Namma Metro; ನರೇಂದ್ರ ಮೋದಿಯಿಂದ ಐಟಿ ಕಾರಿಡಾರ್ ಉದ್ಘಾಟನೆ
ಬೆಂಗಳೂರು, ಡಿಸೆಂಬರ್ 12; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಬಿಎಂಆರ್ಸಿಎಲ್ ಸಿಹಿಸುದ್ದಿಯನ್ನು ನೀಡಿದೆ. 2023ರಲ್ಲಿ ನಗರದ ನಮ್ಮ ಮೆಟ್ರೋ ಐಟಿ ಕಾರಿಡಾರ್ನಲ್ಲಿ ಮೆಟ್ರೋ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ನಗರದ ಐಟಿ ಕಾರಿಡಾರ್ ಉದ್ಘಾಟನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆಯೂ ಇರುವ ಕಾರಣ ಈ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ.
ನಮ್ಮ ಮೆಟ್ರೋದ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗವನ್ನು ನಗರದ ಐಟಿ ಕಾರಿಡಾರ್ ಎಂದು ಪರಿಗಣಿಸಲಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾದರೆ ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಸಂಚಾರ ದಟ್ಟಣೆಯಲ್ಲಿ ಅವರು ಸಿಲುಕುವುದು ತಪ್ಪಲಿದೆ.
ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳುತ್ತಾ ಬಂದಿದೆ. ಬಿಎಂಆರ್ಸಿಎಲ್ ಈಗಾಗಲೇ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ.

ಮಾರ್ಚ್ನಲ್ಲಿ ಉದ್ಘಾಟನೆ
ನಮ್ಮ ಮೆಟ್ರೋದ ಐಟಿ ಕಾರಿಡಾರ್ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಉದ್ಘಾಟನೆ ಮಾರ್ಚ್ ತಿಂಗಳಿನಲ್ಲಿ ನಡೆಯುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಕರೆಸಿ ಉದ್ಘಾಟನೆ ಮಾಡಿಸಲು ರಾಜ್ಯದ ಬಿಜೆಪಿ ಸರ್ಕಾರ ಸಹ ಚಿಂತನೆ ನಡೆಸಿದೆ.
ಮಾರ್ಚ್ನಲ್ಲಿ ಬೆಂಗಳೂರು-ಮೈಸೂರು ದಶಪಥ ಎಕ್ಸ್ಪ್ರೆಸ್ ವೇ ಸಹ ಉದ್ಘಾಟನೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಂಗಳೂರಿನ ನಮ್ಮ ಮೆಟ್ರೋ ಐಟಿ ಕಾರಿಡಾರ್ ಮತ್ತು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಒಂದೇ ದಿನ ಲೋಕಾರ್ಪಣೆ ಮಾಡಲಾಗುತ್ತದೆ.

15.25 ಕಿ. ಮೀ. ಮಾರ್ಗ
15.25 ಕಿ. ಮೀ. ಉದ್ದದ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗ ನಮ್ಮ ಮೆಟ್ರೋ ಯೋಜನೆಯ ಬಹು ನಿರೀಕ್ಷಿತ ಮಾರ್ಗವಾಗಿದೆ. 2017ರಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ 2020ರ ಮಧ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಭೂ ಸ್ವಾಧೀನ ಸೇರಿದಂತೆ ವಿವಿಧ ಕಾರಣಗಳಿಗಾಗಿ 2023ರಲ್ಲಿ ಮಾರ್ಗ ಲೋಕಾರ್ಪಣೆಗೊಳ್ಳಲು ಸಿದ್ಧವಾಗುತ್ತಿದೆ.
ಬಿಎಂಆರ್ಸಿಎಲ್ 2022 ರಿಂದ 2027ರ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗವನ್ನು 132.63 ಕಿ. ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ. ಈ ಅವಧಿಯಲ್ಲಿ 91 ನಿಲ್ದಾಣಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದೆ.

ಯಾವ-ಯಾವ ನಿಲ್ದಾಣಗಳು
ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ರೈಲಿನ ಸಂಚಾರ ಆರಂಭವಾದರೆ ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳು ಬರಲಿವೆ.
ವೈಟ್ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸಾದರ ಮಂಗಲ, ನಲ್ಲೂರ ಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹೇವಪುರ, ಕೃಷ್ಣರಾಜಪುರ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಿವೆ.

ಸಂಚಾರ ದಟ್ಟಣೆಯಿಂದ ಮುಕ್ತಿ
ಬೆಂಗಳೂರು ನಗರದ ಹೊರವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೋ ಹಾದು ಹೋಗುವುದನ್ನೇ ಜನರು ಕಾಯುತ್ತಿದ್ದಾರೆ. ರಸ್ತೆಯಲ್ಲಿನ ಸಂಚಾರ ದಟ್ಟಣೆಯಿಂದ ಕಂಗೆಟ್ಟಿರುವ ಜನರಲ್ಲಿ ನಮ್ಮ ಮೆಟ್ರೋ ಆಶಾಕಿರಣ ಮೂಡಿಸಿದೆ. ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಸಹ ಸಹಾಯಕವಾಗಿದೆ. ಕೆ. ಆರ್. ಪುರ, ವೈಟ್ಫೀಲ್ಡ್ ರೈಲು ನಿಲ್ದಾಣಗಳಿಗೆ ತೆರಳುವ ಜನರಿಗೆ ಸಹ ಸಹಾಯಕವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಬೆಳೆಯುತ್ತಿರುವ ಬೆಂಗಳೂರು ನಗರ
ಬಿಎಂಆರ್ಸಿಎಲ್ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆ ಮಾಡುವ ಗುರಿ ಹೊಂದಿದೆ. 2025ರ ಜೂನ್ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 175 ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ಗುರಿ. 2041ರ ಅಂತ್ಯಕ್ಕೆ 314 ಕಿ. ಮೀ. ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಬೇಕು ಎಂಬುದು ಸಂಕಲ್ಪವಾಗಿದೆ. ಎರಡು ಮತ್ತು ಮೂರನೇ ಹಂತದ ಮಾರ್ಗಗಳು ಸೇರಿ 2041ರ ವೇಳೆಗೆ ಬೆಂಗಳೂರು ನಗರ 314 ಕಿ. ಮೀ. ನಮ್ಮ ಮೆಟ್ರೋ ಜಾಲ ಹೊಂದಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications