ಕಲಾವಿದ ಡಾ.ಟಿ.ಬಿ ಸೊಲಬಕ್ಕನವರ ನಿಧನಕ್ಕೆ ಸಿಎಂ, ಸಚಿವರಿಂದ ಶೋಕ ಸಂದೇಶ
ಬೆಂಗಳೂರು, ನವೆಂಬರ್ 19: ನಾಡಿನ ಹಿರಿಯ ಕಲಾವಿದ ಡಾ.ಟಿ.ಬಿ ಸೊಲಬಕ್ಕನವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಕಲಾವಿದ ಸೊಲಬಕ್ಕನವರ ಕೈಚಳಕದಲ್ಲಿ ಅರಳಿದ ಮಾದರಿ ಪಾರಂಪರಿಕ ಗ್ರಾಮವನ್ನು ಜಕ್ಕೂರಿನಲ್ಲಿ ಉದ್ಘಾಟಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ""ಬಹುಮುಖ ಪ್ರತಿಭೆಯ ಟಿ.ಬಿ. ಸೊಲಬಕ್ಕನವರ ಅವರು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ದೊಡ್ಡಾಟ ಟ್ರಸ್ಟ್ ನ ಸಂಸ್ಥಾಪಕ ರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ'' ಎಂದರು.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ರಾಕ್ ಗಾರ್ಡನ್, ಆಲಮಟ್ಟಿ ಮತ್ತಿತರ ಕಡೆಗಳಲ್ಲಿ ನಿರ್ಮಿಸಿರುವ ರಾಕ್ ಗಾರ್ಡನ್ ಗಳಲ್ಲಿ ಸೊಲಬಕ್ಕನವರ ತಮ್ಮ ಅಪೂರ್ವ ಕಲಾ ಕೌಶಲ್ಯವನ್ನು ಮೆರೆದಿದ್ದಾರೆ. ಇವರ ನಿಧನದಿಂದ ಕಲಾ ಜಗತ್ತಿನ ಅದ್ಭುತ ಪ್ರತಿಭೆಯನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಡಾ.ಟಿ. ಬಿ. ಸೊಲಬಕ್ಕನವರ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಸೊಲಬಕ್ಕನವರ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದರು. ದೇಶೀ ಕಲೆಯ ಪ್ರಚಾರಕರಾಗಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಸಂತಾಪ ಸೂಚಕದಲ್ಲಿ ತಿಳಿಸಿದ್ದರು.












Click it and Unblock the Notifications