ಮೋದಿ ಕರ್ನಾಟಕ ಪ್ರವಾಸ ದಿನಚರಿ ಪ್ರಕಟ
ಬೆಂಗಳೂರು, ಅ.7: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನವೆಂಬರ್ ತಿಂಗಳಿನಲ್ಲಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಲೋಕಸಭೆ ಚುನಾವಣೆಯ ಪ್ರಚಾರ ನ.16 ರಂದು ಚಾಲನೆ ದೊರೆಯಲಿದೆ. ನಗರದ ಅರಮನೆ ಆವರಣದಲ್ಲಿ ಸಮಾವೇಶ ಏರ್ಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.
ಸೋಮವಾರ(ಅ.7) ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಅವರು 12 ವರ್ಷ ಪೂರೈಸಿದ ಶುಭ ದಿನವಾಗಿದೆ. ಮೋದಿ ಅವರ ಸಾಧನೆ ಬಗ್ಗೆ ನಾವೇನು ಹೇಳಬೇಕಾಗಿಲ್ಲ. ಮೋದಿ ಅವರ ಜೀವನಗಾಥೆ, ಮುಖ್ಯಮಂತ್ರಿಯಾಗಿ ಗುಜರಾತ್ ಅಭಿವೃದ್ಧಿ ಪಡಿಸಿದ ರೀತಿ ಅನುಕರಣೀಯ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ಇದೇ ಸಂದರ್ಭದಲ್ಲಿ ಯುಪಿಎ ಹಗರಣ ಮತ್ತು ಎನ್ ಡಿಎ ಸಾಧನೆ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.
ವೆಂಕಯ್ಯನಾಯ್ಡು ಮಾತನಾಡಿ, 'ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಅವರಿಗೆ ತೊಂದರೆ ಕೊಡಬಾರದು ಎಂದು ಹೇಳಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಅಲ್ಪಸಂಖ್ಯಾತರ ದೂರುಗಳ ವಿಚಾರಣೆಗೆ ವಿಶೇಷ ಕೋರ್ಟ್ ತೆರೆಯುವುದಾಗಿ ಹೇಳಿದ್ದಾರೆ.
ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಅಲ್ಪಸಂಖ್ಯಾತರು ಪಡೆದ ಸಾಲವನ್ನು ಕೇಳುವುದೇಕೆ ಎಂದಿದ್ದಾರೆ. ಸರ್ಕಾರಕ್ಕೆ ಟೋಪಿ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳುತ್ತಿದ್ದಾರೆ. ಇದು ವೋಟ್ ಬ್ಯಾಂಕ್ ರಾಜಕಾರಣ ಅಲ್ಲದೆ ಮತ್ತೇನು' ಎಂದು ಪ್ರಶ್ನಿಸಿದರು.

ಕಾಶ್ಮೀರದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ದೇಶದ ಉದ್ದಗಲಕ್ಕೂ ಉಗ್ರರ ಹಾವಳಿ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಜವಾಬ್ದಾರಿಯುತ ಕೇಂದ್ರ ಸರ್ಕಾರ ಜಾತಿ, ಧರ್ಮ, ಮತ, ಪಂಥ ನೋಡದೆ ಉಗ್ರರನ್ನು ಬಲಿ ಹಾಕುವ ಬದಲು ಅವರ ಬಗ್ಗೆ ಮೃದು ಧೋರಣೆ ತಾಳಿರುವುದು ಸರಿಯಲ್ಲ ಎಂದರು.
ಯುಪಿಎ ಸರ್ಕಾರದ ಹಗರಣ ಹಾಗೂ ಎನ್ ಡಿಎ ಸಾಧನೆ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ. ನಾವು ಎಲ್ಲ ವಿಚಾರಗಳನ್ನು ಚರ್ಚಿಸಲು ಸಿದ್ಧರಿದ್ದೇವೆ ಎಂದು ನೇರ ಸವಾಲು ಹಾಕಿದರು.
ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಣೆ ಹಾಕುವ ಮೂಲಕ ಸಮಾಜವನ್ನು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರೆಂದು ಒಡೆಯುವ ಕೆಟ್ಟ ಕೆಲಸಕ್ಕೆ ಕೈ ಹಾಕಿದೆ. ಇದು ಸರಿಯಲ್ಲ, ತರವಲ್ಲ, ಆ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದರು.
ಅಪರಾಧಿಗಳನ್ನು ಮತ್ತು ಕಳಂಕಿತರನ್ನು ರಕ್ಷಣೆ ಮಾಡುವ ಸುಗ್ರೀವಾಜ್ಞೆಯನ್ನು ನಾನ್ಸೆನ್ಸ್, ಅರ್ಥಹೀನ ಎಂದು ಯುವನಾಯಕ ರಾಹುಲ್ ಗಾಂಧಿ ಕಡೆಗಾದರೂ ಹೇಳಿರುವುದಕ್ಕೆ ಅವರು ಧನ್ಯವಾದ ಅರ್ಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 16 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಇದಲ್ಲದೆ, 8 ಸಮಾವೇಶಗಳನ್ನೂ ಕೂಡ ಬೇರೆ ಬೇರೆ ಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಲ್ಪಸಂಖ್ಯಾತರು ಪಡೆದ ಸಾಲವನ್ನು ಕೊಡಬೇಕಾಗಿಲ್ಲ. ಟೋಪಿ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿರುವುದು ಸರಿಯಲ್ಲ, ಈಗ ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಇಬ್ಬರು ಸೇರಿಕೊಂಡು ದೇಶಕ್ಕೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಕ್ತಾರ ಸುರೇಶ್ ಕುಮಾರ್ ಹಾಜರಿದ್ದರು.











Click it and Unblock the Notifications