ಕೊರೊನಾ ಲಸಿಕೆ ಅಭಿಯಾನಕ್ಕೆ ಪುಷ್ಟಿ ನೀಡಲು ಬಂದಿದೆ 'ವ್ಯಾಕ್ಸಿನೇಷನ್ ಆನ್ ವ್ಹೀಲ್ಸ್'
ಬೆಂಗಳೂರು, ಆಗಸ್ಟ್ 26: ಕುಗ್ರಾಮಗಳಲ್ಲಿನ ಜನರಿಗೆ ಕೊರೊನಾ ಲಸಿಕೆ ನೀಡುವ ಉದ್ದೇಶದೊಂದಿಗೆ 'ವ್ಯಾಕ್ಸಿನೇಷನ್ ಆನ್ ವ್ಹೀಲ್ಸ್' ಎಂಬ ಮೊಬೈಲ್ ಕ್ಲಿನಿಕ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಚಾಲನೆ ನೀಡಿದರು.
ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ವೋಲ್ವೊ ಸಹಯೋಗದಲ್ಲಿ ಈ ಮೊಬೈಲ್ ಕ್ಲಿನಿಕ್ ಆರಂಭಿಸಿದ್ದು, ಈ ವಾಹನದ ಮೂಲಕ ರಾಜ್ಯದ ಗ್ರಾಮೀಣ ಹಾಗೂ ಉಪನಗರದ ಪ್ರದೇಶಗಳಲ್ಲಿನ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ.
ದೈಹಿಕ ವೈಫಲ್ಯಗಳಿಂದಾಗಿ ಅಥವಾ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ದೂರ ಪ್ರಯಾಣ ಮಾಡಬೇಕಾದ ಕಾರಣದಿಂದಾಗಿ ಲಸಿಕಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದವರಿಗೆ ಸುಲಭವಾಗಿ ಕೊರೊನಾ ಲಸಿಕೆ ದೊರಕಿಸಿಕೊಡಲು ಈ ಹೊಸ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ನಾರಾಯಣ ಆಸ್ಪತ್ರೆಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ದೂರವುಳಿಯಲು ಹಾಗೂ ಸೋಂಕು ಹರಡುವಿಕೆ ತಡೆಯಲು ಕೊರೊನಾ ಲಸಿಕೆ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಎಲ್ಲರಿಗೂ ಕೊರೊನಾ ಲಸಿಕೆ ಲಭ್ಯವಾಗಬೇಕು. ಯಾರೂ ಲಸಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಈ ಕಾರ್ಯ ಆರಂಭಿಸಲಾಗಿದೆ ಎಂದು ವಿವರಿಸಿದರು.
ಆರಂಭಿಕ ಹಂತದಲ್ಲಿ ಸುಮಾರು 20 ಸಾವಿರ ಜನರಿಗೆ ಲಸಿಕೆ ನೀಡುವ ನಿರೀಕ್ಷೆಯಿದೆ. ಆನಂತರ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡಲು ವಿಸ್ತರಣೆ ಮಾಡಲಾಗುವುದು ಎಂದಿದ್ದಾರೆ.
ಈ ಮುನ್ನ ಕೆಎಸ್ಆರ್ಟಿಸಿ ವತಿಯಿಂದ ಬೆಂಗಳೂರಿನಲ್ಲಿ "ಐಸಿಯು ಆನ್ ವ್ಹೀಲ್ಸ್" ಆರಂಭಿಸಲಾಗಿತ್ತು. ಐದು ಆಮ್ಲಜನಕ ಬೆಂಬಲಿತ ಹಾಸಿಗೆಗಳು, ವೆಂಟಿಲೇಟರ್ ಹಾಗೂ ಔಷಧಿಗಳನ್ನು ಒಳಗೊಂಡಿತ್ತು. ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಇವು ಕಾರ್ಯಾಚರಣೆ ನಡೆಸಿದ್ದವು.
ಇದೇ ಮೇ ತಿಂಗಳಿನಲ್ಲಿ, ಕೊರೊನಾ ನಿಯಂತ್ರಣ, ಕೊರೊನಾ ಪರೀಕ್ಷಾ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಕ್ಲಿನಿಕ್ಗಳನ್ನು ಗ್ರಾಮಗಳಿಗೆ ನಿಯೋಜಿಸಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದರು.

ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ?
ರಾಜ್ಯದಲ್ಲಿ ಈವರೆಗೂ 7,62,492 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 5,91,247 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,36,041 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 4,80,258 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,32,70,856 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 64,92,868 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಈವರೆಗೆ 2,91,60,322 ಮಂದಿಗೆ ಮೊದಲ ಡೋಸ್ ಹಾಗೂ 91,10,386 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಬುಧವಾರ ಸ್ಥಿರತೆ ಕಂಡು ಬಂದಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.62ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.79ರಷ್ಟಿದೆ. ಒಂದು ದಿನದಲ್ಲಿ 1224 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಇದೇ ಅವಧಿಯಲ್ಲಿ 1668 ಸೋಂಕಿತರು ಗುಣಮುಖರಾಗಿದ್ದಾರೆ. 22 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೂ 37206 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬುಧವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2942250ಕ್ಕೆ ಏರಿಕೆಯಾಗಿದೆ. ಒಟ್ಟು 2885700 ಸೋಂಕಿತರು ಗುಣಮುಖರಾಗಿದ್ದು, 19318 ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications