ಹೊಯ್ಸಳ ಪೊಲೀಸರ ಮೇಲೆ ಮಚ್ಚು ಬೀಸಿದ ದರೋಡೆಕೋರರು
ಬೆಂಗಳೂರು, ಅಕ್ಟೋಬರ್ 31 : ರಾತ್ರಿ ವೇಳೆ ಕ್ಯಾಬ್ ಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ತಂಡವೊಂದು ಪೊಲೀಸರ ಮೇಲೆ ಮಚ್ಚು ಬೀಸಿ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ನಗರದ ಜಾಲಹಳ್ಳಿಯ ಬಿಇಎಲ್ ವೃತ್ತದ ಬಳಿ ಈ ಘಟನೆ ನಡೆದಿದೆ. ಕ್ಯಾಬ್ ಗಳನ್ನು ಅಡ್ಡಿಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರ ತಂಡವೊಂದನ್ನು ಹಿಡಿಯಲು ಯತ್ನಿಸಿದ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಲಾಂಗ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಬೈಕ್ ನಲ್ಲಿ ಬಂದಿದ್ದ ನಾಲ್ಲರು ಸಲಿಗೆಕೋರರು ರಸ್ತೆ ಬದಿ ಕ್ಯಾಬ್ ನಿಲ್ಲಸಿ ಮಲಗಿದ್ದ ಇಬ್ಬರು ಚಾಲಕರಿಗೆ ಲಾಂಗ್, ಚಾಕು ತೊರಿಸಿ ಅವರ ಪರ್ಸ್, ಮೊಬೈಲ್, ಹಣವನ್ನು ದೋಚಿದ್ದರು.
ಕೂಡಲೇ ಕ್ಯಾಬ್ ಚಾಲಕರು ಜಾಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಅಲ್ಲಿಯೇ ಸಮೀಪದಲ್ಲಿದ್ದ ಹೊಯ್ಸಳ ವಾಹನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಸುಲಿಗೆಕೋರರನ್ನು ಹಿಡಿಯಲೆತ್ನಿಸಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಹೋಮ್ ಗಾರ್ಡ್ ಹನುಮಂತ ರಾಜು ಗಾಯಗೊಂಡಿದ್ದು, ಅವರನ್ನು ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಯ್ಸಳದಲ್ಲಿದ್ದ ಎಎಸ್ ಐ ಮೋಪುರಿ ಎಂಬವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications