ಬಿಬಿಎಂಪಿ ಮೇಯರ್ ಚುನಾವಣೆ, ಡಿ.ಕೆ.ಸುರೇಶ್ ಬಂಡಾಯ?
ಬೆಂಗಳೂರು, ಸೆಪ್ಟೆಂಬರ್ 20 : 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ' ಎಂದು ಸಂಸದ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು. ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.
ಬುಧವಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಮತ್ತು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಪತ್ರಿಕಾಗೋಷ್ಠಿ ನಡೆಸಿದರು. 'ಇದನ್ನು ಬಂಡಾಯದ ಪತ್ರಿಕಾಗೋಷ್ಠಿ ಎಂದು ಬೇಕಾದರೂ ತಿಳಿದುಕೊಳ್ಳಿ' ಎಂದರು.

'ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಮೇಯರ್ ಚುನಾವಣೆ ಬಗ್ಗೆ ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಗೆ ನನ್ನನ್ನು ಆಹ್ವಾನಿಸಿರಲಿಲ್ಲ' ಎಂದು ಡಿ.ಕೆ.ಸುರೇಶ್ ದೂರಿದರು.
'ನನ್ನ ಕ್ಷೇತ್ರದ ಒಬ್ಬರು ಮೇಯರ್ ಆದರೆ ನನಗೆ ಖುಷಿಯಾಗುತ್ತದೆ. ವೇಲು ನಾಯಕ್ ಅಥವ ಅಂಜನಪ್ಪ ಅವರನ್ನು ಈ ಬಾರಿ ಮೇಯರ್ ಹುದ್ದೆಗೆ ಆಯ್ಕೆ ಮಾಡಬೇಕು' ಎಂದು ಡಿ.ಕೆ.ಸುರೇಶ್ ಪಕ್ಷದ ನಾಯಕರನ್ನು ಒತ್ತಾಯಿಸಿದರು.
'ಬಿಬಿಎಂಪಿ ಮೇಯರ್ ಆಯ್ಕೆಯ ವಿಚಾರದಲ್ಲಿ ಸಂಸದರನ್ನು ಮರೆತಿದ್ದಾರೆ. ನಮ್ಮ ಹಕ್ಕು ಪ್ರತಿಪಾದನೆ ಮಾಡಿದರೆ ನಾಯಕರು ತಲೆ ಸವರಿ ಕಳುಹಿಸುತ್ತಾರೆ' ಎಂದು ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಎಂಪಿಯಲ್ಲಿ ಮೇಯರ್ ಪಟ್ಟ ಜೆಡಿಎಸ್ ಪಾಲಾಗಲಿದೆಯೇ?, ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆಯೇ? ಎಂಬುದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಎರಡೂ ಪಕ್ಷಗಳು ಹಂಚಿಕೊಳ್ಳುತ್ತವೆ. ಈ ಬಾರಿ ಜೆಡಿಎಸ್ ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟಿದೆ.












Click it and Unblock the Notifications