ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿ ಯಾವಾಗ ಪೂರ್ಣ?
ಬೆಂಗಳೂರು, ಡಿಸೆಂಬರ್ 06: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ 2022ರ ಅಕ್ಟೋಬರ್ ವೇಳೆಗೆ ತೆರೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿರ್ದಿಷ್ಟಪಡಿಸಿರುವಂತೆ ಮಹತ್ವಕಾಂಕ್ಷೆಯ 117.3 ಕಿ.ಮೀ ಉದ್ದದ 10 ಪಥದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಅಕ್ಟೋಬರ್ 2022ರ ವೇಳೆಗೆ ತನ್ನ ಗಡುವನ್ನು ಪೂರ್ಣಗೊಳಿಸುವ ಹಾದಿಯಲ್ಲಿದೆ.
ಬೆಂಗಳೂರು- ಮೈಸೂರಿಗೆ ಪ್ರಸ್ತುತ ಮೂರು ಗಂಟೆ ಸಮಯ ಬೇಕಾಗುತ್ತದೆ. ಆದರೆ, ಈ ಎಕ್ಸ್ ಪ್ರೆಸ್ ವೇ ಪೂರ್ಣಗೊಂಡರೆ ಉಭಯ ನಗರಗಳ ನಡುವಣ ಪ್ರಯಾಣದ ಅವಧಿ 90 ನಿಮಿಷಗಳಾಗಲಿದೆ.

ನಿಢಘಟ್ಟದಿಂದ ಮೈಸೂರು ವರೆಗಿನ ಮಾರ್ಗದಲ್ಲಿ ಮದ್ದೂರು ಬಳಿ 3.38 ಕಿಲೋ ಎತ್ತರಿಸಿದ ಹೆದ್ದಾರಿ ಬರುತ್ತಿದ್ದು, ಅಡಿಪಾಯ ಮತ್ತು ಎರಕದ ಕೆಲಸ ಪೂರ್ಣಗೊಂಡಿದೆ. ಒಟ್ಟಾರೆ ಕೆಲಸದಲ್ಲಿ 78% ಪೂರ್ಣಗೊಂಡಿದೆ ಎಂದು ಹೇಳಬಹುದು ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಬೆಂಗಳೂರಿನಿಂದ ನಿಢಘಟ್ಟದವರೆಗಿನ ಮೊದಲ ಹಂತ ಮುಂದಿನ ವರ್ಷದ ಮೇ ಒಳಗ ಪೂರ್ಣಗೊಳ್ಳಲಿದೆ. ನಿಢಘಟ್ಟದಿಂದ ಮೈಸೂರು ವರೆಗಿನ ಎರಡನೇ ಹಂತ ಸೆಪ್ಟೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
8,172 ಕೋಟಿ ರೂ. ಮೊತ್ತದ ಯೋಜನೆಯಡಿ ಪ್ರಸ್ತುತದಲ್ಲಿನ ನಾಲ್ಕು ಪಥದ ಹೆದ್ದಾರಿಯನ್ನು ನಾಲ್ಕು ಸರ್ವೀಸ್ ರಸ್ತೆಗಳೊಂದಿಗೆ ಆರು ಪಥವನ್ನಾಗಿ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಆಟೋಗಳು, ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಬೆಂಗಳೂರು- ನಿಢಘಟ್ಟ ಭಾಗದಲ್ಲಿ ಆರ್ ಆರ್ ಮೆಡಿಕಲ್ ಕಾಲೇಜ್ ನಿಂದ ಕ್ರೈಸ್ಟ್ ವಿವಿವರೆಗೆ ನಾಲ್ಕು ಸೇತುವೆಯೊಂದಿಗೆ ಎಲಿವೆಟೇಡ್ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು, ಶೇ. 85 ರಷ್ಟು ಎಲಿವೆಟೇಡ್ ಕಾರ್ಯ ಮುಗಿದಿದೆ. ಮೂರು ಸೇತುವೆಗಳು ಪೂರ್ಣಗೊಂಡಿದ್ದು, ಇನ್ನೂ ಒಂದು ಸೇತುವೆ ಕಾರ್ಯ ಮುಗಿಯಬೇಕಾಗಿದೆ.
56.2 ಕಿಲೋ ಮೀಟರ್ ವರೆಗೆನ ಮೊದಲ ಹಂತದ ಶೇ. 83 ರಷ್ಟು ಕೆಲಸಗಳು ಪೂರ್ಣಗೊಂಡಿದ್ದರೆ, 61. 1 ಕಿ. ಮೀಟರ್ ವರೆಗಿನ ಎರಡನೇ ಹಂತದ ಶೇ. 78 ರಷ್ಟು ಕೆಲಸಗಳು ಮುಗಿದಿವೆ. ಆದಾಗ್ಯೂ, ಎರಡು ಕೋವಿಡ್ ಅಲೆ, ಮಾನವ ಸಂಪನ್ಮೂಲ ಮತ್ತು ಸಲಕರಣೆಗಳ ಕೊರತೆಯಿಂದ ಗಡುವಿನ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಆಗಿಲ್ಲ ಎಂದು ಎನ್ ಹೆಚ್ ಎಎಲ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿ ಶುರುವಾಗಲಿದ್ದು, ದ್ವಿಚಕ್ರ ವಾಹನ, ಆಟೋ ಹಾಗೂ ಟ್ರ್ಯಾಕ್ಟರ್ಗಳ ಓಡಾಟವನ್ನು ಈ ಮೊದಲೇ ನಿಷೇಧಿಸಲಾಗಿದೆ.
ಯೋಜನೆಗಾಗಿ ಒಟ್ಟು 8,172 ಕೋಟಿ ರೂ. ವ್ಯಯಿಸುತ್ತಿದ್ದು, 2022ರ ಅಕ್ಟೋಬರ್ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಲಾಗಿದೆ. ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ.
2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ದಶಪಥಗಳ ಹೆದ್ದಾರಿ ವಿಸ್ತರಣೆ ಕಾಮಗಾರಿ ಲಾಕ್ಡೌನ್ ಘೋಷಣೆಗೆ ಮುನ್ನ ಭರದಿಂದ ಸಾಗಿತ್ತು. ಆದರೆ ಕೋವಿಡ್ ಲಾಕ್ಡೌನ್ ಕಾರಣಕ್ಕೆ ಮಧ್ಯೆ ಒಂದೆರಡು ತಿಂಗಳು ಕೆಲಸ ನಿಂತಿತ್ತು. ಇದೀಗ ಮತ್ತೆ ಭರದಿಂದ ಕೆಲಸಗಳು ಸಾಗಿವೆ.
ಬೆಂಗಳೂರು-ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್ ಅಗಲ ಇದ್ದು, ಇದನ್ನು 60 ಮೀಟರ್ಗೆ ಹಾಗೂ ಎಲಿವೇಟೆಡ್ ಕಾರಿಡಾರ್ ಬಳಿ 45 ಮೀಟರ್ಗೆ ವಿಸ್ತರಣೆ ಮಾಡಲಾಗುತ್ತಿದೆ.
ಬೆಂಗಳೂರು-ಮೈಸೂರು ನಡುವೆ ಸದ್ಯ 135 ಕಿಲೋಮೀಟರ್ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ.
ಸದ್ಯ ಹೈದರಾಬಾದ್ನ ನೆಹರೂ ಔಟರ್ ರಿಂಗ್ ರೋಡ್ ಹಾಗೂ ಹೈದರಾಬಾದ್ ಪಟ್ಟಣದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ಪಿ.ವಿ. ನರಸಿಂಹ ರಾವ್ ಎಕ್ಸ್ಪ್ರೆಸ್ ಹೈವೆಗಳಲ್ಲಿ ಮಾತ್ರವೇ ದ್ವಿಚಕ್ರ ವಾಹನಗಳನ್ನು ನಿಷೇಧಿಸಲಾಗಿತ್ತು. ಇನ್ನು ರಾಜ್ಯದಲ್ಲಿ ನೆಲಮಂಗಲದಿಂದ ಬೆಂಗಳೂರಿನವರೆಗೂ ದ್ವಿಚಕ್ರ ವಾಹನಗಳನ್ನು ನಿಷೇಧಿಸುವ ಚಿಂತನೆ ನಡೆಸಲಾಗಿತ್ತಾದರೂ ವಿರೋಧ ಎದುರಾಗಿ ಸ್ಥಗಿತಗೊಂಡಿತ್ತು.












Click it and Unblock the Notifications