ಬೆಂಗಳೂರು: 3ಹಂತದ ಸಾರಿಗೆ ಯೋಜನೆ ಬೇಡ, ಗ್ರೀನ್ಪೀಸ್ ಇಂಡಿಯಾ ಪತ್ರ
ಬೆಂಗಳೂರು, ಸೆಪ್ಟಂಬರ್ 27: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಈಗಾಗಲೇ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಮೂರು ಹಂತದ ಹೆದ್ದಾರಿ ಯೋಜನೆ ರದ್ದುಗೊಳಿಸಬೇಕು ಎಂದು ಗ್ರಿನ್ ಪೀಸ್ ಇಂಡಿಯಾ ಸರ್ಕಾರೇತರ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಸೆಪ್ಟಂಬರ್ ತಿಂಗಳ ಆರಂಭದಲ್ಲಿ ಸುರಿದ ನಿರಂತರ ಭಾರಿ ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಗೆ ಉಂಟಾಗಿದೆ. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಮಾಜಿಕ ಕಾಳಜಿಯಿಂದ ಪತ್ರ ಬರೆದ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯು, ರಾಜ್ಯ ಸರ್ಕಾರ ಕೇಂದ್ರ ಹೆದ್ದಾರಿ ಪ್ರಾಧಿಕಾರ ತಿಳಿಸಿದ "ಮೂರು ಹಂತದ ಬಹುಮಾದರಿ ಸಾರಿಗೆ'' ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಅಂದರೆ ಮೆಟ್ರೋ, ಮೆಟ್ರೋ ಮಲ್ಸೇತುವೆಯ ಕೆಳಗೆ ಜೋತು ಬಿದ್ದ ಸ್ಥಿತಿಯಲ್ಲಿ ಸ್ಕೈ ಬಸ್ ಹಾಗೂ ಕೆಳಗೆ ವಾಹನ ಸಂಚಾರದ ಬಹುಮಾದರಿ ಸಾರಿಗೆಗೆ ಒಪ್ಪಿಗೆ ಸೂಚಿಸಿದೆ. ಈ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಹೀಗಾಗಿ ಯೋಜನೆ ರದ್ದುಗೊಳಿಸಿ ಅದೇ ಹಣವನ್ನು ನಗರದಲ್ಲಿನ ಸುಗಮ ಸಂಚಾರ ವ್ಯವಸ್ಥೆಗೆ, ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದೆ.
ಸೆಪ್ಟಂಬರ್ ಮೊದಲ ವಾರದಲ್ಲಿ ನಗರದಲ್ಲಿ ಬಿದ್ದ ಐದು ದಶಕದ ದಾಖಲೆಯ ಭಾರಿ ಮಳೆಗೆ ನೆರೆ ಪರಿಸ್ಥಿತಿ ಕಂಡು ಬಂದಿತ್ತು. ಪ್ರವಾಹದಲ್ಲಿ 2ಸಾವಿರ ಮನೆಗಳು ಮುಳುಗಿದ್ದವು. 20 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ಹಾನಿ ಆಗಿತ್ತು ಎಂದು ಅಂಕಿ ಅಂಶಗಳಿಂದ ಗೊತ್ತಾಗಿದೆ. ವಾಹನ ಸವಾರರು, ಸಾರ್ವಜನಿಕರು ಪ್ರವಾಹದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕೋಟ್ಯಂತರ ರೂ. ಹಾನಿಯಾಗಿದೆ.
ಫ್ಲೈಓವರ್ ನಿರ್ಮಿಸದಂತೆ ಮನವಿ
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಬಹುಮಾದರಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಮಾತಿನಂತೆ ರಾಜ್ಯ ಸರ್ಕಾರ ಸಿಲಿಕಾನ್ ಸಿಟಿ ಬೆಂಗಳೂರಿನ ನಿವಾಸಿಗಳಿಗೆ ಅನಾನುಕೂಲ ಉಂಟು ಮಾಡುವ ಎತ್ತರದ ಮೇಲ್ಸೇತುವೆ ಮತ್ತು ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಬಾರದು ಎಂದು ಪತ್ರದಲ್ಲಿ ಮನವಿ ಮಾಡಿದೆ. ಖಾಸಗಿ ವಾಹನಗಳ ಹೆಚ್ಚು ಬಳಕೆಯನ್ನು ನಿರ್ಬಂಧಿಸಿ ಸಾರ್ವಜನಿಕ ಸಾರಿಗೆ ಬಳಸಲು ಜನರಿಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು. ಮುಂದೆಂದು ಈ ರೀತಿ ಪ್ರವಾಹ ಉಂಟಾಗದಂತೆ ದೀರ್ಘಾವಧಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಗ್ರೀನ್ ಪೀಸ್ ಇಂಡಿಯಾ ವ್ಯವಸ್ಥಾಪಕರಾದ ಅವಿನಾಶ್ ಕುಮಾರ್ ಚಂಚಲ್ ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜಿಸಿ
ಈ ರೀತಿಯ ಮಳೆ ಅನಾಹುತಗಳು ಘಟಿಸಿದಾಗ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಮರ್ಪಕ ಯೋಜನೆ ರೂಪಿಸದಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ನಾಗರಿಕರ ಸಹಯೋಗದಲ್ಲಿ ಸ್ಥಳೀಯ ಸರ್ಕಾರಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಸಂಸ್ಥೆ ಆಗ್ರಹಿಸಿದೆ. ನಗರದಲ್ಲಿರುವ ಐಟಿ ಬಿಟಿ ಕಂಪನಿಗಳು ಹಾಗೂ ಟೆಕ್ ಪಾರ್ಕ್ಗಳ ಸಿಬ್ಬಂದಿಗೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಉತ್ತೇಜಿಸಬೇಕು. ಆ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ 1,300ಅತಿಕ್ರಮಣ ತೆರವು
ಇನ್ನೂ ಇದೇ ವೇಳೆ ಬೆಂಗಳೂರಿನಲ್ಲಿ ಆದ ಒತ್ತುವರಿಗಳ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ. 2013 ರಿಂದ 2018ರ ವರೆಗಿನ ಸುಮಾರು ಐದು ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಗರದಲ್ಲಿ 1,953 ಒತ್ತುವರಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಒಟ್ಟು ಸುಮಾರು 1,300ಅತಿಕ್ರಮಣಗಳನ್ನು ತೆರವು ಮಾಡಲಾಗಿತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.
ಕೆರೆಗಳ ಎಕರೆಗಟ್ಟಲೇ ಪ್ರದೇಶ ಒತ್ತುವರಿ ಆಗಿವೆ
ಕಾಂಗ್ರೆಸ್ ಸರ್ಕಾರ ತೆರವು ಮಾಡಿ ಬಾಕಿ ಉಳಿದಿದ್ದ ಒಟ್ಟು 600ಅತಿಕ್ರಮಣಗಳನ್ನು ನಂತರ ಬಂದ ಬಿಜೆಪಿ ಸರ್ಕಾರ ತೆರವು ಮಾಡಬಹುದಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಒತ್ತುವರಿಯನ್ನು ಆಡಳಿತ ಪಕ್ಷದ ಸರ್ಕಾರ ತೆರವುಗೊಳಿಸಿಲ್ಲ. ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ 47 ಕೆರೆ ಇದ್ದು, ಅದರಲ್ಲಿ 196 ಎಕರೆ ಒತ್ತುವರಿ ಆಗಿದೆ. ಮಹದೇವಪುರ ವಲಯದಲ್ಲಿನ 52 ಕೆರೆಯ ಅಂದಾಜು 1,845 ಎಕರೆ ಪ್ರದೇಶ ಮತ್ತು ಯಲಹಂಕ ವಲಯದದ 28 ಕೆರೆಗಳಲ್ಲಿ 133 ಎಕರೆ ಜಾಗ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯ 37 ಕೆರೆಗಳ 160 ಎಕರೆ ಒತ್ತುವರಿ ಆಗಿದೆ ಎಂದು ಅವರು ಮಾಹಿತಿ ನೀಡಿದರು.