ಹಣ, ಚಿನ್ನದ ಜೊತೆ ಸೊಸೆ ಎಸ್ಕೇಪ್; ಠಾಣೆ ಮೆಟ್ಟಿಲೇರಿದ ಅತ್ತೆ
ಬೆಂಗಳೂರು, ಆಗಸ್ಟ್ 23: ದಂಪತಿ ನಡುವಿನ ಕಲಹ ಮನೆಯಲ್ಲಿರುವವರ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ. ಇಲ್ಲೊಬ್ಬಾಕೆ ಪತಿ ಕುಟುಂಬವನ್ನು ಗುರಿಯಾಗಿಸಿ ಮಾನಸಿಕ ಹಿಂಸೆ ನೀಡಿದಲ್ಲದೆ ಮನೆಯಲ್ಲಿದ್ದ 10 ಲಕ್ಷ ನಗದು ಹಾಗೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿದ್ದಾಳೆ. ಈ ಬಗ್ಗೆ ಸೊಸೆಯ ವಿರುದ್ಧ ಅತ್ತೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪದ್ಮನಾಭನಗರದ ಕಮಲ ಎಂಬುವರು ನೀಡಿದ ದೂರಿನ ಮೇರೆಗೆ ಸೊಸೆ ಗೌತಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಮಲ ಎಂಬುವವರು ತನ್ನ ಮಗನಿಗೆ ಈ ಹಿಂದೆ ಬೇರೊಬ್ಬ ಯುವತಿಯೊಂದಿಗೆ ಎಂಗ್ಮೇಜ್ ಮೆಂಟ್ ಫಿಕ್ಸ್ ಮಾಡಿದ್ದರು. ಕೌಟುಂಬಿಕ ಕಾರಣಕ್ಕಾಗಿ ಎಂಗ್ಮೇಜ್ ಮೆಂಟ್ ರದ್ದಾಗಿತ್ತು. ಈ ವೇಳೆ ಸಂಬಂಧಿಕರಾಗಿದ್ದ ಗೌತಮಿಯೊಂದಿಗೆ ವಿವಾಹ ನಿಶ್ಚಯಿಸಿದ್ದರು. ಅದರಂತೆ ಕಳೆದ ಜುಲೈ 10 ರಂದು ಬನಶಂಕರಿಯಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಸೊಸೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ವರನ ಕಡೆಯವರು ನೀಡಿದ್ದರು.

ಅತ್ತೆಯೊಂದಿಗೆ ಸೊಸೆಯ ಕಿರಿಕ್
ಅತ್ತೆ ಕಮಲ ನೀಡಿರುವ ದೂರಿನ ಪ್ರಕಾರ, ಮದುವೆಯಾದ ಮೊದಲ ದಿನದಿಂದಲೂ ಗೌತಮಿ ಅತ್ತೆ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾಳೆ. ಈಕೆಯನ್ನು ಅಮೆರಿಕಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿರುತ್ತದೆ. 50 ಸಾವಿರ ರೂ ಖರ್ಚು ಮಾಡಿ ಈಕೆಗೆ ವೀಸಾ ಮಾಡಿಸಲಾಗುತ್ತದೆ. 1.25 ಲಕ್ಷ ರೂ ಖರ್ಚು ಮಾಡಿ ವಿಮಾನ ಟಿಕೆಟ್ ಕೂಡ ಬುಕ್ ಮಾಡಲಾಗುತ್ತದೆ. ಆ ವೇಳೆ ಗೌತಮಿ ತನ್ನ ವರಸೆ ಶುರುಮಾಡಿಕೊಂಡಿದ್ದಾಳೆ. ಹುಷಾರಿಲ್ಲ ಎಂದು ಸಬೂಬು ನೀಡಿ ಮನೆಯಲ್ಲಿದ್ದ 10 ಲಕ್ಷ ಹಣ, 18 ಲಕ್ಷ ಮೌಲ್ಯದ ಚಿನ್ನಾಭರಣ ಸಮೇತ ತವರು ಮನೆ ಸೇರಿದ್ದಾಳೆ.
ವರದಕ್ಷಿಣೆ ಕಿರುಕುಳ ಪ್ರಕರಣದ ಬೆದರಿಕೆ
ಗಂಡನ ಮನೆಗೆ ಕಿರುಕುಳ ನೀಡಿರುತ್ತಿರುವುದಾಗಿ ದೂರು ನೀಡುವುದಾಗಿ ಗಂಡನಿಗೆ ಧಮಕಿ ಹಾಕಿದ್ದಾಳೆ. ಮಗಳಿಗೆ ಬುದ್ದಿ ಹೇಳುವಂತೆ ಆಕೆಯ ಪೋಷಕರಿಗೆ ಹೇಳಿದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಕಮಲ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಗೌತಮಿ ಕೂಡ ತನ್ನ ಹುಟ್ಟೂರಾದ ತಿರುಪತಿಯಲ್ಲಿ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications