ಮೋದಿ ನೇಮಕ ಜನಾಭಿಪ್ರಾಯಕ್ಕೆ ಸಿಕ್ಕ ಮನ್ನಣೆ: ಬಿಎಸ್ವೈ
ಬೆಂಗಳೂರು, ಸೆಪ್ಟೆಂಬರ್ 14: ನರೇಂದ್ರ ದಾಮೋದರದಾಸ್ ಮೂಲಚಂದ್ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಭಾರಿ ಸಂಚಲನವನ್ನುಂಟುಮಾಡಿದೆ. ಜತೆಗೆ ಕಾರ್ಯಕರ್ತರಲ್ಲೂ ನವಚೈತನ್ಯ ತಂದಿದೆ.
ಅಷ್ಟೇ ಅಲ್ಲ. ಪಕ್ಷದ ಹಾಲಿ ಹಿರಿಯ ನಾಯಕರು, ಮಾಜಿ ನಾಯಕರೂ ಮೋದಿ ಉಘೇ ಉಘೇ ಅನ್ನತೊಡಗಿದ್ದಾರೆ. 'ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದೇ ನನ್ನ ಗುರಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಕ್ಷ ಬೆಳೆಸುತ್ತೇನೆ' ಎಂದಿರುವ ಮೋದಿಗೆ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಶರಣಾದಂತಿದೆ.
ಅವರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಕೆಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಆರಂಭದಿಂದಲೂ ವರ್ಚಸ್ವಿ ನಾಯಕ ಮೋದಿ ಅವರ ಬಗ್ಗೆ ಒಂದು ಹಿಡಿಯಷ್ಟು ಗೌರವ/ ಮೆಚ್ಚುಗೆ ಹೊಂದಿರುವ ಯಡಿಯೂರಪ್ಪ, ಮೋದಿ ನೇಮಕಾತಿ ಪ್ರಕಟವಾಗುತ್ತಿದ್ದಂತೆ ಆನಂದತುಂದಲಿತರಾಗಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ತಮ್ಮನ್ನು ಇನ್ನಿಲ್ಲದಂತೆ ಕಾಡಿದ/ ಮುಖ್ಯಮಂತ್ರಿ ಪಟ್ಟದಿಂದ ನಾಜೂಕಾಗಿ ಇಳಿಸಿದ ಅಡ್ವಾಣಿ ಕ್ಯಾಂಪ್ ನಿಸ್ತೇಜವಾಗುತ್ತಿರುವುದು ಅನುಭವಕ್ಕೆ ಬಂದಿರುವುದು ಯಡಿಯೂರಪ್ಪ ಆನಂದವನ್ನು ಹೆಚ್ಚಿಸಿದೆ.

ಒಮ್ಮೆಗೇ ಬಿಜೆಪಿಯನ್ನು ಅಪ್ಪಿಕೊಳ್ಳುವುದು ...
ಹಾಗಾಗಿಯೇ ಈಗಾಗಲೇ ಮೋದಿಗೆ ಜೈ ಜೈ ಎಂದಿರುವ ಯಡಿಯೂರಪ್ಪ, ಯಾವಾಗಪ್ಪಾ ತಾವು ಬಿಜೆಪಿಗೆ ಹೋಗುವುದು ಎಂದು ಕಾದುಕುಳಿತಿರುವಂತಿದೆ. ಯಡಿಯೂರಪ್ಪ ತವರಿಗೆ ಮರಳುವ ಉತ್ಸಾಹ ತೋರಿದ್ದಾರಾದರೂ ಒಮ್ಮೆಗೇ ಬಿಜೆಪಿಯನ್ನು ಅಪ್ಪಿಕೊಳ್ಳುವುದು ಮಾರಕವಾಗಬಹುದು ಎಂದೆಣೆಸಿ ಮೋದಿ ಮಟ್ಟದಲ್ಲಿ ಮೈತ್ರಿ ರಾಜಕಾರಣ ಮಾಡಿಕೊಂಡು, ಮುಂದೆ ಚುನಾವಣೆಯಲ್ಲಿ ಒಂದಷ್ಟು ಸ್ಥಾನ ಗಳಿಸುವ ಮೂಲಕ ಎನ್ ಡಿಎ ಜತೆ ಕೈಜೋಡಿಸುವುದು ಯಡಿಯೂರಪ್ಪನವರ ನಿರ್ಧಾರವಾಗಬಹುದು.

ಯಡಿಯೂರಪ್ಪ 'ಕೈ'ವಶವಾಗುವ ವಿಚಾರ ಏನಾಯ್ತು?
ಮೋದಿ/ಎನ್ ಡಿಎ ಜತೆ ಕೆಜೆಪಿ/ಯಡಿಯೂರಪ್ಪ ಒಂದಾಗುವುದು ಅಂದರೆ 'ಕಾಂಗ್ರೆಸ್ ಜತೆ ಕೈಜೋಡಿಸುವುದು, ಆ ಪಕ್ಷದ ಜತೆ ಗುರುತಿಸಿಕೊಳ್ಳುವುದಕ್ಕೆ ಯಡಿಯೂರಪ್ಪ ತಿಲಾಂಜಲಿಯಿಟ್ಟಂತೆ. ಈ ಮಾತು ಏಕೆ ಹೇಳಬೇಕಿದೆಯೆಂದರೆ ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಕಾಡುತ್ತಿರುವುದು ಸಿಬಿಐ. ಅದರಿಂದ ಬಚಾವಾಗಲು ಯಡಿಯೂರಪ್ಪ 'ಕೈ'ವಶವಾಗುತ್ತಾರೆ ಎಂಬುದು ಬಹು ಚರ್ಚಿತ ವಿಚಾರವಾಗಿದೆ.

ಮೋದಿ ಮೋಡಿಗೆ ಯಡಿಯೂರಪ್ಪ ಚಿತ್:
ಈ ಹಿಂದೆ 'ಜಾತ್ಯತೀತ ಪಕ್ಷಗಳು ಒಂದಾಗಬೇಕು, ಕಾಂಗ್ರೆಸ್ ಜತೆ ಹೊಂದಾಣಿಕೆಗೆ ಸಿದ್ಧ' ಎಂದು ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, 'ಆ ಮಾತು ಹೇಳಿದ್ದು ನಿಜ. ಆಗ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗಿರಲಿಲ್ಲ. ಇದೀಗ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಹೀಗಾಗಿ ನನ್ನ ಬೆಂಬಲ ಎನ್ಡಿಎಗೆ. ಮೋದಿ ಅವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾನು ಕೂಡ ಪ್ರಯತ್ನಿಸುತ್ತೇನೆ' ಎಂದು ಹೇಳಿರುವುದು ಮಾರ್ಮಿಕವಾಗಿದೆ.

ಸೆ.18ರಂದು ಔಪಚಾರಿಕವಾಗಿ ಕೆಜೆಪಿ ಸಭೆ
ಏನೇ ಆಗಲಿ ಚುನಾವಣೆ ಕಣ್ಣಳತೆಯಲ್ಲೇ ಇರುವಾಗ ಹೆಚ್ಚು ಕಾಲಹರಣ ಮಾಡದೆ ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಲು ತಕ್ಷಣ ನಿರ್ಧಾರಕ್ಕೆ ಬರುವ ಜರೂರತ್ತು ಯಡಿಯೂರಪ್ಪಗೆ ಇದೆ. ಹಾಗಾಗಿಯೇ ಬಿಜೆಪಿ ಸೇರುವ ಬಗ್ಗೆ ತಮ್ಮ ಪಕ್ಷದ ಮುಖಂಡರ ಜತೆ ಚರ್ಚಿಸಿ ಸೆ. 19ರಂದು ತಮ್ಮ ನಿಲುವು ತಿಳಿಸುವುದಾಗಿ ನಿನ್ನೆ ಹೇಳಿದ್ದಾರೆ.
ಸೆ.18ರಂದು ಔಪಚಾರಿಕವಾಗಿ ಕೆಜೆಪಿ ಜಿಲ್ಲಾ ಪದಾಧಿಕಾರಿಗಳ ಮತ್ತು ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಅಂದು ಬಿಜೆಪಿ ಸೇರುವ ಕುರಿತಂತೆ ಅವರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸೆ.19ರಂದು ರಾಜ್ಯ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.

ಸೆ. 19ರ ಸಭೆ ಕೆಜೆಪಿಯ ಕೊನೆಯ ಸಭೆ
ಆದರೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸುತ್ತಿದ್ದಂತೆ ಯಡಿಯೂರಪ್ಪ ಅವರಲ್ಲಿ ಕಾಣಿಸಿಕೊಂಡ ಉತ್ಸಾಹ, ಅವರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಸೆ. 19ರ ಸಭೆ ಕೆಜೆಪಿಯ ಕೊನೆಯ ಸಭೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಜನಾಭಿಪ್ರಾಯಕ್ಕೆ ಬಿಜೆಪಿ ಮನ್ನಣೆ ನೀಡಿದೆ: ಬಿಎಸ್ವೈ
ಬಿಜೆಪಿ ದೇಶದ ಜನರ ಭಾವನೆಗಳಿಗೆ ಸ್ಪಂದಿಸಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಈ ತೀರ್ಮಾನ ಇನ್ನೂ ಮೊದಲೇ ಆಗಬೇಕಿತ್ತು. ಗುಜರಾತ್ ಮುಖ್ಯಮಂತ್ರಿಯಾಗಿ ಅವರ ಸಾಧನೆಯಿಂದ ದೇಶದ ಎಲ್ಲಾ ಸಮುದಾಯದ ಬೆಂಬಲವನ್ನು ಹೊಂದಿದ್ದಾರೆ. ವಾಜಪೇಯಿ ನಂತರ ದೇಶದ ಜನ ಒಟ್ಟಾಗಿ ಒಪ್ಪಿಕೊಂಡ ವ್ಯಕ್ತಿ ಮೋದಿಯವರಾಗಿದ್ದಾರೆ. ಹೀಗಾಗಿ ಇನ್ನು ಮುಂದೆ ನನ್ನ ಪೂರ್ಣ ಬೆಂಬಲ ಅವರಿಗೆ ಇರುತ್ತದೆ. ಕೆಜೆಪಿ ಎನ್ಡಿಎನ ಒಂದು ಭಾಗವಾಗಿರುತ್ತದೆ. ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿರುವ ಮೋದಿ ಅವರಿಗೆ ಶುಭ ಕೋರುತ್ತೇನೆ ಎಂದಿದ್ದಾರೆ ಯಡಿಯೂರಪ್ಪ.

ಯಡಿಯೂರಪ್ಪಗೆ ಪ್ರಹ್ಲಾದ್ ಜೋಶಿ ಸ್ವಾಗತ
ಇದಕ್ಕೆಲ್ಲಾ ಪೂರಕವಾಗಿ ಬಳ್ಳಾರಿಯಲ್ಲಿ ಇಂದು ಶನಿವಾರ ನಡೆಯುತ್ತಿರುವ RSS ಬೈಠಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಯಡಿಯೂರಪ್ಪ ಬಿಜೆಪಿಗೆ ಮರಳುವ ಬಗ್ಗೆ ಸುಳಿವು ನೀಡಿರುವುದನ್ನು ಸ್ವಾಗತಿಸಿದ್ದು, ಈ ನಿಟ್ಟಿನಲ್ಲಿ ಸಂಧಾನಗಳು ಮತ್ತಷ್ಟು ತೀವ್ರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.












Click it and Unblock the Notifications