ಓಕಳೀಪುರಂ ಜಂಕ್ಷನ್ನಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ : ಪರ್ಯಾಯ ರಸ್ತೆ ಬಳಸಿ
ಬೆಂಗಳೂರು, ಜನವರಿ 19: ಬೆಂಗಳೂರಿನ ಓಕಳೀಪುರಂ ಬಳಿ ಬಿಬಿಎಂಪಿಯು ಅಷ್ಟ ಪಥದ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಮಲ್ಲೇಶ್ವರ ಕಡೆಯಿಂದ ಕೃಷ್ಣಫ್ಲೋರ್ಮಿಲ್ ಸಿಗ್ನಲ್, ಖೋಡೆಸ್ ವೃತ್ತದ ಮೂಲಕ ಸಂಚರಿಸುವ ಮತ್ತು ಸಿಟಿ ರೈಲು ನಿಲ್ದಾಣದತ್ತ ತೆರಳುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಲ್ಲೇಶ್ವರದ ಕಡೆಯಿಂದ ಬರುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ಮಲ್ಲೇಶ್ವರ ಕಡೆಯಿಂದ ಬರುವ ವಾಹನಗಳು ಕೃಷ್ಣ ಫ್ಲೋರ್ಮಿಲ್ ಸಿಗ್ನಲ್ ಬಳಿ ಎಡ ತಿರುವು ಪಡೆದು ಧನ್ವಂತರಿ, ಶಾಂತಲಾ ಸಿಲ್ಕ್ಸ್ ಮೂಲಕ ಬರಬೇಕಾಗಿದೆ.
ಶಾಂತಲಾ ಸಿಲ್ಕ್ಸ್ ಮೂಲಕ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಖೋಡೆಸ್ ವೃತ್ತದ ಕಡೆಗೆ ತೆರಳಬಹುದು. ಇಲ್ಲವೇ ಕೃಷ್ಣ ಫ್ಲೋರ್ಮಿಲ್ ಸಿಗ್ನಲ್ ಕಡೆಯಿಂದ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಸಂಚರಿಸಿ ಕೆ.ಬಿ. ಜಂಕ್ಷನ್ ಮೂಲಕ ರಾಜಾಜಿನಗರ ಪ್ರವೇಶದ್ವಾರ ತಲುಪಿ ಯು ತಿರುವು ಪಡೆದು ರೈಲು ನಿಲ್ದಾಣದ ಕಡೆ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಕಳೆದ ಎರಡು ದಿನಗಳಿಂದ ಆ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಅಷ್ಟ ಪಥದ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ ಕಾಮಗಾರಿ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.