ನನಗೆ ಸಂಕಟ ತರಲು ಯಾರಿಗೂ ಸಾಧ್ಯವಿಲ್ಲ: ಎಚ್ ಡಿ ಕುಮಾರಸ್ವಾಮಿ
Recommended Video
ಬೆಂಗಳೂರು, ಸೆಪ್ಟೆಂಬರ್ 5: 'ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಜೈಲಿಗೆ ಹೋದರು, ಮುಂದಿನದು ಜೆಡಿಎಸ್ ನಾಯಕ ಕುಮಾರಸ್ವಾಮಿ ಸರದಿ ಎಂದು ಮಾಧ್ಯಮಗಳಲ್ಲಿ ಹೇಳಿಕೆಗಳು ಪ್ರಕಟವಾಗುತ್ತಿವೆ. ಆದರೆ, ನನಗೆ ಸಂಕಟ ತರಲು ಯಾರಿಗೂ ಸಾಧ್ಯವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬುಧವಾರ ಪಕ್ಷದ ಕಚೇರಿಯಲ್ಲಿ ಹುಣಸೂರು ಕ್ಷೇತ್ರದ ಉಪ ಚುನಾವಣೆ ಸಂಬಂಧ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಡಿಕೆ ಶಿವಕುಮಾರ್ ಮತ್ತು ನನ್ನ ವಿರುದ್ಧ ಆರೋಪ ಇದ್ದರೆ ದೂರು ನೀಡಲಿ. ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಕೈಯಲ್ಲಿ ಈಗ ಎಲ್ಲ ಅಧಿಕಾರವೂ ಇದೆಯಲ್ಲ?' ಎಂದು ಅಶ್ವತ್ಥನಾರಾಯಣ ವಿರುದ್ಧ ಕಿಡಿಕಾರಿದರು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕ ಸಚಿವ ಇಲ್ಲ ಎಂದು ಟೀಕಿಸಿದರು.

'ವಿದೇಶದಲ್ಲಿದ್ದ ಐಎಂಎ ಮುಖ್ಯಸ್ಥನನ್ನು ರಾಜ್ಯಕ್ಕೆ ಕರೆದುಕೊಂಡು ಬಂದವರು ನಮ್ಮ ಪೊಲೀಸರು. ಆದರೆ, ಆತನನ್ನು ಕೇಂದ್ರದ ತನಿಖಾಧಿಕಾರಿಗಳು 15 ದಿನ ತಮ್ಮ ವಶದಲ್ಲಿ ಏಕೆ ಇರಿಸಿಕೊಂಡರು ಎನ್ನುವುದು ನನಗ ಗೊತ್ತಿದೆ. ಸೂಕ್ತ ಸಮಯದಲ್ಲಿ ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಹೇಳಿದರು.
'ರಾಜ್ಯದಲ್ಲಿ ಬೇರೆ ಪಕ್ಷದ ಶಾಸಕರನ್ನು ಖರೀದಿಸುವ ಪ್ರಯತ್ನಗಳನ್ನು ಬಿಜೆಪಿ 2008ರಿಂದಲೂ ನಡೆಸುತ್ತಲೇ ಇದೆ. ಇದಕ್ಕಾಗಿ ಕೋಟಿಗಟ್ಟಲೆ ಹಣ ಹರಿಸಲಾಗಿದೆ. ಇದು ಐಟಿ, ಇಡಿ ಅಧಿಕಾರಿಗಳ ಕಣ್ಣಿಗೆ ಕಾಣಿಸಲಿಲ್ಲವೇ? ಅವರೇನು ಸತ್ತಿದ್ದರೇ?' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಮಾಜಿ ಸಿವಿಸಿ ವಿಠ್ಠಲ್ ಅವರು ಭ್ರಷ್ಟಾಚಾರದ ಕುರಿತು ಬರೆದಿರುವ ಪುಸ್ತಕದಲ್ಲಿ ಕೇಂದ್ರ ಸರ್ಕಾರವು ತನಗಾಗದವರನ್ನು ಕಟ್ಟಿಹಾಕಲು ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಂಡು ಹೇಗೆಲ್ಲ ದೌರ್ಜನ್ಯಗಳನ್ನು ಎಸಗುತ್ತಿದೆ ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಇಂದು ದೇಶದಲ್ಲಿ ಅದೇ ಪರಿಸ್ಥಿತಿ ಉಂಟಾಗಿದೆ' ಎಂದು ಹೇಳಿದರು.












Click it and Unblock the Notifications