ಇಂದಿನಿಂದ ನೈಟ್ ಕರ್ಫ್ಯೂ : ಬೆಂಗಳೂರು ಪೊಲೀಸ್ ಕಮೀಷನರ್ ಹೇಳಿದ್ದೇನು?
ಬೆಂಗಳೂರು, ಡಿ. 28: ಓಮಿಕ್ರಾನ್ ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಂಗಳವಾರದಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆ ವೇಳೆಗೆ ಎಲ್ಲಾ ವಾಣಿಜ್ಯ ವಹಿವಾಟು ಬಂದ್ ಮಾಡಲಾಗಿದೆ. ಮುಂದಿನ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ನಿಯಮಗಳು ಅಸ್ತಿತ್ವದಲ್ಲಿರಲಿವೆ.
ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿ ಮಾಡುವ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಎಲ್ಲಾ ಡಿಸಿಪಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಮಲಪಂತ್ ಕೆಲವು ಮಹತ್ವ ವಿಷಯಗಳನ್ನು ಪ್ರಕಟಿಸಿದ್ದಾರೆ. ಈ ನಿಯಮಗಳು ಮುಂದಿನ ಹತ್ತು ದಿನಗಳ ಜಾಲ ಅಸ್ತಿತ್ವದಲ್ಲಿರಲಿವೆ. ಪರಿಸ್ಥಿತಿ ನೋಡಿಕೊಂಡು ನೈಟ್ ಕರ್ಫ್ಯೂ ಮುಂದುವರೆಸುವ ಬಗ್ಗೆ ಸರ್ಕಾರ ತೀರ್ಮಾನ ಕೈಕೊಳ್ಳಲಿದೆ.
ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ10 ಗಂಟೆ ವೇಳೆಗೆ ಎಲ್ಲಾ ವಾಣಿಜ್ಯ ವಹಿವಾಟು ಬಂದ್ ಮಾಡಬೇಕು. ಪಬ್, ಬಾರ್ ರೆಸ್ಟೋರಂಟ್ಗಳು ಸಹ ಬಂದ್ ಮಾಡಬೇಕು. ವಿಪರ್ಯಾಸವೆಂದರೆ, ಫುಡ್ ಮನೆಗೆ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಬಿಗಿಗೊಳಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ರಾತ್ರಿ ಹತ್ತು ಗಂಟೆ ಬಳಿಕ ಅನಾವಶ್ಯಕವಾಗಿ ಯಾರೂ ಓಡಾಡುವಂತಿಲ್ಲ. ಆಸ್ಪತ್ರೆ, ರಾತ್ರಿ ಪಾಳಿ ಕೆಲಸ ಮಾಡುವರು ಗುರುತಿನ ಚೀಟಿ ಮತ್ತು ಮಹತ್ವದ ದಾಖಲೆಗಳನ್ನು ಪೊಲೀಸರಿಗೆ ಒದಗಿಸಬೇಕು. ಅನಾವಶ್ಯಕವಾಗಿ ಆಟೋಗಳು ಕೂಡ ಸಂಚಾರ ಮಾಡುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್:
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಲು ತೀರ್ಮಾನಿಸಲಾಗಿದೆ. ಕೆಲವು ಮೇಲ್ಸೇತುವೆ ರಸ್ತೆಗಳನ್ನು ಬಂದ್ ಮಾಡಲಾಗತ್ತದೆ. ಇನ್ನೂ ಬೆಂಗಳೂರಿನ ಕಮೀನಷರೇಟ್ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಮಾಡುವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಚೆಕ್ ಪೋಸ್ಟ್ ತೆರೆಯಲಾಗುತ್ತಿದೆ. ಅನಾವಶ್ಯಕ ನೈಟ್ ಕರ್ಫ್ಯೂ ಉಲ್ಲಂಘನೆ ಮಾಡುವರ ವಿರುದ್ಧ ಕಾನೂನು ಪ್ರಕಾರ ಕೇಸು ದಾಖಲಿಸಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಹೊಯ್ಸಳ ಗಸ್ತು:
ನೈಟ್ ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ತರುವ ನಿಟ್ಟಿನಲ್ಲಿ ಈ ಬಾರಿ ಒಂದು ಗಂಟೆ ಮುಂಚಿತವಾಗಿ ಹೊಯ್ಸಳ ವಾಹನಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನೈಟ್ ಕರ್ಫ್ಯೂ ಜಾರಿಗೂ ಒಂದು ತಾಸು ಮುನ್ನ ಧ್ವನಿ ವರ್ಧಕದಲ್ಲಿ ಘೋಷಣೆ ಮಾಡಿ ಅರಿವು ಮೂಡಿಸಲಾಗುತ್ತದೆ. ಅದರ ಹೊರತಾಗಿಯೂ ವಾಣಿಜ್ಯ ಚಟುವಟಿಕೆ ನಿರ್ವಹಿಸುವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲು ಸೂಚಿಸಲಾಗಿದೆ.
ಬಾರ್ ಪಬ್ಗಳ ಮೇಲೆ ನಿಗಾ:
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ನಿಯಮ ಮೀರಿ ಪಬ್ ಮತ್ತು ಬಾರುಗಳು ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಹೀಗಾಗಿ ಪಬ್ , ಬಾರ್ ಹಾಗೂ ಸಾಮಾಜಿಕ ಅಂತರ ಉಲ್ಲಂಘಿಸಿ ಮಾಡುವ ಪಾರ್ಟಿಗಳ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಈ ಬಾರಿ ಹೊಸ ವರ್ಷ ಆಚರಣೆಗೆ ಬ್ರೇಕ್ ಬಿದ್ದಿದ್ದು, ಬಹುತೇಕರು ಹೋಟೆಲ್, ಪಬ್ , ರೆಸಾರ್ಟ್ಗಳತ್ತ ಮುಖ ಮಾಡಿದ್ದಾರೆ. ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು, ಇಲ್ಲವೇ ಆರ್ಟಿಪಿಸಿಅರ್ ಪರೀಕ್ಷೆ ನೆಗಟೀವ್ ವರದಿ ಇಟ್ಟುಕೊಂಡಿರಬೇಕು. ಅಂತವರಿಗೆ ಮಾತ್ರ ಅವಕಾಶ ಕೊಡಬೇಕು. ಆದರೆ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ 5 ಗಂಟೆ ನೈಟ್ ಕರ್ಪ್ಯೂ ಜಾರಿಯಲ್ಲಿರುವಾಗ ಯಾರ ಪ್ರವೇಶಕ್ಕೂ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.
ಇನ್ನು ಹೋಟೆಲ್ , ರೆಸಾರ್ಟ್ ನಲ್ಲಿ ಶೇ. 50 ರಷ್ಟು ಮಂದಿಗೆ ಅವಕಾಶ ಕೊಡಲು ಈಗಾಗಲೇ ಸೂಚಿಸಿದ್ದು, ನಿಯಮ ಪಾಲನೆ ಸಂಬಂಧ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ.
Recommended Video