Karnataka Budget 2024: ನಮ್ಮ ಮೆಟ್ರೋ ಈ ಮಾರ್ಗಗಳು ನೀರ್ಣಾಯಕ: 1,150 ಹೊಸ ಬಸ್ ಬಿಡುಗಡೆ: ಗೆಹ್ಲೋಟ್
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಬಸ್ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದೆ. ಇದರಲ್ಲಿ ಎಲೆಕ್ಟ್ರಿಕ್, ಸ್ಟ್ಯಾಂಡರ್ಡ್ ಡೀಸೆಲ್ ಮತ್ತು ಮಿಡಿ ಬಸ್ಗಳು ಸೇರಿವೆ.
ಕರ್ನಾಟಕ ಬಜೆಟ್ ಫೆಬ್ರವರಿ 16ರಂದು ಮಂಡನೆ ಆಗಲಿದೆ. ಬಜೆಟ್ ಮೇಲಿನ ಅಧಿವೇಶನ 2024 ಫೆಬ್ರವರಿ 12 ರಂದು ಸೋಮವಾರ ಆರಂಭಗೊಂಡಿದೆ. ರಾಜ್ಯ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನಕ್ಕೂ ಮೊದಲು ಸರ್ಕಾರ ಆಡಳಿತ ಕುರಿತು ಮಾತನಾಡುವ ವೇಳೆ ಸಾರಿಗೆ ಇಲಾಖೆಯ ಸಾಧನೆ ವಿವರಿಸಿದರು.

ಕರ್ನಾಟಕ ಸಾರಿಗೆ ಇಲಾಖೆ ಆಕ್ಟಿವ್
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಈ ಎಂಟು ತಿಂಗಳಲ್ಲಿ ಸಾರಿಗೆ ಇಲಾಖೆ ಆಕ್ಟಿವ್ ಆಗಿ ಕೆಲಸ ಮಾಡಿದೆ. ಒಟ್ಟು 1,150 ಹೊಸ ಬಸ್ಗಳು ರಸ್ತೆಗಿಳಿದಿವೆ. ಇವಿ, ಡೀಸೆಲ್ ಮತ್ತು ಮಿಡಿ ಬಸ್ ಸೇರಿ 1,150 ಹೊಸ ಬಸ್ಗಳನ್ನು ಸರ್ಕಾರ ಪರಿಚಯಿಸಿದೆ. ಈ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕ ಸುಧಾರಣೆಗೆ ಸೂಕ್ತ ಕ್ರಮ ಕೈಗೊಂಡಿದೆ.
ಇಷ್ಟು ಬಸ್ಗಳನ್ನು ನಗರಗಳು ಮತ್ತು ಪಟ್ಟಣಗಳಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಟ್ರಾಫಿಕ್ ಮುಕ್ತಿಗೆ, ಸಂಚಾರ ಕಿರಿ ಕಿರಿ ತಪ್ಪಿಸಿಕೊಳ್ಳಲು ಜನರು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಾಯುಮಾಲಿನ್ಯ ಕಡಿಮೆ ಮಾಡಲು ಹಾಗೂ ಟ್ರಾಫಿಕ್ ಇಳಿಕೆಗೆ ಸಹಾಯವಾಗುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಐಟಿ ಕೇಂದ್ರಕ್ಕೆ ನೀಲಿ- ಹಳದಿ ಮಾರ್ಗಗಳು ನೀರ್ಣಾಯಕ
ರಾಜ್ಯಪಾಲರು ನಮ್ಮ ಮೆಟ್ರೋ ನೀಲಿ ಮಾರ್ಗದ ಜತೆಗೆ ಹಳದಿ ಮಾರ್ಗ ವಿಸ್ತರಣೆ, ಕಾರ್ಯಚರಣೆ ಕುರಿತು ಮಾತನಾಡಿದ್ದಾರೆ. ಬಹು ನಿರೀಕ್ಷಿತ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವಲ್ಲಿ ಮೆಟ್ರೋ ನೀಲಿ ಮಾರ್ಗವು ನೀರ್ಣಾಯಕವಾಗಿದೆ. ಮುಂದಿನ ವರ್ಷಗಳಲ್ಲಿ ಜನರು ಈ ಮಾರ್ಗದಲ್ಲಿ ಓಡಾಡಲು ಕಾತರರಾಗಿದ್ದಾರೆ ಎಂದು ತಿಳಿಸಿದರು.
ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ಗೆವರೆಗೆ ಸಂಪರ್ಕ ಕಲ್ಪಿಸುವ 'ಮೆಟ್ರೋ ಹಳದಿ ಮಾರ್ಗ'ವು ಪ್ರಮುಖ ಐಟಿ ಕೇಂದ್ರವಾಗಿರುವ ದಕ್ಷಿಣ ಬೆಂಗಳೂರಿನಲ್ಲಿರುವ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ನಗರದ ಉಳಿದ ಭಾಗಗಳಿಗೆ ಸಂಪರ್ಕಿಸುತ್ತದೆ.
ಸಿಲ್ಕ್ ಬೋರ್ಡ್, ಎಚ್ಎಸ್ಆರ್ ಲೇಔಟ್ನಂತಹ ಪ್ರಮುಖ ಜಂಕ್ಷನ್ಗಳು ಸೇರಿದಂತೆ 16 ನಿಲ್ದಾಣಗಳನ್ನು ಹೊಂದಿರುವ ಈ 19 ಕಿಮೀ.ನ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ವರೆಗಿನ 'ಹಳದಿ ಮಾರ್ಗ' ಮುಂದಿನ ಜುಲೈ 2024 ರ ವೇಳೆಗೆ, ಕಾರ್ಯ ನಿರ್ವಹಿಸಲಿದೆ ಎಂದರು.
ಇದು ಐಟಿ ವೃತ್ತಿಪರರಿಗೆ ಸಂಚಾರಕ್ಕೆ ಅನುಕೂಲವಾಗುವ ಜತೆಗೆ ಟ್ರಾಫಿಕ್ ಕಡಿಮೆ ಆಗಲಿದೆ, ಪ್ರಯಾಣದ ಸಮಯ ಇಳಿಕೆ ಆಗಲಿದೆ. ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಿರಿ ಕಿರಿ ತಕ್ಕಮಟ್ಟಿಗೆ ತಪ್ಪಲಿದೆ. ಅಲ್ಲದೇ ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಲಿವೆ.
ನಮ್ಮ ಮೆಟ್ರೋ ನೀಲಿ ಮಾರ್ಗ ವಿಸ್ತರಣೆ
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಮೆಟ್ರೋ ವಿಸ್ತರಣೆ ಆಗುತ್ತಿದೆ. ಇದು ನೀಲಿ ಮಾರ್ಗವಾಗಿದ್ದು, 2026 ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. 26 ಕಿಲೋ ಮೀಟರ್ನ ವಿಸ್ತರಣೆಯ ಮಾರ್ಗವು ಹೆಬ್ಬಾಳ ಜಂಕ್ಷನ್, ಯಲಹಂಕ, ಜಕ್ಕೂರು ಭಾಗಗಳಲ್ಲಿ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕಲಿದೆ.
ವಿಮಾನ ನಿಲ್ದಾಣದ ಪ್ರವೇಶವು ಮತ್ತಷ್ಟು ಸರಳವಾಗುತ್ತದೆ. ಹೊರ ವರ್ತುಲ ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ಜತೆಗೆ ಪ್ರವಾಸೋದ್ಯಮ ಮತ್ತು ವ್ಯಾಪಾರ ಪ್ರಯಾಣಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.
ಸದ್ಯ ಬೆಂಗಳೂರಿನಲ್ಲಿ ಮೆಟ್ರೋ ಹೊಸ ಮಾರ್ಗಗಳ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ. ಜತೆಗೆ ಹಾಲಿ ಮಾರ್ಗಗಳ ವಿಸ್ತರಣೆ ಆಗುತ್ತಿದೆ. ಅಲ್ಲದೇ ಉಪನಗರಗಳವರೆಗೂ ಮೆಟ್ರೋ ವಿಸ್ತರಣೆಗೆ ಚಿಂತನೆ ನಡೆದಿದೆ.












Click it and Unblock the Notifications