ಮೋದಿ ಆಗಮನ, ನಗರದಲ್ಲಿ ಬಿಗಿ ಬಂದೋಬಸ್ತ್
ಬೆಂಗಳೂರು, ಫೆಬ್ರವರಿ 03: ನಾಳೆ (ಫೆ.4) ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು ನಗರ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಮಹದಾಯಿ ವಿವಾದದಲ್ಲಿ ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿದ್ದು, ಮೋದಿ ಅವರ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಂಡಿವೆ ಆ ಕಾರಣದಿಂದ ಪೊಲೀಸರು ಬಂದೋಬಸ್ತ್ ಹೆಚ್ಚಿಸಿದ್ದಾರೆ.
'ಪ್ರತಿಭಟನಾಕಾರರನ್ನು ಯಾವುದೇ ಕಾರಣಕ್ಕೆ ಸಮಾವೇಶ ನಡೆಯುತ್ತಿರುವ ಅರಮನೆ ಮೈದಾನವನ್ನು ಪ್ರವೇಶಕ್ಕೆ ಬಿಡುವುದಿಲ್ಲ' ಎಂದು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಈಗಾಗಲೇ ಎಚ್ಚರಿಕೆ ಸಹ ನೀಡಿದ್ದಾರೆ.

ಸಮಾವೇಶ ಭದ್ರತೆಗೆ 11 ಡಿಸಿಪಿ, 30 ಎಸಿಪಿ, 200 ಪಿಎಸ್ಐಗಳು, 3000 ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳು 50 ಕೆಎಸ್ಆರ್ಪಿ ತುಕಡಿ, 30 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿಭಟನೆಯ ಭಯ ಇರುವ ಕಾರಣ ಸಮಾವೇಶಕ್ಕೆ ಹೋಗುವವರೂ ಸಹ ತೀವ್ರ ತಪಾಸಣೆ ಎದುರಿಸಬೇಕಾಗಿರುತ್ತದೆ. ಸಮಾವೇಶಕ್ಕೆ ಹಲವೆಡೆಗಳಿಂದ ಜನರು ಆಗಮಿಸುವ ನಿರೀಕ್ಷೆ ಇದ್ದು ಟ್ರಾಫಿಕ್ ಸಮಸ್ಯೆ ಉಂಟಾಗುವ ಕಾರಣ ಟ್ರಾಫಿಕ್ ಒತ್ತಡ ಹೆಚ್ಚದಂತೆ ಕೆಲವು ಕಡೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಮಾವೇಶಕ್ಕೆ ಆಗಮಿಸುವವರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸಂಪೂರ್ಣ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿದೆ.












Click it and Unblock the Notifications