Cauvery Expressway : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಕಾವೇರಿ ಎಕ್ಸ್ಪ್ರೆಸ್ವೇ ಎಂದು ಹೆಸರಿಡಲು ಮನವಿ
ಬೆಂಗಳೂರು, ಡಿ. 21: ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಗೆ ಕಾವೇರಿ ಎಕ್ಸ್ಪ್ರೆಸ್ ವೇ ಎಂದು ಹೆಸರಿಸುವಂತೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.
ಮೈಸೂರು-ಬೆಂಗಳೂರು 10 ಲೇನ್ಗಳ ಎಕ್ಸ್ಪ್ರೆಸ್ ಹೆದ್ದಾರಿಗೆ ಕಾವೇರಿ ಎಕ್ಸ್ಪ್ರೆಸ್ ವೇ ಎಂದು ಹೆಸರಿಸುವಂತೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ದಶಪಥ ಎಕ್ಸ್ಪ್ರೆಸ್ ಹೈವೇ ಜನವರಿ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದ್ದು, ಮಾರ್ಚ್ ತಿಂಗಳಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಈ ದಶಪಥ ರಾಷ್ಟ್ರೀಯ ಹೆದ್ದಾರಿಗೆ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಎಂದೇ ಕರೆಯಲಾಗುತ್ತಿದೆ. ಹೀಗಾಗಿ ಇದಕ್ಕೆ ಕಾವೇರಿ ಎಕ್ಸ್ಪ್ರೆಸ್ ವೇ ಎಂದು ಹೆಸರಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಇನ್ನು, ಹೆದ್ದಾರಿ ನಿರ್ಮಾಣ ಕಾರ್ಯದಿಂದಾಗಿ ಎಕ್ಸ್ಪ್ರೆಸ್ವೇ ಹಾದುಹೋಗುವ ಹಳ್ಳಿಗಳು ಮತ್ತು ನಗರ ಪ್ರದೇಶಗಳೆರಡರಲ್ಲೂ ಆಸ್ತಿಯ ಮೌಲ್ಯ ಹೆಚ್ಚಾಗಿದೆ. ಜೊತೆಗೆ ರಾಮನಗರ, ಚನ್ನಪಟ್ಟಣದಂತಹ ನಗರಗಳಲ್ಲಿ ಬಾಡಿಗೆ ಮೌಲ್ಯವೂ ಹೆಚ್ಚಾಗಿದೆ.
ಮೈಸೂರು - ಬೆಂಗಳೂರಿನ ಎಕ್ಸ್ಪ್ರೆಸ್ ವೇ ಯೋಜನೆ ಘೋಷಿಸಿ ಅಂದಾಜು ನಾಲ್ಕು ವರ್ಷ ಕಳೆದಿವೆ. ಕುತೂಹಲ ಕೆರಳಿಸಿದ್ದ ಈ ರಾಷ್ಟ್ರೀಯ ಹೆದ್ದಾರಿ ನವೀಕರಣ ಯೋಜನೆಯನ್ನು ಅಂದಾಜು 2,919 ಕೋಟಿ ರೂಪಾಯಿಯಲ್ಲಿ ಮುಗಿಸಲು ತೀರ್ಮಾನಿಸಿದ್ದ ಈ ಪೈಕಿ ಈಗಾಗಲೇ 1,939 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಸಂಸತ್ತಿಗೆ ಕೇಂದ್ರ ಸಚಿವರು ವಿವರಿಸಿದ್ದರು.
ಈ ಹೆದ್ದಾರಿಯಿಂದಾಗಿ ಮೈಸೂರು - ಬೆಂಗಳೂರು ಮಧ್ಯದ ಸುಮಾರು 140 ಕಿ.ಮೀ. ದೂರದ ಪ್ರಯಾಣ ವ್ಯಾಪ್ತಿಯನ್ನು ಕೇವಲ 90 ನಿಮಿಷದಲ್ಲಿ ಕ್ರಮಿಸಬಹುದಾಗಿದೆ. ಸದ್ಯ ಇವೆರಡು ನಗರದ ನಡುವಿನ ಸಂಚಾರ ಸಮಯ ಮೂರು ಗಂಟೆ ಹಿಡಿಯುತ್ತಿದೆ. ಕಾಮಗಾರಿ ಬಳಿಕ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ ಆಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಈ ಹಿಂದೆ ತಿಳಿಸಿದ್ದರು.












Click it and Unblock the Notifications