Breaking: ಬೆಂಗಳೂರಲ್ಲಿ ಮಂಗಳವಾರ ಹಿಂಗಾರು ಮಳೆಯ ಸಿಂಚನ
ಬೆಂಗಳೂರು, ನವೆಂಬರ್ 01: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಣ್ಣಗಾಗಿದ್ದ ವರುಣ ಮತ್ತೆ ಅಬ್ಬರ ಶುರುವಿಟ್ಟುಕೊಂಡಿದ್ದಾನೆ. ಮಂಗಳವಾರ ಸಂಜೆ ನಗರದಲ್ಲಿ ಹಿಂಗಾರು ಮಳೆಯ ಮೊದಲ ಸಿಂಚನವಾಗಿದ್ದು, ಮಹಾದೇವಪುರ ವಲಯ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಯಿತು.
ನಗರದಲ್ಲಿ ಮಂಗಳವಾರ ಮಹಾದೇವಪುರ ವಲಯ ವ್ಯಾಪ್ತಿಯ ಹೊರಮಾವುನಲ್ಲಿ ಅಧಿಕ 32 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಬಸವನಗುಡಿಯಲ್ಲಿ 25 ಮಿ.ಮೀ., ದೊಡ್ಡಾನೆಕ್ಕುಂದಿ 18 ಮಿ.ಮೀ., ಕಮ್ಮನಹಳ್ಳಿ ಮತ್ತು ಕೆ. ಆರ್. ಪುರಂನಲ್ಲಿ ತಲಾ 17 ಮಿ.ಮೀ., ಎಚ್ಎಎಲ್ ವಿಮಾನ ನಿಲ್ದಾಣ ಮತ್ತು ಕೋನೇನ ಅಗ್ರಹಾರ 16 ಮಿ.ಮೀ., ಹೊಯ್ಸಳನಗರ ಮತ್ತು ವನ್ನಾರಪೇಟೆಯಲ್ಲಿ ತಲಾ 15ಮಿ.ಮೀ., ಮಾರತ್ತಹಳ್ಳಿ, ಹೆಮ್ಮಿಗೆಪುರ, ಸಿಂಗ್ರಸಂದ್ರದಲ್ಲಿ ತಲಾ 12ಮಿ.ಮೀ., ಯಲಹಂಕ ಮತ್ತು ಬೊಮ್ಮನಹಳ್ಳಿಯಲ್ಲಿ ತಲಾ 11.5 ಮಿ.ಮೀ.ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸಗಿರ್ಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ)ದ ವರದಿ ತಿಳಿಸಿದೆ.
ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಕಂಡು ಬಂತು, ಸಂಜೆ ಒಮ್ಮೆಲೆ ಜಿಟಿ ಜಿಟಿ ಮಳೆ ಆರಂಭವಾಯಿತು. ಜಯನಗರ, ಶಾಂತಿನಗರ, ವಿಜಯನಗರ, ಯಲಹಂಕ, ಹೆಬ್ಬಾಳ, ಚಾಮರಾಜಪೇಟೆ, ವಿಧಾನಸೌಧ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಹಿಂಗಾರು ಮಳೆ ಸುರಿಯಿತು.

ಮಳೆಯಿಂದ ಕೆ.ಆರ್ ಮಾರುಕಟ್ಟೆ, ಟೌನ್ಹಾಲ್ ಮುಂಭಾಗದ ರಸ್ತೆ, ಚಾಲುಕ್ಯ ರಸ್ತೆ, ಕೆ.ಆರ್ ವೃತ್ತ, ಸುಜಾತಾ ಥಿಯೇಟರ್, ಶಿವಾನಂದ ವೃತ್ತ, 80ಅಡಿ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ನಾಯಂಡಹಳ್ಳಿ, ರಾಜಾಜಿನಗರ ಸೇರಿದಂತೆ ಪ್ರಮುಖ ರಸ್ತೆಗಳ ಮೇಲೆ ಮಳೆ ನೀರು ನಿಂತು ಸಮಸ್ಯೆ ಸೃಷ್ಟಿಯಾಯಿತು. ಕೆಲವೆಡೆ ಸಂಚಾರ ದಟ್ಟಣೆ ಸೃಷ್ಟಿಯಾಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ಹಲವು ಪ್ರದೇಶಗಳಲ್ಲಿ ತಡರಾತ್ರಿವರೆಗೂ ಜಿಟಿ ಜಿಟಿ ಮಳೆ ಮುಂದುವರಿಯಿತು. ಮುಂದಿನ 48ಗಂಟೆ ಸಹ ನಗರದಲ್ಲಿ ಮಳೆ, ಚಳಿಯ ವಾತಾವರಣ ಮುಂದುವರಿಯಲಿದೆ. ಬೆಳಗ್ಗೆ ಮಂಜು ಮುಸುಕಿರುವ ದೃಶ್ಯ ಕಂಡು ಬರಲಿದೆ. ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ 26ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications