ಕಡತ ಯಜ್ಞಕ್ಕಾಗಿ ಸರ್ಕಾರದ ಖಡಕ್ ನಿರ್ಧಾರ!
ಬೆಂಗಳೂರು, ಡಿ. 20 : ಸಚಿವಾಲಯಗಳಲ್ಲಿ ರಾಶಿ ಬಿದ್ದಿರುವ ಕಡತಗಳನ್ನು ವಿಲೇವಾರಿ ಮಾಡಲು ಸಿಎಂ ಸಿದ್ದರಾಮಯ್ಯ ದಿಟ್ಟಕ್ರಮ ಕೈಗೊಂಡಿದ್ದಾರೆ. ಶೇ.50ಕ್ಕಿಂತ ಹೆಚ್ಚಿನ ಕಡತಗಳು ಬಾಕಿ ಇರುವ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಕಡತ ಯಜ್ಞದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ದಿಟ್ಟಕ್ರಮ ಕೈಗೊಂಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಇನ್ನು ಮುಂದೆ ಅನಿವಾರ್ಯವಾಗಿ ಕಚೇರಿಯಲ್ಲಿ ಕುಳಿತು ಕಡತ ವಿಲೇವಾರಿ ಕೈಗೊಳ್ಳಬೇಕು. [ಸಂಪುಟ ಸಭೆಯ ಇತರ ನಿರ್ಣಯಗಳು]

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ನೀಡಿದ ಮಾಹಿತಿಯಂತೆ ವಿವಿಧ ಸಚಿವಾಲಯಗಳಲ್ಲಿ 2,62,803 ಕಡತಗಳಿವೆ. ಇವುಗಳಲ್ಲಿ 1.25 ಲಕ್ಷ ಕಡತಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನು 1.22 ಲಕ್ಷ ಕಡತಗಳು ಧೂಳು ತಿನ್ನುತ್ತಿವೆ.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಇರುವ ಹಣಕಾಸು, ಇಂಧನ ಮತ್ತು ವಾಣಿಜ್ಯ-ಕೈಗಾರಿಕೆ ಇಲಾಖೆಗಳು ಸೇರಿದಂತೆ ನಾನಾ ಸಚಿವಾಲಯಗಳಲ್ಲಿ ಸಾವಿರಾರು ಕಡತಗಳು ವಿಲೇವಾರಿಗಾಗಿ ಕಾದು ಕುಳಿತಿವೆ. ಕಡತ ಯಜ್ಞ ಮಾಡುವಂತೆ ಇಲಾಖೆ ಕಾರ್ಯದರ್ಶಿಗೆ ಮೊದಲು ನೋಟಿಸ್ ನೀಡಲಾಗುವುದು. ಇದಕ್ಕೆ ಅಧಿಕಾರಿಗಳು ಬಗ್ಗದಿದ್ದರೆ, ಮುಂದಿನ ಕ್ರಮದ ಕುರಿತು ಆಲೋಚಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಎಷ್ಟು ಕಡತಗಳು ಬಾಕಿ ಇವೆ : ಟಿ.ಬಿ.ಜಯಚಂದ್ರ ಅವರು ಹೇಳುವಂತೆ ಪಶು ಸಂಗೋಪನೆ ಇಲಾಖೆಯ ಶೇ.59, ವಾಣಿಜ್ಯ ಮತ್ತು ಕೈಗಾರಿಕೆ ಶೇ.54.9, ಉನ್ನತ ಶಿಕ್ಷಣ ಶೇ.51, ಇಂಧನ ಶೇ.61, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶೇ.51, ಆಹಾರ ಮತ್ತು ನಾಗರಿಕ ಸರಬರಾಜು ಶೇ.65, ಹಣಕಾಸು ಶೇ.54, ಅರಣ್ಯ ಶೇ.69 ಕಡತಗಳು ಬಾಕಿ ಉಳಿದಿವೆ.
ಉಳಿದಂತೆ ಮೂಲಸೌಕರ್ಯ ಇಲಾಖೆಯ ಶೇ.60, ಯುವಜನ ಮತ್ತು ಕ್ರೀಡೆ-ಶೇ.60, ವೈದ್ಯ ಶಿಕ್ಷಣ ಶೇ.68, ಲೋಕೋಪಯೋಗಿ ಶೇ.56, ಕಂದಾಯ ಶೇ.54 ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿ ಶೇ.55ಕ್ಕಿಂತ ಹೆಚ್ಚಿನ ಕಡತಗಳು ಬಾಕಿ ಇವೆ. ಆದ್ದರಿಂದ ಅನಿವಾರ್ಯವಾಗಿ ಅಧಿಕಾರಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿ, ಕಡತ ಯಜ್ಞ ಮಾಡಲು ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ.












Click it and Unblock the Notifications