ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ
ಬೆಂಗಳೂರು, ಜುಲೈ 01 : ಕರ್ನಾಟಕ ಸರ್ಕಾರ ರಾತ್ರಿ 8 ರಿಂದ ಬೆಳಗ್ಗೆ 5ರ ತನಕ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚನೆ ನೀಡಲಾಗಿದ್ದು, ವಾಹನ ಸಂಚಾರ ಬಂದ್ ಆಗಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳು ರಾತ್ರಿ 8ರ ಬಳಿಕ ಸಂಚಾರ ನಡೆಸುವುದಿಲ್ಲ. ಎಲ್ಲಾ ಡಿಪೋಗಳಿಗೆ ರಾತ್ರಿ 8 ಗಂಟೆ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ.
ಹೆಚ್ಚಿನ ಜನಸಂದಣಿ ಇದ್ದರೆ ಮಾತ್ರ ಮೆಜೆಸ್ಟಿಕ್, ಶಿವಾಜಿನಗರ, ಬನಶಂಕರಿ, ಕೆಂಗೇರಿ, ಯಶವಂತಪುರ ಮುಂತಾದ ನಿಲ್ದಾಣಗಳಿಂದ ರಾತ್ರಿ 9 ಗಂಟೆ ತನಕ ಬಸ್ ಓಡಿಸಬಹುದು. ಇಲ್ಲವಾದಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6ರ ಬಸ್ ಸಂಚಾರ ನಿಲ್ಲಿಸಲು ಸೂಚನೆ ಕೊಡಲಾಗಿದೆ.

ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ನಗರದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕೆಲವು ಷರತ್ತುಗಳ ಜೊತೆಗೆ ಬಸ್ ಓಡಿಸಲು ಅನುಮತಿ ನೀಡಲಾಗಿತ್ತು. ಕಳೆದ ತಿಂಗಳು 10 ಲಕ್ಷ ಜನರು ಬಿಎಂಟಿಸಿ ಬಸ್ಗಳಲ್ಲಿ ಸಂಚಾರ ನಡೆಸಿದ್ದಾರೆ.
ಪ್ರಸ್ತುತ ಬಿಎಂಟಿಸಿ 4 ಸಾವಿರ ಟ್ರಿಪ್ಗಳನ್ನು ನಡೆಸುತ್ತಿದೆ. ಉತ್ತರ ವಲಯದಲ್ಲಿ 1ಸಾವಿರ, ಪಶ್ಚಿಮದಲ್ಲಿ 900, ದಕ್ಷಿಣದಲ್ಲಿ 800 ಟ್ರಿಪ್ಗಳನ್ನು ನಡೆಸಲಾಗುತ್ತಿದೆ. ಪ್ರತಿ ಬಸ್ 125 ಕಿ. ಮೀ. ಗಿಂತ ಹೆಚ್ಚಿನ ಸಂಚಾರ ನಡೆಸುತಿಲ್ಲ.
ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾದ ಬಳಿಕ ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂ ಅವಧಿಯನ್ನು ಪರಿಷ್ಕರಣೆ ಮಾಡಿತು. ಕರ್ನಾಟಕದಲ್ಲಿ ಮಂಗಳವಾರ 947 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ.












Click it and Unblock the Notifications