ಆಗಸ್ಟ್ 11, 12ರಂದು ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು, ಆಗಸ್ಟ್ 08; ನಮ್ಮ ಮೆಟ್ರೋ ಮೈಸೂರು ರಸ್ತೆ-ಕೆಂಗೇರಿ ನಡುವಿನ ವಿಸ್ತರಿತ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಂತಿಮ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಆಗಸ್ಟ್ 11 ಮತ್ತು 12ರಂದು ವಿಜಯನಗರ ಮೈಸೂರು ರಸ್ತೆ ನಿಲ್ದಾಣದ ನಡುವೆ ಮೆಟ್ರೋ ರೈಲು ಸಂಚಾರ ನಡೆಸುವುದಿಲ್ಲ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಆಗಸ್ಟ್ 11ರ ಬುಧವಾರ ಮತ್ತು ಆಗಸ್ಟ್ 12ರ ಗುರುವಾರ ಬೈಯಪ್ಪನಹಳ್ಳಿಯಿಂದ ಹೊರಡುವ ಮೆಟ್ರೋ ರೈಲು ವಿಜಯನಗರ ತನಕ ಮಾತ್ರ ಸಂಚಾರ ನಡೆಸಲಿದೆ.
ಎರಡು ದಿನಗಳ ಕಾಲ ವಿಜಯನಗರ ದಿಂದ ಮೈಸೂರು ರಸ್ತೆ (ನಾಯಂಡಹಳ್ಳಿ) ತನಕ ಮೆಟ್ರೋ ರೈಲು ಸಂಚಾರ ನಡೆಸುವುದಿಲ್ಲ. ಸಿದ್ಧತೆಗಳು ಪೂರ್ಣಗೊಂಡ ಬಳಿಕ ಅಂದರೆ ಆಗಸ್ಟ್ 13ರಿಂದ ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಬಿಎಂಆರ್ಸಿಎಲ್ ಹೇಳಿದೆ.

ನೇರಳೆ ಮಾರ್ಗದಲ್ಲಿ ಕೆಲವು ನಿಲ್ದಾಣಗಳ ನಡುವೆ ಮಾತ್ರ ರೈಲುಗಳ ಸಂಚಾರದಲ್ಲಿ ತೊಂದರೆ ಉಂಟಾಗಲಿದೆ. ನಾಗಸಂದ್ರ, ಯಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಆದ್ದರಿಂದ ನಮ್ಮ ಮೆಟ್ರೋ ರೈಲುಗಳ ಸಂಚಾರದ ಸಮಯದಲ್ಲಿಯೂ ಬದಲಾವಣೆಯಾಗಿದೆ. ರಾತ್ರಿ 9 ಗಂಟೆ ಬದಲಾಗಿ 8 ಗಂಟೆಗೆ ಕೊನೆಯ ರೈಲು ಸಂಚಾರ ನಡೆಸಲಿದೆ. ಆಗಸ್ಟ್ 7 ರಿಂದ 16ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.
ಅಂತಿಮ ಸಂಚಾರಕ್ಕೆ ಸಜ್ಜು; ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ರೈಲು ಮಾರ್ಗ ಆಗಸ್ಟ್ನಲ್ಲಿ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಈಗಾಗಲೇ ಈ ಮಾರ್ಗದಲ್ಲಿ ಬಿಎಂಆರ್ಸಿಎಲ್ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗ ಪರಿಶೀಲಿಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕಿದೆ.
ಜುಲೈನಲ್ಲಿಯೇ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗ ಪರಿಶೀಲಿಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕು. ಆಗಸ್ಟ್ 15ಕ್ಕೆ ಮಾರ್ಗ ಲೋಕಾರ್ಪಣೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಪ್ರಸ್ತುತ ಆಗಸ್ಟ್ ಅಂತ್ಯದಲ್ಲಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ.
Namma Metro train services will not be available between Mysore Road and Vijayanagar stations on 11th & 12th August 2021. Details are in the press release . FKI pic.twitter.com/9KdO3teIo1
— ನಮ್ಮ ಮೆಟ್ರೋ (@cpronammametro) August 7, 2021
ಮೈಸೂರು ರಸ್ತೆ-ಕೆಂಗೇರಿ ನಡುವಿನ ಕಾಮಗಾರಿ ವೇಗವಾಗಿ ಸಾಗುತ್ತಿತ್ತು. ಕೋವಿಡ್ ಲಾಕ್ಡೌನ್ ಜಾರಿಯಾಗದಿದ್ದರೆ 2020ರಲ್ಲಿಯೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆ ಇತ್ತು. ಲಾಕ್ಡೌನ್ ಬಳಿಕ ಕಾಮಗಾರಿ ಚುರುಕುಗೊಂಡಿದ್ದು, ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗಿದೆ.
ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ನ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ನಾಯಂಡಹಳ್ಳಿ) ತನಕ ಸಂಚಾರ ನಡೆಸುತ್ತಿದೆ. ಈ ಮಾರ್ಗವನ್ನು ಚಲ್ಲಘಟ್ಟ ತನಕ ವಿಸ್ತರಣೆ ಮಾಡಲಾಗುತ್ತಿದೆ.
7.5 ಕಿ. ಮೀ. ಮಾರ್ಗ ಈಗಾಗಲೇ ಪೂರ್ಣಗೊಂಡಿದ್ದು ಮೈಸೂರು ರಸ್ತೆ-ಕೆಂಗೇರಿ ಬಸ್ ಟರ್ಮಿನಲ್ ತನಕ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಚಲ್ಲಘಟ್ಟ ತನಕ ವಿಸ್ತರಣೆ ಮಾಡುವ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಿಲ್ದಾಣಗಳು; ನಾಯಂಡಹಳ್ಳಿ-ಕೆಂಗೇರಿ ಮಾರ್ಗದಲ್ಲಿ ನಾಯಂಡಹಳ್ಳಿ ಬಳಿಕ ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣಗಳಿವೆ. ಮುಂದೆ ಚಲ್ಲಘಟ್ಟ ನಿಲ್ದಾಣದ ತನಕ ರೈಲು ಸಂಚಾರ ನಡೆಸಲಿದೆ.
ಈ ವಿಸ್ತರಿತ ರೈಲು ಮಾರ್ಗದಿಂದ ಸುಮಾರು 75 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜರಾಜೇಶ್ವರಿ ನಗರ ಸೇರಿದಂತೆ ಸುತ್ತಮತ್ತಲಿನ ಬಡಾವಣೆಗಳ ಜನರು ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ. ಇದರಿಂದಾಗಿ ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications