ಕೊರೊನಾ ಸೋಂಕಿಗೆ ಮಾಸ್ಕ್ ಬೇಕಿಲ್ಲ ಎಂದ ವೈದ್ಯನ ವಿರುದ್ಧ ವಿಚಾರಣೆ
ಬೆಂಗಳೂರು, ಮೇ. 17: ಕೊರೊನಾ ಸೋಂಕಿತರಿಗೆ ಮಾಸ್ಕ್ ಬೇಕಿಲ್ಲ. ಸ್ಯಾನಿಟೈಸರ್ ಹಾಕಬೇಕಿಲ್ಲ. ಕೊರೊನಾ ಬಂದಾಗಲೇ ನನಗೆ ಧೈರ್ಯ ಎಂಬ ಮೆಡಿಸಿನ್ ಸಿಕ್ಕಿಬಿಟ್ಟಿತು ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ವೈದ್ಯ ಡಾ. ರಾಜು ಕೃಷ್ಣಮೂರ್ತಿ ಅವರ ವೈದ್ಯ ವೃತ್ತಿಗೆ ಕುತ್ತು ಬಂದಿದೆ. ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ನ ವೈದ್ಯ ಡಾ. ರಾಜು ಕೃಷ್ಣಮೂರ್ತಿ ಅವರನ್ನು ವೈದ್ಯ ವೃತ್ತಿಯಿಂದ ನಿಷೇಧಗೊಳಿಸುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಶಿಫಾರಸು ಮಾಡಿದೆ.
ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ವೈದ್ಯ ಡಾ. ರಾಜು ಸ್ಥಳೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಮಾಸ್ಕ್ ಇಲ್ಲದೇ, ಸಾನಿಟೈಸರ್ ಬಳಸದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯ ಸಿಬ್ಬಂದಿ ಕೂಡ ಯಾರೂ ಮಾಸ್ಕ್ ಹಾಕುತ್ತಿರಲಿಲ್ಲ. ಈ ಕುರಿತು ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಡಾ. ರಾಜು, ಮಾಸ್ಕ್ ಹಾಕಿದರೆ ಕೊರೊನಾ ಬರಲ್ಲ ಅಂತ ಯಾವ ವಿಜ್ಞಾನಿಯೂ ಹೇಳಿಲ್ಲ. ನಮಗೆ ಯಾವಾಗ ಕೊರೊನಾ ಸೋಂಕಿಗೆ ಮೆಡಿಸಿನ್ ಸಿಕ್ಕಿತೋ ಅವಾಗಿನಿಂದ ನಾನು ಮಾಸ್ಕ್ ಹಾಕಲ್ಲ. ನನ್ನ ಬಳಿ ಬರುವ ರೋಗಿಗಳಿಗೆ ಕೂಡ ಮಾಸ್ಕ್ ಹಾಕಿಸುವುದಿಲ್ಲ. ಆಕ್ಸಿಜನ್ ಹೆಸರಿನಲ್ಲಿ ಕೆಲವರು ರೋಗಿಗಳನ್ನು ಕೊಲೆ ಮಾಡುತ್ತಿದ್ದಾರೆ. ಯಾವ ಮಾಸ್ಕ್ ಹಾಕುವ ಅಗತ್ಯವಿಲ್ಲ. ನಮ್ಮ ಬಳಿ ಧೈರ್ಯ ಎಂಬ ಮೆಡಿಸನ್ ಇದ್ದರೆ ಸಾಕು ಎಂದು ವಿವಾದಾತ್ಮಕ ಹೇಳಿಕೆಯನ್ನು ಡಾ. ರಾಜು ಹೇಳಿದ್ದರು. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಮೆಡಿಕಲ್ ಕೌನ್ಸಿಲ್ ರಾಜು ಅವರು 1999 ರಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಸಿದ್ದಾರೆ. ಕೊರೊನಾ ನಿರ್ವಹಣೆ ಕುರಿತು ತಪ್ಪು ಸಂದೇಶ ರವಾನಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ಹೇಳಿಕೆ ಭಾರೀ ಅಪಾಯಕಾರಿಯಾಗಿದೆ. ಕರ್ನಾಟಕ ಖಾಸಗಿ ಮೆಡಿಕಲ್ ಎಸ್ಟಾಬ್ಲಿಷನ್ ಮೆಂಟ್ ಆಕ್ಟ್ ಪ್ರಕಾರ ರಾಜು ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಅಲ್ಲಿಯ ವರೆಗೂ ವೈದ್ಯ ವೃತ್ತಿ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ ರಿಜಿಸ್ಟ್ರಾರ್ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
Recommended Video
ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರು ಡಾ. ರಾಜು ಅವರಿಗೆ ನೋಟಿಸ್ ನೀಡಿದ್ದಾರೆ. ಕೊರೊನಾ ನಿರ್ವಹಣೆ ಕುರಿತು ತಾವು ಸಾರ್ವಜನಿಕರಿಗೆ ನೀಡಿರುವ ತಪ್ಪು ಮಾಹಿತಿ ಕುರಿತು ವಿವರ ನೀಡುವಂತೆ ಸೂಚನೆ ನೀಡಿದ್ದಾರೆ. ಅಂತೂ ಮಾಧ್ಯಮದ ಮುಂದೆ ಕೊರೊನಾ ಕುರಿತು ಬಾಯಿಗೆ ಬಂದಂಗೆ ಮಾತನಾಡಿದ ವೈದ್ಯ ಡಾ. ರಾಜು ಅವರ ವೈದ್ಯ ವೃತ್ತಿಗೆ ತೊಡಕಾಗಿ ಪರಿಗಣಿಸಿದೆ. ಕೊರೊನಾ ಸೋಂಕಿಗೆ ಮಾಸ್ಕ್ ಹಾಕಿಕೊಳ್ಳಬೇಡಿ ಎಂದು ಹೇಳಿಕೆ ನೀಡಿದ ವೈದ್ಯರೇ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.