ಮುಂಬೈನಿಂದ ಬೆಂಗಳೂರಿಗೆ ಸೋಮಶೇಖರ್, ಕಾಂಗ್ರೆಸ್ಸಿಗೆ ಬೆಂಬಲ ಘೋಷಣೆ
ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿ, ಗೊಂದಲ, ಕಿತ್ತಾಟ, ಸಂಧಾನದ ನಡುವೆ ಮುಂಬೈಗೆ ತೆರಳಿದ್ದ ಅತೃಪ್ತ ಶಾಸಕರೊಬ್ಬರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಜುಲೈ 6ರಂದು ಸೋಮಶೇಖರ್ ಸೇರಿದಂತೆ 10 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಮುಂಬೈಗೆ ತೆರಳಿದ್ದರು.
ಶಾಸಕ ಎಸ್ ಟಿ ಸೋಮಶೇಖರ್ ಅವರು ನಾನಿನ್ನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೇಳಿದರು. ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿದ್ದೇನೆ, ನಾನಿನ್ನು ಪಕ್ಷದಲ್ಲಿದ್ದೇನೆ, ಕಾಂಗ್ರೆಸ್ ಪಕ್ಷಕ್ಕೆ ನನ್ನ ಬೆಂಬಲ ಎಂದರು. ತಮ್ಮ ಮಾತಿಗೆ ಸೂಚ್ಯವಾಗಿ, ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ಬಲಗೈ ಹಸ್ತವನ್ನು ತೋರಿಸಿದರು.

ಬಿಡಿಎ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಎಸ್ ಟಿ ಸೋಮಶೇಖರ್ ಅವರು ಬಸವನಗುಡಿಯ ಹೌಸಿಂಗ್ ಸೊಸೈಟಿಗೆ ಸಂಬಂಧಿಸಿದ ಚುನಾವಣೆಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಕೆಲವು ಸಭೆಗಳನ್ನು ಮುಗಿಸಿಕೊಂಡು ಮತ್ತೊಮ್ಮೆ ಮುಂಬೈಗೆ ತೆರಳುವ ಸಾಧ್ಯತೆಯೂ ಇದೆ.
ಮುಂಬೈಗೆ ತೆರಳಿ ಅತೃಪ್ತ ಕಾಂಗ್ರೆಸ್ ಶಾಸಕರ ಮನ ಓಲೈಕೆಗೆ ಯತ್ನಿಸಿದ ಸಚಿವ ಡಿಕೆ ಶಿವಕುಮಾರ್ ಅವರ ಯತ್ನ ವಿಫಲವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ರಿನೈಸಾನ್ಸ್ ಹೋಟೆಲ್ ನಲ್ಲಿದ್ದ ಎಸ್ ಟಿ ಸೋಮಶೇಖರ್ ಅವರು, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದರು. ಡಿಕೆ ಶಿವಕುಮಾರ್, ಜಿಟಿ ದೇವೇಗೌಡ, ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಯಾರೊಬ್ಬರ ಫೋನ್ ಕಾಲ್ ಕೂಡಾ ಸ್ವೀಕರಿಸಲಿಲ್ಲ.












Click it and Unblock the Notifications