ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಗಾಜಿನಮನೆ, ತೂಗು ಸೇತುವೆ ಇಲ್ಲ
ಬೆಂಗಳೂರು. ನ.24: ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿ ನಗರದ ಮಲ್ಲತ್ತಹಳ್ಳಿ ಕೆರೆಯ ಪ್ರದೇಶದಲ್ಲಿ ಉದ್ದೇಶಿಸಿತ ಗಾಜಿನ ಮನೆ, ತೂಗುಸೇತುವೆ ಮತ್ತು ಮಕ್ಕಳ ಆಟದ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿ ವಿಚಾರದಲ್ಲಿ ಬಿಬಿಎಂಪಿ ಉಲ್ಟಾ ಹೊಡೆದಿದೆ.
ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ತನ್ನ ನಿಲುವು ಸಮರ್ಥಿಸಿಕೊಂಡಿದ್ದ ಬಿಬಿಎಂಪಿ ಇದೀಗ ಆ ಕಾಮಗಾರಿಗಳನ್ನು ಸದ್ಯಕ್ಕೆ ಕೈಗೊಳ್ಳುವುದಿಲ್ಲ ಎಂದು ತಿಳಿಸಿದೆ.
ಬಿಬಿಎಂಪಿಯ ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿತು.
ನಗರದ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಸಂಬಂಧ ಸಿಟಿಜನ್ ಆಕ್ಷನ್ ಗ್ರೂಪ್ ಮತ್ತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧ್ಯ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಮಲ್ಲತ್ತಹಳ್ಳಿ ಕೆರೆಯಲ್ಲಿ ಅನಧಿಕೃತವಾಗಿ ಗಾಜಿನ ಮನೆ, ತೂಗುಸೇತುವೆ ನಿರ್ಮಾಣ ಮತ್ತು ಮಕ್ಕಳ ಆಟದ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳು ಮನೋರಂಜನಾ ಚಟುವಟಿಕೆಗಳ ವ್ಯಾಪ್ತಿಗೆ ಬರಲಿದೆ.
ಆದರೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಸೆಕ್ಷನ್ 12 (3) ಪ್ರಕಾರ ಕೆರೆ ಪ್ರದೇಶದಲ್ಲಿ ಮನೋರಂಜನಾ ಚಟುವಟಿಕೆಗಳ ಕಾಮಗಾರಿ ನಡೆಸುವುದು ನಿಷಿದ್ಧವಾಗಿದೆ. ಹಾಗಾಗಿ, ಈ ಎಲ್ಲ ಕಾಮಗಾರಿಗಳನ್ನು ನಡೆಸದಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ಬಂಧ ಹೇರಲು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಬಿಬಿಎಂಪಿ ಪರ ವಕೀಲರು, ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಮಲ್ಲತ್ತಹಳ್ಳಿಯಲ್ಲಿ ಕೆರೆ ಅಭಿವೃದ್ಧಿಯ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ.

ಅದರ ಪ್ರಕಾರ ಕೆರೆ ಏರಿ ಮತ್ತು ಕಾಲುದಾರಿ ಅಭಿವೃದ್ಧಿ, ತಡೆಗೋಡೆ, ತೂಗು ಸೇತುವೆ, ಗಾಜಿನ ಮನೆ ಮತ್ತು ಮಕ್ಕಳ ಆಟದ ರೈಲುಗೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಸರ್ಕಾರದ ಅನುಮೋದನೆ ಇದ್ದರೂ ತೂಗು ಸೇತುವೆ, ಗಾಜಿನ ಮನೆ ಮತ್ತು ಮಕ್ಕಳ ಆಟದ ರೈಲುಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಸದ್ಯ ನಡೆಸುವುದಿಲ್ಲ ಎಂದು ತಿಳಿಸಿದರು.
ಪ್ರಮಾಣಪತ್ರದಲ್ಲಿ ಸಮರ್ಥನೆ: ಅರ್ಜಿ ಸಂಬಂಧ ಇತ್ತೀಚೆಗೆ ಹೈಕೋರ್ಟ್ ಪ್ರಮಾಣ ಪತ್ರ ಸಲ್ಲಿಸಿದ್ದ ಬಿಬಿಎಂಪಿ ಮಳೆ ನೀರು ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ್ ಆರ್. ಕಬಾಡೆ ಅವರು, ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು 2019ರ ಸೆ.20ರಂದು ಸರ್ಕಾರ ನೀಡಿರುವ ನಿರ್ದೇಶನಗಳ ಅನುಸಾರ ಕೈಗೊಳ್ಳಲಾಗಿದೆ.
ಸರ್ಕಾರ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಕೆರೆ ಏರಿ, ಕಾಲುದಾರಿ, ತಡೆಗೋಡೆ, ಗಾಜಿನ ಮನೆ, ತೂಗು ಸೇತುವೆ, ಮಕ್ಕಳ ಆಟದ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದಕ್ಕೆ, ಸರ್ಕಾರ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರವು ಅನುಮತಿ ನೀಡಿದೆ ಎಂದು ವಿವರಣೆ ನೀಡಿದ್ದರು.












Click it and Unblock the Notifications