ವಾರ್ಡ್ ಸಮಿತಿ ಸಭೆಗೆ 'ನಮ್ಮ ಬೆಂಗಳೂರು ಫೌಂಡೇಷನ್' 4 ಸಲಹೆ
ಬೆಂಗಳೂರು, ನವೆಂಬರ್ 16: ಬರುವ ಡಿಸೆಂಬರ್ ನಿಂದ ಪ್ರತಿ ತಿಂಗಳ ಮೊದಲ ಶನಿವಾರಗಳಂದು ಕಡ್ಡಾಯವಾಗಿ ವಾರ್ಡ್ ಸಮಿತಿ ಸಭೆಗಳನ್ನು ಆಯೋಜಿಸಬೇಕು ಎಂಬ ಬೆಂಗಳೂರು ಆಯುಕ್ತರು ಹಾಗೂ ಮೇಯರ್ ನಿರ್ಧಾರವನ್ನು ನಮ್ಮ ಬೆಂಗಳೂರು ಫೌಂಡೇಷನ್ ಮುಖ್ಯಸ್ಥ ಎನ್.ಆರ್.ಸುರೇಶ್ ಸ್ವಾಗತಿಸಿದ್ದಾರೆ.
ಜನರ ಕೈಗೆ ಅಧಿಕಾರ ನೀಡಬೇಕು ಎಂಬ ಉದ್ದೇಶದಿಂದ 1992ರಲ್ಲಿ ಸಂವಿಧಾನದ 74ನೇ ತಿದ್ದುಪಡಿ ತಂದು ಇಪ್ಪತ್ತೈದು ವರ್ಷ ಪೂರ್ಣಗೊಳಿಸುತ್ತಿರುವ ಈ ಸಂದರ್ಭದಲ್ಲಿ ಇಂಥ ನಿರ್ಧಾರ ಸ್ವಾಗತಾರ್ಹ ಎಂದು ಮೆಚ್ಚಿಕೊಂಡಿದ್ದಾರೆ.

ಇದೇ ವೇಳೆ ವಾರ್ಡ್ ಸಮಿತಿ ಸಭೆ ನಡೆಸುವ ವೇಳೆ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಕೆಲ ವಿಚಾರಗಳ ಪ್ರಸ್ತಾವ ಮಾಡಿದ್ದು, ಅವು ಇಂತಿವೆ:
* ಡಿಸೆಂಬರ್ ನಲ್ಲಿ ನಡೆಯುವ ಸಭೆಗೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಹೊರಡಿಸಬೇಕು ಹಾಗೂ ಅದನ್ನೇ ವಾರ್ಡ್ ನ ಎಲ್ಲ ಸಾರ್ವಜನಿಕ ಕಚೇರಿಯಲ್ಲಿ 23ನೇ ನವೆಂಬರ್ ನೊಳಗೆ (ಶುಕ್ರವಾರ) ಪ್ರಚಾರ ಮಾಡಬೇಕು.
* ಎಲ್ಲ ವಾರ್ಡ್ ಸಮಿತಿ ಸಭೆಗಳು ಕೂಡ ವಾರ್ಡ್ ಸಮಿತಿ ನಿಯಮ 2016ರ ಪ್ರಕಾರವೇ ನಡೆಯುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ
* ವಾರ್ಡ್ ಸಮಿತಿ ಸಭೆಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಹಾಗೂ ಸಭೆಯ ವೇಳೆಯಲ್ಲಿ ನಾಗರಿಕರಿಗೆ ಅಗತ್ಯ ಇರುವ ಸೌಕರ್ಯ ಪೂರೈಸಿ.
* ಸಭೆಯಲ್ಲಿ ಚರ್ಚೆಯಾಗುವ ವಿಷಯಗಳನ್ನು ದಾಖಲು ಮಾಡಿ ಹಾಗೂ ಅವುಗಳು ಸಾರ್ವಜನಿಕರಿಗೆ ಸಿಗುವಂತೆ ನೋಡಿಕೊಳ್ಳಬೇಕು
ಉತ್ತರದಾಯಿತ್ವ ಇಲ್ಲದಿರುವುದು, ಸರಿಯಾದ ಯೋಜನೆ ಇಲ್ಲದೆ ಬೆಂಗಳೂರು ನಗರ ಬದುಕಲು ದುರ್ಭರ ಆಗುತ್ತಿದೆ. ಮುಖ್ಯವಾಗಿ ಈ ಸಭೆಯ ಉದ್ದೇಶವೇ ಸರಕಾರದ ಸುಧಾರಣೆಗಳು ವಾರ್ಡ್ ಮಟ್ಟದಲ್ಲಿ ನಡೆಯಲಿ ಎಂಬುದು. ಈಗಿರುವ ಸ್ಥಿತಿ ನೋಡಿದರೆ, ವಾರ್ಡ್ ಹಾಗೂ ಕಾರ್ಪೊರೇಷನ್ ಗಳಿಗೆ ಬೇಕಾದ ಅನುದಾನ ದುರುಪಯೋಗ ಮಾಡಿಕೊಳ್ಳಲು ಪೂರಕವಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯದ ಪಾಲಿಗೆ ಬೆಂಗಳೂರಿಗೆ ಆರ್ಥಿಕ ಮೂಲದ ಎಂಜಿನ್. ದುರದೃಷ್ಟ ಏನೆಂದರೆ, ಈಗಿನ ಆಡಳಿತದ ಮಾದರಿಯಲ್ಲಿ ಪಾರದರ್ಶಕತೆ ಇಲ್ಲ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆದ್ದರಿಂದ ಸಾರ್ವಜನಿಕರ ಹಣ ಹೇಗೆ ಖರ್ಚಾಗುತ್ತಿದೆ ಎಂಬ ಬಗ್ಗೆ ಆಡಳಿತ ಸುಧಾರಣೆ ಆಗಬೇಕಿದೆ ಒಟ್ಟಾರೆ ಆಡಳಿತ ಸುಧಾರಣೆಗೆ ಸಮಗ್ರ ಹಾಗೂ ಪಾರದರ್ಶಕ ಸಾರ್ವಜನಿಕ ಚರ್ಚೆ ಆಗಬೇಕು. ಅದು ವಾರ್ಡ್ ಮಟ್ಟದಿಂದಲೇ ಶುರುವಾಗಬೇಕು ಎಂದು ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮೇಯರ್ ಗೆ ಈ ಬಗ್ಗೆ ಅವರು ಒತ್ತಾಯ ಮಾಡಿದ್ದು, ವಿಕೇಂದ್ರೀಕರಣ- ಪಾರದರ್ಶಕತೆ-ಉತ್ತರದಾಯಿತ್ವ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಂದ ತಿದ್ದುಪಡಿ ಉದ್ದೇಶ ಈಡೇರಬೇಕು ಎಂದು ಹೇಳಿದ್ದಾರೆ.












Click it and Unblock the Notifications