ಬಿಜೆಪಿಯವರು ಮನೆಕಟ್ಟಿಲ್ವಾ? ನಾವೇ ಟಾರ್ಗೆಟ್ ಯಾಕೆ? ಎಸಿಬಿ ಅಧಿಕಾರಿಗಳನ್ನು ಪ್ರಶ್ನಿಸಿದ ಜಮೀರ್
ಬೆಂಗಳೂರು, ಆಗಸ್ಟ್ 06: ಚಾಮರಾಜಪೇಟೆಯ ಶಾಸಕ ಮಾಜಿ ಸಚಿವ ಜಮೀರ್ ಅಹಮದ್ ಅವರಿಗೆ ಎಸಿಬಿಯಿಂದ ನೋಟೀಸ್ ಬಂದ ಹಿನ್ನೆಲೆ ಎಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಜಮೀರ್ ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಾರೆ.
ಎಸಿಬಿ ದಾಳಿಯಲ್ಲಿ ಅಸಮತೋಲನ ಆಸ್ತಿ ಗಳಿಕೆ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. 10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ದೂರು ದಾಖಲಾಗಿತ್ತು. ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5 2021 ರ ಅವಧಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಮಾಡಿ ಈ ವೇಳೆ ಅಪಾರ ಪ್ರಮಾಣದ ಆಸ್ತಿ ಗಳಿಸಿರೋ ಅಂಶ ಪತ್ತೆಯಾಗಿದೆ.
ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ಪ್ರಕಾರ ಜಮೀರ್ ಒಟ್ಟು ಆಸ್ತಿ-73,94,36,027 , ಆದಾಯ-4,30,48,790, ವೆಚ್ಚ-17,80,18,000ಹಾಗೂ ಆದಾಯಕ್ಕಿಂತ 87,44,05,057 ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖ ವಾಗಿತ್ತು.
ನ್ಯಾಷನಲ್ ಟ್ರಾವೆಲ್ಸ್ ನ ಆದಾಯ ಕೇಳಿದ್ದ ಎಸಿಬಿ
ಜಮೀರ್ 20 ಗುಂಟೆ ಜಾಗದಲ್ಲಿ ಅಂದಾಜು 80 ಕೋಟಿಯ ಭವ್ಯ ಮನೆ ನಿರ್ಮಿಸಿದ್ದಾರೆ. ಮನೆ ನಿರ್ಮಾಣಕ್ಕೆ ಬಳಸಿರುವ ಶ್ವೇತ ಶಿಲೆ,ಅರೆಬಿಕ್ ಶೈಲಿಯಲ್ಲಿ ಮನೆಯ ನಿರ್ಮಾಣ ಇಟಾಲಿಯನ್ ಮಾರ್ಬಲ್ಸ್ 5 ಕೋಟಿ ಮೌಲ್ಯದ ಆಸ್ತಿ. ಸ್ಯಾಂಡ್ ವಿಚ್ ಗಾಜುಗಳ ಬಳಸಲಾಗಿದ್ದು,ಟೀಕ್ ವುಡ್ ಕಿಟಿಕಿ ಮತ್ತು ಬಾಗಿಲುಗಳ ನಿರ್ಮಾಣ ವೈಭವಪೂರಿತ ಸೀಲಿಂಗ್ ಲೈಟ್ಗಳ ಅಳವಡಿಕೆ ಮಾಡಿರೊದಕ್ಕೆ ಎಸಿಬಿ ಬಿಲ್ ಕೇಳಿದೆ. ಇದರ ಜೊತೆಗೆ 87,44,05,057 ರೂಪಾಯಿ ಮೂಲದ ದಾಖಲೆ ಕೇಳಿದೆ.ಜೊತೆಗೆ ನ್ಯಾಷನಲ್ ಟ್ರಾವೆಲ್ಸ್ ನ ಆದಾಯದ ಮೊತ್ತ ಮಾಹಿತಿಯನ್ನು ಕೇಳಲಾಗಿದೆ.
ಬಿಜೆಪಿಯವರು ಯಾರ ಮನೆಯನ್ನು ಕಟ್ಟಿಲ್ವಾ?
ಸಮನ್ಸ್ ಮುಖಾಂತರ ಎಸಿಬಿ ಅಧಿಕಾರಿಗಳು ದಾಖಲೆಗಳು ಕೇಳಿದ್ದರು. ದಾಖಲೆಗಳನ್ನ ಸಲ್ಲಿಕೆ ಮಾಡಿದ್ದೇನೆ, ಮನೆ ನಿರ್ಮಾಣ ಸಂಬಂಧ ದಾಖಲೆಗಳನ್ನ ಕೊಟ್ಟಿದ್ದೇನೆ. ಜಮೀರನ್ನೇ ಟಾರ್ಗೆಟ್ ಮಾಡ್ತಿದ್ದಾರಾ..? ಬಿಜೆಪಿ ಸರ್ಕಾರ ಇರೋ ಕಡೆಯಲ್ಲಿ ಹೀಗೆ ಆಗ್ತಿದೆ, ನಾನು ನಮ್ಮ ಅಧ್ಯಕ್ಷರು ಡಿಕೆ ಶಿವಕುಮಾರ್ರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಅವರು ಏನೇನು ಕೇಳಿದ್ದಾರೆ ಅದೆಲ್ಲವನ್ನೂ ಕೊಟ್ಟಿದ್ದೇನೆ. ದೇಶದಲ್ಲಿ ಇವತ್ತು ಬಿಜೆಪಿಯವರು ಯಾರು ಮನೆ ಕಟ್ಟಿಲ್ಲ, ಆಸ್ತಿ ಮಾಡಿಲ್ಲವೇ? ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಕರೆಯುತ್ತಾರೆ. ನಾನು ಸ್ಪಂದಿಸುತ್ತೇನೆ ಎಂದು ಶಾಸಕ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಎಸಿಬಿ ಸಮನ್ಸ್ಗೆ ಸ್ಪಂದಿಸಿದ ಶಾಸಕ ಜಮೀರ್
ಎಸಿಬಿ ಅಧಿಕಾರಿಗಳು ಈ ಹಿಂದೆಯೇ ವಿಚಾರಣೆಗೆ ಹಾಜರಾಗುವಂತೆ ಮತ್ತು ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ನೀಡಿದ್ದರು. ಆದರೆ ಬೇರೆ ಬೇರೆ ಕಾರಣದಿಂದ ಹಾಜರಾಗಿರಲಿಲ್ಲ. ಇನ್ನು ದಾವಣೆಗೆರೆಯಲ್ಲಿ ಆಗಸ್ಟ್ 3ರಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಸಿಯಾಗಿದ್ದ ಕಾರಣ ತಡವಾಗಿ ಹಾಜರಾಗಿ ಎಸಿಬಿ ಕೇಳಿದ್ದ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ.
ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ
ಬಿಜೆಪಿ ಕಾಂಗ್ರೆಸಿಗರನ್ನು ಟಾರ್ಗೆಟ್ ಮಾಡುತ್ತಿದೆ. ಬಿಜೆಪಿಯವರು ಮನೆಯನ್ನು ಕಟ್ಟಿಲ್ಲವೇ. ಬಿಜೆಪಿಯವರ ಮನೆಯ ಮೇಲೆ ಯಾಕೆ ದಾಳಿಯನ್ನು ನಡೆಸುವುದಿಲ್ಲ. ರಾಜಕೀಯ ಮಾಡ್ತಿದ್ದಾರೆ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.