ಯಾವುದೂ ನಿರೀಕ್ಷೆಯಂತೆ ನಡೆಯುವುದಿಲ್ಲ ಎಂದು ಹಿಂದೆಯೂ ಸಾಬೀತಾಗಿದೆ: ಸಿಟಿ ರವಿ
ಬೆಂಗಳೂರು, ಡಿಸೆಂಬರ್ 14: ಸಂಪುಟ ವಿಸ್ತರಣೆ ಬಹಳ ಸಂಧರ್ಭದಲ್ಲಿ ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ ಎಂಬುದು ಕಳೆದ ಬಾರಿಯ ಸಂಪುಟ ರಚನೆಯ ವೇಳೆಯೇ ಸಾಬೀತಾಗಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಪರಮಾಧಿಕಾರ ಇರುವುದು ಮುಖ್ಯಮಂತ್ರಿಗೆ ಮಾತ್ರ, ನಾನು ಕಾರ್ಯಕರ್ತನಾಗಿ ಜವಾಬ್ದಾರಿ ಹೊತ್ತುಕೊಂಡು ಈಗಲೂ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತಿದ್ದೇನೆ ಎಂದರು.
ಹುಣ್ಣಿಮೆಯಲ್ಲಿ ಜೋರಾಗಿ ಅಲೆ ಬಂದರೂ ಸಮುದ್ರದೊಳಗೆ ಸೇರಬೇಕಾಗುತ್ತದೆ.ಸಮುದ್ರವನ್ನು ಬಿಟ್ಟರೆ ಅಲೆಯ ಪಾತ್ರ ಇರುವುದಿಲ್ಲ,ಅಪೇಕ್ಷೆ ಮತ್ತು ಅಸಮಾಧಾನಕ್ಕೆ ವ್ಯತ್ಯಾಸ ಇದೆ.
ಮಲಗಿದ ತಕ್ಷಣ ನಿದ್ದೆ ಬರುವವರಿಗೆ ಅಸಮಾಧಾನ ಇರುವುದಿಲ್ಲ,ಅಸಮಾಧಾನ ಇದ್ದರೆ ಮಲಗಿದ ಕೂಡಲೇ ನಿದ್ದೆ ಬರುವುದಿಲ್ಲ.ನನಗೆ ಯಾವುದೇ ಚಿಂತೆ ಇಲ್ಲ, ಆರಾಮಾಗಿ ಇದ್ದೇನೆ.
ನನಗೆ ಅಸಮಾಧಾನ ಇದ್ದಿದ್ದರೆ ನಮ್ಮ ಇಲಾಖೆಯ ಯೋಜನಾಬದ್ಧ ಕೆಲಸ ಆಗುತ್ತಿರಲಿಲ್ಲ.ಕೊಟ್ಟಿರುವ ಜವಾಬ್ದಾರಿಯನ್ನು ಚೆನ್ನಾಗಿಯೇ ಮಾಡಿರೋದಕ್ಕೆ ಕಾಲ ಕಾಲಕ್ಕೆ ಪ್ರಮೋಷನ್ ಸಿಕ್ಕಿದೆ.ತತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರಿಗೆ ಅಸಮಾಧಾನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೇರಿಸಿಕೊಳ್ಳುವುದು, ಬಿಡುವುದು ಸಿಎಂ ತೀರ್ಮಾನ
ಯಾರನ್ನು ಮಂತ್ರಿ ಮಾಡಬೇಕು, ಹೊರಗಿದ್ದವರನ್ನು ಒಳಗೆ ತೆಗೆದುಕೊಳ್ಳಬೇಕೋ ಒಳಗಿದ್ದವರನ್ನು ಹೊರ ಕಳುಹಿಸಬೇಕೋ ಎಂದು ಮುಖ್ಯಮಂತ್ರಿಗಳೇ ತೀರ್ಮಾನಿಸುತ್ತಾರೆ. ವರಿಷ್ಠರ ಜೊತೆ ಸಮಾಲೋಚಿಸಿ ಯಡಿಯೂರಪ್ಪ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಯಡಿಯೂರಪ್ಪ ಅವರದ್ದು ಪಕ್ವವಾಗಿರುವ ರಾಜಕಾರಣ
ಯಡಿಯೂರಪ್ಪ ಅವರದ್ದು ಪಕ್ವವಾಗಿರುವ ರಾಜಕಾರಣ, ಯಾವ ಸಂಧರ್ಭದಲ್ಲಿ ಯಾರು ಸೂಕ್ತ ಅಂತ ಅವರು ತೀರ್ಮಾನ ಮಾಡ್ತಾರೆ.ನಾಳೆ ಸಂಪುಟ ವಿಸ್ತರಣೆ ಆದ ಬಳಿಕ ನಮ್ಮ ಬಳಿಯೇ ಹೆಚ್ಚುವರಿ ಖಾತೆಗಳು ಇರಬೇಕು ಅಂತಾ ಬಯಸೋಕೆ ಆಗಲ್ಲ.ಯಾರಿಗೆ ಯಾವ ಖಾತೆ ಕೊಡಬೇಕು ಎಂದು ಸಿಎಂ ತೀರ್ಮಾನ ಮಾಡ್ತಾರೆ ಎಂದು ಮಾಹಿತಿ ನೀಡಿದರು.

ಚರ್ಚೆ ಮಾಡಿದ್ದ ಹೆಸರುಗಳೇ ಬೇರೆ, ಡಿಸಿಎಂ ಆಗಿದ್ದೇ ಬೇರೆ
ಯಾರೂ ಕೂಡಾ ಲಕ್ಷ್ಮಣ ಸವದಿ ಮತ್ತು ಅಶ್ವಥ್ ನಾರಾಯಣ್ ಡಿಸಿಎಂ ಆಗ್ತಾರೆ ಅಂತ ಅಂದುಕೊಂಡಿರಲಿಲ್ಲ.ಚರ್ಚೆ ಮಾಡ್ತಿದ್ದ ಹೆಸರುಗಳೇ ಬೇರೆ ಡಿಸಿಎಂ ಆದವರೇ ಬೇರೆ.ನಮ್ಮ ಪಕ್ಷದಲ್ಲಿ ಪಕ್ಷವೇ ಸುಪ್ರೀಂ .

ಶ್ರೀರಾಮುಲು ಮಾಸ್ ರೀಚ್ ಇರುವ ಜನನಾಯಕ
ಶ್ರೀರಾಮುಲು ಮಾಸ್ ರೀಚ್ ಇರುವ ಜನನಾಯಕ, ಅವರ ಸಾಮರ್ಥ್ಯ ಅಲ್ಲಗಳೆಯಲು ಆಗಲ್ಲ,ಸವಾಲು ಹೊಡೆದು ಗೆದ್ದು ಬಂದಿರುವ ಬೆಳಗಾವಿ ಸಾಹುಕಾರ ಕೂಡಾ ತನ್ನ ಸಾಮರ್ಥ್ಯ ತೋರಿಸಿದ್ದಾರೆ, ಅವರನ್ನು ದುರ್ಬಲರು ಅಂತಾ ಹೇಳೋಕ್ಕಾಗಲ್ಲ.ರಾಮುಲು, ರಮೇಶ್ ಇಬ್ಬರೂ ಪ್ರಬಲರೇ .ಎಲ್ಲಾ ಪ್ರಬಲರು ಒಂದೇ ಫ್ಲಾಟ್ ಫಾರಂ ಗೆ ಬಂದಾಗ ವಿಶ್ವಾಸದ ರಾಜಕಾರಣ ಮಾಡಬೇಕಾಗುತ್ತದೆ.ರಾಮುಲು, ರಮೇಶ್ ಇಬ್ಬರೂ ವಿಶ್ವಾಸದ ರಾಜಕಾರಣ ಮಾಡ್ತಾರೆ ಎಂದರು.












Click it and Unblock the Notifications