ಲೇಖಕ, ಪ್ರೊಫೆಸರ್, ಧರ್ಮಾಧಿಕಾರಿ ಸುಬ್ರಮಣ್ಯ ಸ್ವಾಮಿ ವಿಧಿವಶ
ಬೆಂಗಳೂರಿನ ವಿಜಯ ಕಾಲೇಜಿನಲ್ಲಿಪ್ರೊಫೆಸರ್ ಆಗಿ, ಮುಕ್ತನಾಗ ದೇಗುಲ ಸ್ಥಾಪಿಸಿ, ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣ್ಯ ಶಾಸ್ತ್ರಿಗಳು ನಿಧನ
ಬೆಂಗಳೂರು, ಮೇ 30: ಬೆಂಗಳೂರಿನ ವಿಜಯ ಕಾಲೇಜಿನಲ್ಲಿಪ್ರೊಫೆಸರ್ ಆಗಿ, ಮುಕ್ತನಾಗ ದೇಗುಲ ಸ್ಥಾಪಿಸಿ, ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣ್ಯ ಶಾಸ್ತ್ರಿಗಳು ನಿಧನರಾಗಿದ್ದಾರೆ.
ಬನಶಂಕರಿಯ ಈಶ್ವರಿನಗರದಲ್ಲಿ ನೆಲೆಸಿದ್ದ ಸುಬ್ರಮಣ್ಯ್ ಶಾಸ್ತ್ರಿಗಳು ಪತ್ನಿ ಗೌರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದೇಗುಲದ ಆವರಣದಲ್ಲಿ ಸೋಮವಾರಂದು ನೆರವೇರಿಸಲಾಗಿದೆ.
ಎಂಕಾ ಪದವಿ ಪಡೆದಿದ್ದ ಸುಬ್ರಮಣ್ಯ ಅವರು ಬಿಎನ್ಎಂ ಕಾಲೇಜು, ಬಿಎಂ ಎಸ್ ಕಾಲೇಜ್, ಬಿಎಇಎಸ್ ,ಎಂಇಎಸ್, ಎಪಿಎಸ್ ಆಲ್ಲದೆ ವಿಜಯ ಕಾಲೇಜಿನಲ್ಲಿ ಕಾಮರ್ಸ್ ವಿಷಯದಲ್ಲಿ ಪ್ರೊಫೆಸರ್ ಆಗಿದ್ದರು. ಪಿಯು, ಡಿಗ್ರಿ ಕಾಲೇಜುಗಳಿಗೆ ಪಠ್ಯ ಪುಸ್ತಕಗಳನ್ನು ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಎಸ್ಎಸ್ ಎಲ್ ಸಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುತ್ತಿದ್ದರು.
ಶಾಸ್ತ್ರಿಗಳು, ಒಂದು ಕಾಲದಲ್ಲಿ ಪುಟ್ಟಣ್ಣ ಕಣಗಾಲ್, ವಾದಿರಾಜ್,ರತ್ನಾಕರ್ ಮುಂತಾದವರಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 25ಕ್ಕೂ ಅಧಿಕ ಸಿನಿಮಾ ಹಾಗೂ ಅನೇಕ ನಾಟಕಗಳಲ್ಲಿ ನಟಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ ಭೀಷ್ಮ ಎನಿಸಿಕೊಂಡಿದ್ದ ಸಾಹಿತಿ ದಿವಂಗತ ಸಾರೊಟ್ ಅಶ್ವಥ್ ಅವರ ಪುತ್ರರಾಗಿದ್ದ ಸುಬ್ರಮಣ್ಯ ಶಾಸ್ತ್ರಿ(69) ಅವರು ವಾಸ್ತು ಶಾಸ್ತ್ರದಲ್ಲಿ ಪರಿಣತಿ ಪಡೆದುಕೊಂಡರು.
ವಿಶ್ವದಲ್ಲೇ ಅತಿದೊದ್ದ ಏಕಶಿಲಾ ನಾಗದೇವರ ವಿಗ್ರಹ(21 ಅಡಿ) ನಿರ್ಮಿಸಿ, ಮುಕ್ತನಾಗ ದೇಗುಲ ಸ್ಥಾಪಿಸಿದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಭಕ್ತರನ್ನು ಹೊಂದಿದ್ದರು. ಆರ್ಯಭಟ, ಕೆಂಪೇಗೌಡ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು. ಅನೇಕ ಟಿವಿ ವಾಹಿನಿಗಳಲ್ಲಿ ವಾಸ್ತು, ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವು ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.