ಬೆಂಗಳೂರು; ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆಗೆ ಮೊಬೈಲ್ ಯೂನಿಟ್
ಬೆಂಗಳೂರು, ಜನವರಿ 20; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಬಿಬಿಎಂಪಿ ಸೋಂಕು ಹರಡುವಿಕೆ ತಡೆಯಲು, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಪರೀಕ್ಷೆಗೆ ಮೊಬೈಲ್ ಯೂನಿಟ್ಗಳನ್ನು ಪರಿಚಯಿಸಿದೆ. ಜನರು ಕರೆ ಮಾಡಿ ಮನೆಯಲ್ಲಿಯೇ ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ನೀಡಬಹುದಾಗಿದೆ. 24*7 ಈ ಮೊಬೈಲ್ ಯೂನಿಟ್ ಕಾರ್ಯ ನಿರ್ವಹಣೆ ಮಾಡಲಿದೆ.
ಕೆಲವು ಸಂಸ್ಥೆಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಸಹಕಾರದಲ್ಲಿ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲಾಗಿದೆ. ಸದ್ಯ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಮಾತ್ರ ಸೇವೆ ಲಭ್ಯವಿದೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾಹಿತಿ ನೀಡಿದರು. "ಜನರು ಈಗ ಬಿಬಿಎಂಪಿ ದಕ್ಷಿಣ ವಲಯದ ಸಹಾಯವಾಣಿಗೆ ಕರೆ ಮಾಡುವ ಮೂಲಕ ತಮ್ಮ ಮನೆ ಬಾಗಿಲಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು" ಎಂದರು.
ಸಂಚಾರಿ ಪರೀಕ್ಷಾ ಘಟಕ (ಎಂಟಿಯು) ವಾರದ ಎಲ್ಲಾ ದಿನ 24*7 ಕಾರ್ಯ ನಿರ್ವಹಣೆ ಮಾಡುತ್ತದೆ. ಆಂಟಿಜೆಟ್ ಟೆಸ್ಟ್ ಅನ್ನು ಇದರಲ್ಲಿ ಮಾಡಲಾಗುತ್ತಿತ್ತು. ತಕ್ಷಣವೇ ಫಲಿತಾಂಶ ಪ್ರಕಟವಾಗಲಿದೆ.
ಪರೀಕ್ಷೆ ನಡೆಸಿದ ವ್ಯಕ್ತಿಗೆ ಕೋವಿಡ್ ಸೋಂಕು ಖಚಿತವಾದರೆ ಮುಂದಿನ ಕ್ರಮದ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಲಿದೆ. ಈ ಮೊಬೈಲ್ ಯೂನಿಟ್ಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಉಳಿದ ವಲಯಗಳಲ್ಲಿಯೂ ಇದನ್ನು ವಿಸ್ತರಣೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಟೆಸ್ಟಿಂಗ್ ಕ್ಯಾಂಪ್ ಸ್ಥಾಪನೆ; ಕೋವಿಡ್ ಲಸಿಕೆ ನೀಡುವ ಕ್ಯಾಂಪ್ ಜೊತೆಗೆ ಕೋವಿಡ್ ಪರೀಕ್ಷೆ ಮಾಡುವ ಕ್ಯಾಂಪ್ ಸಹ ಮಲ್ಲೇಶ್ವರಂ ಬಸ್ ನಿಲ್ದಾಣದ ಸಮೀಪ ಸ್ಥಾಪನೆ ಮಾಡಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯ ತನಕ ಈ ಕ್ಯಾಂಪ್ ಕಾರ್ಯ ನಿರ್ವಹಣೆ ಮಾಡಲಿದೆ.
"ಕೋವಿಡ್ ಟೆಸ್ಟಿಂಗ್ ಹೆಚ್ಚಿಸಲು ಕ್ಯಾಂಪ್ ಸ್ಥಾಪನೆ ಮಾಡಲಾಗಿದೆ. ಜನರು ಕ್ಯಾಂಪ್ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು" ಎಂದು ಮಲ್ಲೇಶ್ವರಂ ಶಾಸಕ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದರು.
ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 40,499 ಹೊಸ ಪ್ರಕರಣಗಳು ದಾಖಲಾಗಿದೆ. ಬೆಂಗಳೂರು ನಗರದಲ್ಲಿ 24,135 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ನಗರದ ಒಟ್ಟು ಸಕ್ರಿಯ ಪ್ರಕರಣಗಳು 1,84,377.
ಶುಕ್ರವಾರ ಸಭೆ; ರಾಜ್ಯದಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಹತ್ವದ ಸಭೆ ನಡೆಸಲಿದ್ದಾರೆ.
ಬೆಂಗಳೂರು ನಗರದಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕು ಎಂದು ಹೋಟೆಲ್ ಮಾಲೀಕರು ಒತ್ತಾಯಿಸಿದ್ದಾರೆ. ಶುಕ್ರವಾರದ ಸಭೆಯಲ್ಲಿ ಈ ಕುರಿತು ವಿವರವಾದ ಚರ್ಚೆ ನಡೆಯಲಿದ್ದು, ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಬೆಂಗಳೂರು ನಗರಲ್ಲಿ 1 ರಿಂದ 9ನೇ ತರಗತಿಗಳನ್ನು ಬಂದ್ ಮಾಡಲಾಗಿದೆ. ಭೌತಿಕ ತರಗತಿ ಸ್ಥಗಿತಗೊಳಿಸಿ ಆನ್ಲೈನ್ ಕ್ಲಾಸ್ ಮಾಡಲಾಗುತ್ತಿದೆ. ಜನವರಿ 31ರ ತನಕ ಶಾಲೆಗಳು ಬಂದ್ ಆಗಿರುವ ಸಾಧ್ಯತೆ ಇದೆ.
ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಮಾಹಿತಿ ನೀಡಿದ್ದು, "ಕೋವಿಡ್ ಕಾರಣದಿಂದ ಕೆಲವು ಜಿಲ್ಲೆಗಳಲ್ಲಿ ಮುಚ್ಚಿರುವ ಶಾಲೆಗಳನ್ನು ಪುನರಾರಂಭ ಮಾಡುವುದಕ್ಕೆ ತಜ್ಞರ ಸಲಹೆಯೇ ಅಂತಿಮ" ಎಂದು ಹೇಳಿದ್ದಾರೆ.
"ತಜ್ಞರು ಒಪ್ಪಿಗೆ ನೀಡಿದರೆ ಬೆಂಗಳೂರು ನಗರದಲ್ಲಿಯೂ ಶಾಲೆಗಳನ್ನು ಪುನಃ ಆರಂಭಿಸಲಾಗುತ್ತದೆ" ಎಂದು ಸಚಿವರು ತಿಳಿಸಿದ್ದಾರೆ. ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಸ್ಥಿತಿಗತಿ ನೋಡಿಕೊಂಡು ಶಾಲೆಗಳನ್ನು ಬಂದ್ ಮಾಡುವ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.












Click it and Unblock the Notifications