ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಗಂಭೀರ ಆರೋಪ ಮಾಡಿದ ರೇಣುಕಾಚಾರ್ಯ!
ಬೆಂಗಳೂರು, ಡಿ. 18: ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಕೋಪ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಮಾತನಾಡಿರುವ ರೇಣುಕಾಚಾರ್ಯ ಅವರು, ಕೋಡಿಹಳ್ಳಿ ಅವರ ಮೇಲೆ ಹರಿಹಾಯ್ದಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಅಮಾಯಕರಿಂದ ಕೋಟಿ ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ರೇಣುಕಾಚಾರ್ಯ ಅವರು ಮಾಡಿದ್ದಾರೆ. ಈ ಕುರಿತು ಬೆಂಗಳೂರಿನ ಆರ್ಪಿಸಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
ಸರ್ಕಾರಕ್ಕೆ ಬ್ಲ್ಯಾಕ್ಮೇಲ್ ಮಾಡುವವನು ನೀನು. ಕಾಂಗ್ರೆಸ್ ಸರ್ಕಾರ ಇದ್ದಾಗ ನೀನು ತುಟಿ ಬಿಚ್ಚಲಿಲ್ಲ. ಸತ್ಯಹರಿಶ್ಚಂದ್ರ ನೀನು. ಇದಕ್ಕೆ ಉತ್ತರ ಕೊಡು ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ರೇಣುಕಾಚಾರ್ಯ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಿನ್ನ ಆಸ್ತಿ ಇದ್ದಿದ್ದೆ ಕೇವಲ ಎರಡೂವರೆ ಎಕರೆ, ಎಲ್ಲಿಂದ ಬಂತು ಇಷ್ಟೊಂದು ಸಂಪತ್ತು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಕೋಟಿ ಕೋಟಿ ವಂಚಿಸಿದ ಕೋಡಿಹಳ್ಳಿ
ಮನೆ ಕಟ್ಟಿಸಿಕೊಡುವುದಾಗಿ ಕೋಟಿ ಕೋಟಿ ರೂಪಾಯಿಗಳನ್ನು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಂಚಿಸಿದ್ದಾರೆಂದು ರೇಣುಕಾಚಾರ್ಯ ಆರೋಪಿಸಿದ್ದಾರೆ. 2012ರಲ್ಲಿ ಈ ಪ್ರಕರಣ ನಡೆದಿದ್ದು, ಮನೆ ನಿರ್ಮಿಸಿಕೊಡೋದಾಗಿ ಹೇಳಿ ತಲಾ 3 ರಿಂದ 6 ಲಕ್ಷ ರೂಪಾಯಿಗಳನ್ನು ಸುಮಾರು 200 ಜನರಿಂದ ವಸೂಲಿ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಕೋಡಿಹಳ್ಳಿ ಗೂಂಡಾಗಿರಿ
ಕೋಡಿಹಳ್ಳಿ ಚಂದ್ರಶೇಖರ್, ಆರ್ಪಿಸಿ ಬಡಾವಣೆಯ ಜಿ. ಭೈರಯ್ಯ ಎಂಬುವರಿಂದ ಹಣ ವಸೂಲಿ ಮಾಡಿದ್ದಾರೆ. ಅವರಿಂದ ಆರು ಲಕ್ಷ ರೂ. ಹಣ ಪಡೆದಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು, ಹಣ ವಾಪಾಸ್ ಕೇಳಿದಾಗ, ಭೈರಯ್ಯ ಅವರ ಮೇಲೆ ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವ್ರಿಂದ ರಕ್ಷಣೆ
ಈ ಬಗ್ಗೆ ವಿಜಯನಗರ ಪೊಲೀಸ್ ಠಾನೆಯಲ್ಲಿ ದೂರು ದಾಖಲಾಗಿದೆ. ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಾದಾಗ 2013 ರಲ್ಲಿ ಕೇವಲ 1.5 ಲಕ್ಷ ರೂ.ಗಳನ್ನು ಮಾತ್ರ ಭೈರಯ್ಯ ಅವರಿಗೆ ಹಿಂದಿರುಗಿಸಿದ್ದಾರೆ. ಈ ರೀತಿ ಸುಮಾರು 200 ಜನರಿಗೆ ಮೋಸ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.

ಮೂರು ಕೋಟಿ ರೂ. ವಂಚನೆ
ಹೀಗೆ ಮಾಡಿರುವ ವಂಚನೆ ಮೂರು ಕೋಟಿ ರೂ.ಗಳಿಗೂ ಮಿಕ್ಕುತ್ತದೆ. ಅಮಾಯಕರಿಂದ ಹಣ ವಸೂಲಿ ಮಾಡಿರುವ ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಕಲಿ ಹೋರಾಟಗಾರ. ಹಸಿರು ಶಾಲಿಗೆ ಇರುವ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ದಾಖಲೆ ಸಹಿತ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮಾಡಿದ್ದಾರೆ.
Recommended Video

ರೈತರು ಸತ್ತಾಗ ಹೋಗಲಿಲ್ಲ
ಮಂಡ್ಯ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಂಡರು. ಆ ಮನುಷ್ಯ ಮೃತ ರೈತ ಕುಟುಂಬಗಳಿಗೆ ಯಾಕೆ ಸಾಂತ್ವನ ಹೇಳಲು ಹೋಗಲಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಹೋರಾಟಗಳನ್ನು ಮಾಡುವುದೇ ಇಲ್ಲ. ಆ ಮನುಷ್ಯ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.












Click it and Unblock the Notifications