Metro Pillar Mishap: ಕಾಮಗಾರಿ ನಿಯಮ ಪರಿಷ್ಕರಿಸಿದ ನಮ್ಮ ಮೆಟ್ರೋ, ಅದ್ಯಾವ ನಿಯಮಗಳು ತಿಳಿಯಿರಿ
ನಮ್ಮ ಮೆಟ್ರೋ ಪಿಲ್ಲರ್ ಕುಸಿತ ಸಂಬಂಧ ಕಾಮಗಾರಿ ವೇಳೆ ಅನುಸರಿಸಬೇಕಾದ ನಿಯಮಗಳನ್ನು (ಎಸ್ಓಪಿ) ರೂಪಿಸಲಾಗಿದೆ. ಐಐಎಸ್ಸಿ ಪ್ರತಿಕ್ರಿಯೆ ಬಳಿಕ ಅಳವಡಿಕೆಯಾಗಲಿದೆ. ಪರಿಷ್ಕರಿಸಿದ ನಿಯಮಗಳು ಯಾವವು?
ಬೆಂಗಳೂರು, ಫೆಬ್ರವರಿ 09: ಮೆಟ್ರೋ ಪಿಲ್ಲರ್ ದುರಂತ ಮತ್ತು ಸಾವಿನ ಬಳಿಕ ಬೆಂಗಳೂರು ನಮ್ಮ ಮೆಟ್ರೋ ತನ್ನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOP)ನಲ್ಲಿ ಮಹತ್ವವಾದ ಅಂಶಗಳುನ್ನು ಸೇರ್ಪಡೆ ಮಾಡಿದೆ. ಕಾಮಗಾರಿಗಳಲ್ಲಿ ಈ ಅಂಶಗಳನ್ನು ಬಳಕೆಯಾಗುವಂತೆ ಸೂಚನೆ ನೀಡಿದೆ.
ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಹಂತದಲ್ಲಿ ಕಬ್ಬಿಣದ ಸರಳಿನ ಪಿಲ್ಲರ್ ಕುಸಿದು ಬಿದ್ದು ತಾಯಿ ಮಗು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಲವೆಡೆ ಮೆಟ್ರೋ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಮತ್ತೊಂದೆಡೆ ಗುಣಮಟ್ಟ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಅಧ್ಯಯನಗಳು ನಡೆದಿದ್ದವು.
ಬೆಂಗಳೂರು ಮೆಟ್ರೋ ರೈಲ್ ಕಾರ್ಪರೇಷನ್ ಲಿಮಿಟೆಡ್ (BMRCL) ಪರಿಣಾಮಕಾರಿ ಹಾಗೂ ಸುರಕ್ಷತಾ ವಿಧಾನ ಅಳವಡಿಸಲು ಚಿಂತನೆ ನಡೆಸಿತ್ತು. ಕಾಮಗಾರಿಗಳಲ್ಲಿ ಅನುಸರಿಸಬಹುದಾದ ಪ್ರಾಮಾಣಿಕೃತ ಕಾರ್ಯಾಚರಣೆ ವಿಧಾನ (SOP) ನಿಯಮಗಳನ್ನು ಪರಿಷ್ಕರಣೆ ಮಾಡಿ ತನ್ನ ಎಸ್ಓಪಿಯಲ್ಲಿ ಸೇರ್ಪಡೆ ಮಾಡಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರು ನೀಡಿರುವ ಅಧ್ಯಯನ ವರದಿ ಆಧರಿಸಿ, ಮೆಟ್ರೋ ನಿರ್ಮಾಣ ಕಾಮಗಾರಿ ನಿರ್ವಹಿಸುವ ವೇಳೆ ಅನುಸರಿಸಬೇಕಾದ ನಿಯಮಗಳನ್ನು ನಮ್ಮ ಮೆಟ್ರೋ ರೂಪಿಸಿದೆ.
ನಗರದಲ್ಲಿ ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಪ್ರತಿ ಮೆಟ್ರೋ ಕಾಮಗಾರಿಯಲ್ಲಿ ಈ ಸುರಕ್ಷತಾ ನಿಯಮ/ ಮಾರ್ಗಸೂಚಿಗಳನ್ನು ಪಾಲಿಸುವಂತೆ BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೂಚಿಸಿದ್ದಾರೆ.
ಪಿಲ್ಲರ್ ನಿರ್ಮಾಣ ವೇಳೆ ಅದಕ್ಕೆ ಬಳಕೆಯಾದ ಕಂಬಿಗಳನ್ನು ಹಿಡಿದಿಡಲು ಕ್ರೇನ್ ಬಳಸನೇಕು. ಅದು ಬಳಕೆ ಆಗದಿದ್ದಕ್ಕೆ ಪಿಲ್ಲರ್ ಕುಸಿತದ ದುರಂತ ಸಂಭವಿಸಿದೆ. ಮುಂದಿನ ದಿನಗಳಲ್ಲಿಇಂಥ ಘಟನೆಗಳು ನಡೆಯಬಾರದು. ಹೀಗಾಗಿ ಐಐಎಸ್ಸಿ ತಜ್ಞರಿಗೆ ನಾವು ರೂಪಿಸಿರುವ ಮಾರ್ಗದರ್ಶಿ ನಿಯಮಗಳನ್ನು ಕಳಿಸಿಕೊಟ್ಟಿದ್ದೇವೆ. ಈ ಬಗ್ಗೆ ಐಐಎಸ್ಸಿ ನಿರ್ಧಾರದ ಬಳಿಕ ಅನುಸರಣೆಯ ಆದೇಶ ಹೊರಡಿಸುವುದಾಗಿ ಅವರು ತಿಳಿಸಿದರು.

ಕಾಮಗಾರಿಯಲ್ಲಿ ಅನುಸರಿಸಬೇಕಾದ ಹೊಸ ನಿಯಮಗಳು ಇವು
ಅನುಸರಿಸಲು BMRCL ರೂಪಿಸಿರುವ ಅಂಶಗಳನ್ನು ನೋಡುವುದಾದರೆ, 12 ಮೀಟರ್ವರೆಗೆ ಮೊದಲು ಕಾಂಕ್ರೀಟ್ ಹಾಕಿದ ಬಳಿಕವೇ ಮೇಲಿನ ಭಾಗಕ್ಕೆ ಕಬ್ಬಿಣ ಸರಳು ಕಟ್ಟಿ ನಿಲ್ಲಿಸಿ ನಂತರ ಕಾಂಕ್ರೀಟ್ ಹಾಕಬೇಕು. ಒಟ್ಟು 12 ಮೀಟರ್ನಿಂದ 18 ಮೀಟರ್ವರೆಗೆ ಕಂಬಿಗಳನ್ನು ಕಟ್ಟಿ ಕಾಂಕ್ರಿಟ್ ಹಾಕಬೇಕು. ನಂತರವಷ್ಟೇ 24 ಮೀಟರ್ ಎತ್ತರದಲ್ಲಿ ಕಬ್ಬಿಣ ಕಟ್ಟಿ ಕಾಂಕ್ರೀಟ್ ಸುರಿಯುವುದರಿಂದ ಒಟ್ಟು ಎತ್ತರವನ್ನು ಮೂರು ಹಂತಗಳಲ್ಲಿ ಸುರಕ್ಷಿತವಾಗಿ ತಲುಪಲು ಸಾಧ್ಯವಾಗುತ್ತದೆ.
ಈ ಮೂರು ಹಂತಗಳಲ್ಲಿ ಕಂಬಿ ಕಟ್ಟಿ ಕಾಂಕ್ರೀಟ್ ಹಾಕಿದರೂ ಕಡ್ಡಾಯವಾಗಿ ಕ್ರೇನ್ ಬಳಕೆ ಆಗಬೇಕು. ಕಾಮಗಾರಿಗೆ ಕನಿಷ್ಠ 12 ಎಂಎಂ ಸಾಮರ್ಥ್ಯದ ಗಾಯ್ ವೈಯರ್ ಹಾಕುವುದು ಕಡ್ಡಾಯ ಜೊತೆಗೆ ಕಬ್ಬಿಣದ ಪಿಲ್ಲರ್ನ ನಾಲ್ಕು ಮೂಲೆಯಲ್ಲೂ ಕಾಂಕ್ರೀಟ್ ನ ಹೆವಿ ವೇಟ್ ಬಾಕ್ಸ್ ಆಳವಡಿಸಬೇಕೆಂದು ಎಸ್ಓಪಿ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಆದಷ್ಟು ಶೀಘ್ರವೇ ಅಧಿಕೃತಗೊಳ್ಳಲಿವೆ.
ಈ ಮೇಲಿನ ಸೂಕ್ತ ನಿಯಮಗಳನ್ನು ಅನುಸರಿಸದ ಕಾರಣಕ್ಕೇ ಕಳೆದ ಜನವರಿ 10ರಂದು ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ ಕಬ್ಬಿಣದ ಮೆಟ್ರೋ ಪಿಲ್ಲರ್ ಕುಸಿದು ದುರಂತ ಸಂಭವಿಸಿತ್ತು. ತಾಯಿ ತೇಜಸ್ವಿನಿ ಹಾಗೂ ಅವರ ಎರಡೂವರೆ ವರ್ಷ ದ ಮಗು ವಿಹಾನ್ ಮೃತಪಟ್ಟಿದ್ದರು. ಇದಾದ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಗುಣಮಟ್ಟ, ಜವಾಬ್ದಾರಿ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದವು.












Click it and Unblock the Notifications