ಸಿದ್ದರಾಮಯ್ಯ ಧೂಳಿಗೂ ಎಂಟಿಬಿ ನಾಗರಾಜ್ ಸಮವಿಲ್ಲ: ಭೈರತಿ ಸುರೇಶ್
ಬೆಂಗಳೂರು, ನವೆಂಬರ್ 19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಸಿದ್ದರಾಮಯ್ಯನವರ ಧೂಳಿಗೂ ಸಮವಿಲ್ಲ ಎಂದು ಭೈರತಿ ಸುರೇಶ್ ಕಿಡಿಕಾರಿದ್ದಾರೆ. ಹೊಸಕೋಟೆಯ ಕಾಂಗ್ರೆಸ್ ಕಚೇರಿ ಬಳಿ ಮಾತನಾಡಿದ ಅವರು ಸಿದ್ದರಾಮಯ್ಯಗೆ ಮೋಸ ಮಾಡಿ ಹೋದವರನ್ನು ಸೋಲಿಸಬೇಕೆಂದರು.
ಎಂಟಿಬಿ ಅಂದ್ರೆ ಪ್ರಾಮಾಣಿಕ ಅಂತ ಸಿಎಂ ಯಡಿಯೂರಪ್ಪ ಹೇಳ್ತಾರೆ, ಕಾಂಗ್ರೆಸ್ ನಿಂದ ಬಿಜೆಪಿಗೆ ರಾತ್ರೋ ರಾತ್ರಿ ಓಡಿ ಹೋಗಿದ್ದು ಪ್ರಾಮಾಣಿಕತೆನಾ..? ಎಂದು ಪ್ರಶ್ನಿಸಿದರು. ಎಂಟಿಬಿ ನಾಗರಾಜ್ ಬಗ್ಗೆ ಈ ಹಿಂದೆ ಬಿಜೆಪಿ ನಾಯಕರು ಏನೇನು ಮಾತನಾಡಿದ್ದಾರೆ ಎಂದು ಗೊತ್ತಿದೆ, ಉಪ ಚುನಾವಣೆಯಲ್ಲಿ ಹೊಸಕೋಟೆ ಜನರು ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.

ನಾಗರಾಜ್ ಬಳಿ ಸಾವಿರಾರು ಕೋಟಿ ಹಣ ಇರಬಹುದು ಆದರೆ ಸಿದ್ದರಾಮಯ್ಯ ಬಳಿ ಲಕ್ಷಾಂತರ ಜನರ ಬೆಂಬಲವಿದೆ ಎಂದರು. ಹಣದಿಂದ ಮತವನ್ನು ಪಡೆಯಲು ಸಾಧ್ಯವಿಲ್ಲ, ವಿಶಾಲ ಹೃದಯವಿರಬೇಕು ಅದು ಸಿದ್ದರಾಮಯ್ಯನವರ ಬಳಿ ಇದೆ ಎಂದು ಹೇಳಿದರು.
ಅವರು 25ನೇ ವಯಸ್ಸಿಗೇ ಶಾಸಕರಾಗಿದ್ದವರು. 45 ವರ್ಷಗಳಿಂದ ಯಾರ ಬಳಿಯೂ ಸಹಾಯ ಪಡೆದುಕೊಳ್ಳದೇ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರನ್ನು ಟೀಕಿಸುವ ಎಂಟಿಬಿ ಈ ಬಾರಿ ಸೋಲಿನ ರುಚಿ ನೋಡಲಿದ್ದಾರೆ ಎಂದು ಹೇಳಿದರು.












Click it and Unblock the Notifications