Breaking: ಬೆಂಗಳೂರಲ್ಲಿ ಮುಂದಿನ 3ದಿನ ಚಳಿ ಹೆಚ್ಚು: ಹವಾಮಾನ ಇಲಾಖೆ
ಬೆಂಗಳೂರು, ಅಕ್ಟೋಬರ್ 25: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎರಡು ದಿನದಿಂದ ತಾಪಮಾನ ಕಡಿಮೆಯಾಗಿ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಇದು ಮುಂದಿನ ಮೂರು ದಿನವು ಹೀಗೆ ಮುಂದುವರಿಯುವ ಲಕ್ಷಣಗಳು ಇವೆ.
ಹವಾಮಾನ ಇಲಾಖೆ ಹಿಂಗಾರು ಮಳೆಯ ಆಗಮನ ಅಧಿಕೃತಗೊಳಿಸದಿದ್ದರೂ ಈಶಾನ್ಯ ದಿಕ್ಕಿನಿಂದ ಗಾಳಿಯ ಬೀಸುವಿಕೆ ಆರಂಭವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಎರಡು ದಿನದಿಂದ ತಾಪಮಾನ ಇಳಿಕೆ ಆಗಿದೆ, ಉಷ್ಣಾಂಶ ತೀರಾ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.
ಬೆಂಗಳೂರಲ್ಲಿ ಕೆಲವು ದಿನಗಳ ಹಿಂದೆ ಕನಿಷ್ಠ ತಾಪಮಾನ 19ರಿಂದ 20ಡಿಗ್ರಿ ಸೆಲ್ಸಿಯಸ್ ಇದ್ದದ್ದು, ಎರಡು ದಿನದಿಂದ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿದೆ. ಇದರಿಂದ ಬೆಳಗ್ಗೆ ಮಂಜು ಕವಿದ ವಾತಾವರಣ ಉಂಟಾಗುವ ಜೊತೆಗೆ ಚಳಿಯು ಹೆಚ್ಚಾಗುತ್ತಿದೆ. ಅಕ್ಟೋಬರ್ 28 ಶುಕ್ರವಾರದವರೆಗೆ ಇದೇ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ಮುಂದಿನ ಮೂರು ದಿನ (ನಾಳೆ ಬುಧವಾರದಿಂದ ಶುಕ್ರವಾರದವರೆಗೆ) ನಗರದಲ್ಲಿ ಕನಿಷ್ಠ ತಾಪಮಾನ ಕ್ರಮವಾಗಿ 16, 17 ಮತ್ತು ಮತ್ತು 18ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಂತರ ತಾಪಮಾನದಲ್ಲಿ ಕೊಂಚ ಏರಿಕೆ ಆಗಲಿದ್ದು, ವಾತಾವರಣ ಸಹಜ ಸ್ಥಿತಿಗೆ ಬರಲಿದೆ. ಈ ವೇಳೆ ಗರಿಷ್ಠ ತಾಪಮಾನ 28 ರಿಂದ 29ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ.

ನಗರದಲ್ಲಿ ಮತ್ತೆ ಮಳೆ ನಿರೀಕ್ಷೆ
ಅಕ್ಟೋಬರ್ 28ರ ನಂತರ ಬೆಂಗಳೂರಲ್ಲಿ ಮತ್ತೆ ಹಗುರದಿಂದ ಸಾಧಾರಣವಾದ ಮಳೆಯ ಸುರಿಯುವ ಸಾಧ್ಯತೆ ಇದ್ದು, ಈ ವೇಳೆ ಮೋಡ ಕವಿದ ವಾತಾವರಣ ಕಂಡು ಬರಲಿದೆ. ನೈರುತ್ಯ ಮಾರುತಗಳ ಬೀಸುವಿಕೆ ಬಹುತೇಕ ಮುಗಿದಿದ್ದು, ಈಶಾನ್ಯ ಭಾಗದಿಂದ ಗಾಳಿ ಬೀಸುವಿಕೆ ಆರಂಭವಾಗಿದೆ ಎನ್ನಲಾಗಿದೆ. ಹೀಗಾಗಿ ಚಳಿ ಹೆಚ್ಚಾಗಿದ್ದು, ಚರ್ಮ ಒಣಗುವಿಕೆ, ತುಟಿ ಬಿರಸುಗೊಳ್ಳುವ ಲಕ್ಷಣಗಳು ಈಗಾಗಲೇ ಕಂಡು ಬರುತ್ತಿದೆ.
ಸಾಮಾನ್ಯವಾಗಿ ಸೆಪ್ಟಂಬರ್ ಅಂತ್ಯಕ್ಕೆ ನೈರುತ್ಯ ಮುಂಗಾರು ಕೊನೆಗೊಂಡು, ಹಿಂಗಾರು (ಈಶಾನ್ಯ) ಮಾರುತಗಳು ಆರಂಭವಾಗಬೇಕು. ಆದರೆ ಅಕ್ಟೋಬರ್ ತಿಂಗಳು ಕಳೆಯುತ್ತಾ ಬಂದರೂ ದಕ್ಷಿಣ ಭಾರತದಲ್ಲಿ ಇನ್ನೂ ನೈರುತ್ಯ ಮುಂಗಾರು ಮಾರುತಗಳೇ ಸಕ್ರಿಯವಾಗಿವೆ. ಉತ್ತರ ಭಾರತದಲ್ಲಿ ಈಶಾನ್ಯ ಮಾರ್ಗದಿಂದ ಗಾಳಿ ಬೀಸುತ್ತಿದೆ. ಇದೂ ಹಿಂಗಾರು ಮಳೆ ಆರಂಭಿಕ ಲಕ್ಷಣಗಳು. ಆದರೆ ಇನ್ನೂ ಸಹ ಹಿಂಗಾರು ಅಧಿಕೃತವಾಗಿ ಆರಂಭವಾಗಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದ್ದಾರೆ.












Click it and Unblock the Notifications