ತಾಯಿ ಮಕ್ಕಳಿಗೆ ವಿಷವಿಕ್ಕಿದ ಕಿತ್ತು ತಿನ್ನುವ ಬಡತನ
ಬೆಂಗಳೂರು, ಸೆಪ್ಟೆಂಬರ್, 12 : ಬಡತನದ ಬೇಗೆಯಿಂದ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿದ್ದಾಳೆ. ಬಳಿಕ ಆಕೆಯೂ ವಿಷ ಸೇವಿಸಿ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರಿನ ಪಾದರಾಯನ ಪುರ ಸಮೀಪದ ಅರಾಫತ್ ನಗರ ನಿವಾಸಿಯಾದ ರಿಜ್ವಾನಾ(40), ರಿಯಾಜ್ (5) ಮತ್ತು ಹಾಜಿರಾ ಎಂಬ ಇಬ್ಬರು ಮಕ್ಕಳಿಗೆ ವಿಷ ಕುಡಿಸಿದ್ದಾಳೆ. ಜಗಜೀವನ್ ರಾಮನಗರದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.[ಗೃಹಿಣಿಯ ಜೀವ ಬಲಿ ಪಡೆದ ವಾಟ್ಸಪ್ ಸಂದೇಶ]

ಮೂಲತಃ ತಮಿಳುನಾಡಿನ ವೆಲ್ಲೂರಿನವರದಾದ ರಿಜ್ವಾನಾ, ಜಹೀರ್ ಎಂಬಾತನನ್ನು ವಿವಾಹವಾಗಿದ್ದರು. ಈ ಕುಟುಂಬ ಅರಾಫತ್ ನಗರದಲ್ಲಿ ವಾಸವಾಗಿದ್ದು, ಹತ್ತು ತಿಂಗಳ ಹಿಂದೆಯಷ್ಟೇ ಪತಿ ಜಹೀರ್ ಟೈಲರ್ ವೃತ್ತಿ ಮಾಡಲು ಸೌದಿ ಅರೇಬಿಯಾಕ್ಕೆ ತೆರಳಿದ್ದನು.
ಶುಕ್ರವಾರ ಜಹೀರ್ ಸಹೋದರ ಅನ್ವರ್ ಸಿಹಿ ತಿಂಡಿ ಕೊಡಲು ರಿಜ್ವಾನಾಳ ಮನೆಗೆ ಬಂದಿದ್ದಾರೆ. ಬಾಗಿಲು ಬಡೆದು ಸುಮಾರು ಸಮಯವಾದರೂ ಬಾಗಿಲು ತೆಗೆಯದಿದ್ದಾಗ ಅನ್ವರ್ ಗೆ ಅನುಮಾನ ಮೂಡಿದೆ. ಆಗ ಕಿಟಕಿಯಿಂದ ನೋಡಿದಾಗ ಈತ ರಿಜ್ವಾನ ಮತ್ತು ಇಬ್ಬರು ಮಕ್ಕಳು ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಗಾಬರಿಕೊಂಡ ಈತ ಪೊಲೀಸರಿಗೆ ತಿಳಿಸಿದ್ದಾನೆ.
ವಿಷವನ್ನು ಯಾವುದರಲ್ಲಿ ಬೆರೆಸಿದ್ದಾರೆ?
ಮನೆಯ ಮೇಜಿನ ಮೇಲೆ ಇದ್ದ ಮೂರು ಲೋಟಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ರಿಜ್ವಾನಾ ತನ್ನ ಇಬ್ಬರು ಮಕ್ಕಳಿಗೆ ಟೀಯಲ್ಲಿ ವಿಷ ಬೆರೆಸಿ ಕುಡಿಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಕಾರಣವೇನು?
ಸೌದಿ ಅರೇಬಿಯಾದಿಂದ ಪತಿ ಜಹೀರ್ ಕಳುಹಿಸುತ್ತಿದ್ದ ಹಣದಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು. ಜೊತೆಗೆ ರಿಜ್ವಾನಾ ಪುತ್ರ ರಿಯಾಜ್ ನನ್ನು ಸಾಲ ಮಾಡಿ ಶಾಲೆಗೆ ಸೇರಿಸಿದ್ದಳು. ಪ್ರತಿದಿನ ಅಕ್ಕಪಕ್ಕದವರು ಕೊಡುವ ಆಹಾರದಿಂದ ಜೀವನ ನಡೆಯುತ್ತಿತ್ತು. ಬಡತನದಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಮುಂದಾಗಿರಬಹುದೆಂದು ಪೊಲೀಸರು ಶಂಕಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications