Namma Metro: ಮೆಟ್ರೋ ಸಾರಿಗೆಗೆ 13ನೇ ವಾರ್ಷಿಕೋತ್ಸವ, ಪ್ರಯಾಣಿಕರಿಗೆ ಸಿಗುತ್ತಾ ಗುಡ್ ನ್ಯೂಸ್!
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು ನಮ್ಮ ಮೆಟ್ರೋ ಸಾರಿಗೆಯು ಒಂದು ದಶಕಕ್ಕೂ ಹೆಚ್ಚು ಕಾಲ ಸುದೀಘ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ಅಕ್ಟೋಬರ್ 20ರಂದು ನಮ್ಮ ಮೆಟ್ರೋದಲ್ಲಿ 13 ವರ್ಷದ ವಾರ್ಷಿಕೋತ್ಸವದ ಸಂಭ್ರಮ ಕಳೆಗಟ್ಟಿದೆ. ಈ ಯಶಸ್ವಿ ಕಾರ್ಯಾಚರಣೆಗೆ ಜೊತೆಯಾದ ಪ್ರಯಾಣಿಕರಿಗೆ, ಧನ್ಯವಾದ ತಿಳಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದೇ ಖುಷಿಯಲ್ಲಿ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಲಿದೆಯಾ? ಇಲ್ಲಿದೆ ವಿವರ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) 2011ರ ಅಕ್ಟೋಬರ್ 20ರಂದು ಸಂಚಾರ ಸೇವೆ ಆರಂಭಿಸಿತ್ತು. ಆರಂಭದಲ್ಲಿ ಎಂಜಿ ರಸ್ತೆ, ಬೈಯಪ್ಪನಹಳ್ಳಿಯವರೆಗೆ ಓಡಿದ್ದ ಮೆಟ್ರೋ ರೈಲು ಕಳೆದ ಈ 13 ವರ್ಷಗಳಲ್ಲಿ ತನ್ನ ಕಬಂಧಬಾಹುವನ್ನು ಬೆಂಗಳೂರಿನ ಹೊರವಲಯಗಳಿಗೆ ಚಾಚಿದೆ. ಹೊಸ ಹೊಸ ಯೋಜನೆ, ಹಾಲಿ ಮೆಟ್ರೋ ಮಾರ್ಗ ವಿಸ್ತರಣೆಯಲ್ಲಿ ತೊಡಗಿರುವ ಮೆಟ್ರೋ ರೈಲುಗಳು ಸದ್ಯ 73 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ.

ಮೊದಲಿಗೆ ನೇರಳೆ ಮಾರ್ಗ ವಿಸ್ತರಣೆ ಜೊತೆಗೆ ಹಸಿರು ಮಾರ್ಗ ನಿರ್ಮಿಸಿ ಕಾರ್ಯಾಚರಣೆ ನಡೆಸಿದೆ. ಇಂದು ದೈನಂದಿನವಾಗಿ ಸುಮಾರು 08 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೊಸದಾಗಿ ಸುಮಾರು 20 ಕಿಲೋ ಮೀಟರ್ ಹಳದಿ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿ ವಾಣಿಜ್ಯ ಸಂಚಾರಕ್ಕೆ ಅಣಿಗೊಳಿಸಿದೆ. ಪ್ರಯಾಣಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ನಮ್ಮ ಮೆಟ್ರೋ ಸಾರಿಗೆ ಮೇಲೆ ಅವಲಂಬಿತ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ.
ಈ ವಾರ್ಷಿಕೋತ್ಸವ ಅಂಗವಾಗಿ ಹೊಸ ಮಾರ್ಗ ಹಾಗೂ ವಿಸ್ತರಣೆ ಮಾರ್ಗದಲ್ಲಿ ರೈಲು ಓಡಿಸುವ ಚಿಂತನೆಯನ್ನು ಮತ್ತಷ್ಟು ವೇಗಗೊಳಿಸುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.
200 ಕೀ.ಮೀ. ಮೆಟ್ರೋ ಜಾಲ ವಿಸ್ತರಣೆ ಯಾವಾಗ?
ಹಂತ ಹಂತವಾಗಿ ನಮ್ಮ ಮೆಟ್ರೋ ವಿಸ್ತರಣೆ ಮಾಡುತ್ತಿರುವ ಬಿಎಂಆರ್ಸಿಎಲ್ ಇನ್ನೆರಡು ವರ್ಷದಲ್ಲಿ ನಮ್ಮ ಮೆಟ್ರೋ ಜಾಲವನ್ನು 200 ಕೀಲೋ ಮೀಟರ್ಗೆ ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಆರಂಭ ಜಿಯೋಟೆಕ್ನಾಲಜಿ ಸರ್ವೇ ನಡೆಯುತ್ತಿದೆ. ಈ ಯೋಜನೆ ಮೂರು ವಿಭಾಗಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.
ಆರ್.ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮಾರ್ಗವನ್ನು ಹೊಸೂರು ವರೆಗೆ ವಿಸ್ತರಿಸುವ ಚಿಂತನೆಗೆ ಸದ್ಯ ಬ್ರೇಕ್ ಬಿದ್ದಿದೆ. ಬೆಂಗಳೂರಿನಿಂದ ರಾಮನಗರ, ತುಮಕೂರು ವರೆಗೆ ಮಟ್ರೋ ಮಾರ್ಗ ಸ್ಥಾಪಿಸುವ ಬಗ್ಗೆಯು ಚರ್ಚೆಗಳಾಗುತ್ತಿವೆ.
ಸದ್ಯ ಹಸಿರು ಮಾರ್ಗದ ರೇಷ್ಮೆ ರಸ್ತೆಯಿಂದ ನಾಗಸಂದ್ರವರೆಗಿನ ಮಾರ್ಗವು ಮಾದಾವರ ವರೆಗೆ ವಿಸ್ತರಣೆ ಆಗಿದೆ. ಪರೀಕ್ಷೆಗಳೆಲ್ಲವು ಪೂರ್ಣಗೊಂಡಿದ್ದು, ಇನ್ನೇನು ವಾಣಿಜ್ಯ ಕಾರ್ಯಾಚರಣೆ ಶುರುವಾಗಬೇಕಿದೆ.
ಕೆಲ ಸವಾಲು ಎದುರಿಸುತ್ತಿರುವ ನಮ್ಮ ಮೆಟ್ರೋ
ಅದೇ ರೀತಿ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಡ್ರೈವರ್ಲೆಸ್ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಸಹ ಎಲ್ಲ ಪ್ರಾಯೋಗಿಕ, ಸಿಗ್ನಲ್, ಸುರಕ್ಷತೆ ತಪಾಸಣೆ ಪೂರ್ಣವಾಗಿದೆ. ಆದರೆ ರೈಲುಗಳ ಕೊರತೆಯಿಂದಾಗಿ, ಹೆಚ್ಚುತ್ತಿರುವ ಪ್ರಯಾಣಿಕರಿಂದಾಗಿ ಬಿಎಂಆರ್ಸಿಎಲ್ ಒಂದಷ್ಟು ಸವಾಲು ಎದುರಿಸುತ್ತಿದೆ. ಹೀಗಾಗಿ ಹೊಸ ಮಾರ್ಗ ತೆರೆಯಲು ವಿಳಂಬವಾಗುತ್ತಿದೆ.
ನಮ್ಮ ಮಟ್ರೋ ಕಾಳೆನ ಅಗ್ರಹಾರ, ಜೆಪಿ ನಗರದ ಗುಲಾಬಿ ಮಾರ್ಗ, ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರಂ ಮಾರ್ಗವಾಗಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ಇವೆಲ್ಲ ನಿಗದಿತ ಅವಧಿಗೆ ಪೂರ್ಣಗೊಂಡರೆ ಮುಂದಿನ ಎರಡೇ ವರ್ಷಗಳಲ್ಲಿ ನಮ್ಮ ಮೆಟ್ರೋ ಜಾಲ ಅಷ್ಟ ದಿಕ್ಕುಗಗಳಿಗೆ ವ್ಯಾಪಿಸಿದಂತಾಗುತ್ತದೆ.
ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಪರಿಚಯ
ಬೆಂಗಳೂರಿನ ಮಟ್ಟಿಗೆ ನಮ್ಮ ಮೆಟ್ರೋ ಮಹತ್ವ ಕೊಡುಗೆ ಎನ್ನಬಹುದು. ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ದೇಶವ್ಯಾಪಿ ಸದ್ದು ಮಾಡುತ್ತಿದೆ. ಇದರ ಮಧ್ಯೆ ಜನರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ 13 ವರ್ಷ ಪೂರ್ಣಗೊಳಿಸಿದೆ. ಟ್ರಾಫಿಕ್ ನಿಯಂತ್ರಿಸುವ ಜೊತೆಗೆ ಪ್ರಯಾಣಿಕ ಸ್ನೇಹಿ ಟೋಕನ್ ಟಿಕೆಟ್, ಕ್ಯೂಆರ್ ಕೋಡ್ ಟಿಕೆಟ್, ಮೆಟ್ರೋ ಕಾರ್ಡ್ ಹೀಗೆ ಕಾಲ ಕಾಲಕ್ಕೆ ಹೊಸ ವ್ಯವಸ್ಥೆ ಪರಿಚಯಿಸಿದೆ. ಅಗತ್ಯ ವಿದ್ದಾಗ ಪೇಪರ್ ಟಿಕೆಟ್ ಸಹ ಒದಗಿದೆ.
ಇದೆಲ್ಲ ಒಳಿತುಗಳ ಜೊತೆಗೆ ನಮ್ಮ ಮೆಟ್ರೋ, ಇತ್ತೀಚೆಗೆ ಆತ್ಮಹತ್ಯೆ ಯತ್ನ, ಟಿಕೆಟ್ ರಹಿತ ಪ್ರಯಾಣ, ಅಸಭ್ಯ ವರ್ತನೆ, ದಂಡ, ಕೆಲವು ಅಹಿತಕರ ಘಟನೆಗಳಿಂದ ಸುದ್ದಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.












Click it and Unblock the Notifications