ್ಯವಹಾರಗಳಿಗೆ ತೊಂದರೆಯಾಗುವ ಲಾಕ್ಡೌನ್ ಅನ್ನು ಇನ್ನು ಮುಂದೆ ಹೇರುವುದಿಲ್ಲ"ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.












Click it and Unblock the Notifications