ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ
ಬೆಂಗಳೂರು, ನವೆಂಬರ್ 27 : ನಗರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಾವಿರಾರು ಹೋರಾಟಗಾರರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು (ನವೆಂಬರ್ 27)ರಂದು ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಪಾತ್ರೆ ತೊಳೆಯುವ ಸಿಂಕ್ ಬಳಿ, ಹಳೆ ಫೈಲ್ ಗಳ ಜೊತೆ ನೆಲದಲ್ಲಿ ಇಟ್ಟಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣ ಅಪ್ಲೋಡ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದಲಿತ ಹೋರಾಟಗಾರರು ಬಿಜೆಪಿ ಕಚೇರಿ ಮುಂದೆ ಜಮಾಯಿಸಿ, ಪ್ರತಿಭಟನೆ ಪ್ರಾರಂಭಿಸಿ ಬಿಜೆಪಿ ನಾಯಕರ ಕ್ಷಮಾಪಣೆಗೆ ಆಗ್ರಹಿಸಿದರು.

ಇಂದು (ನವೆಂಬರ್ 27) ವಿಜಯಪುರದಲ್ಲಿ ಭಾಷಣ ಮಾಡುತ್ತಾ ಬಿ.ಎಸ್.ಯಡಿಯೂರಪ್ಪ ಅವರು 'ಸಂವಿಧಾನ ದಿನದ ಜಾಹಿರಾತಿನ ವಿಷಯ ಇಟ್ಟುಕೊಂಡು ಸಿದ್ದರಾಮಯ್ಯ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ' ಎಂದು ಮಾತನಾಡಿದ್ದರು, ಶೋಭಾ ಕರಂದ್ಲಾಜೆ ಅವರು ಕೂಡ ಹೀಗೆಯೇ ಹೇಳಿದ್ದರು. ಆದರೆ ಅವರ ಕಚೇರಿಯಲ್ಲೇ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ವಿಡಿಯೊ ಲೀಕ್ ಆಗಿರುವುದು ಬಿಜೆಪಿಗೆ ಭಾರಿ ಮುಖಭಂಗ ಆದಂತಾಗಿದೆ.
ಇದೀಗ ದಲಿತ ಹೋರಾಟಗಾರರು ಬಿಜೆಪಿ ಕಚೇರಿಗೆ ಬೀಗ ಹಾಕಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆ ಕುರಿತು ಬಿ.ಎಸ್.ಯಡಿಯೂರಪ್ಪ ಅವರು ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ ಎಂಬ ಭಾವನೆ ದಲಿತ ಹೋರಾಟಗಾರರಲ್ಲಿದೆ. ಮೊನ್ನೆ ತಾನೆ ಬಿಜೆಪಿ ಮುಖಂಡ ಗೋ.ಮಧುಸೂದನ್ ಅವರು ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಮಾಧ್ಯಮದಲ್ಲಿ ಹೇಳಿದ್ದು ವಿವಾದವಾಗಿತ್ತು. ಮಧುಸೂದನ್ ಅವರಿಗೆ ಮಸಿ ಬಳಿಯಲು ಹೋದ ಹೋರಾಟಗಾರರಿಗೆ ಪೊಲೀಸರ ಸಹಾಯದಿಂದ ಚಳ್ಳೆಹಣ್ಣು ತಿನ್ನಿಸಿ ಅವರು ಪರಾರಿಯಾಗಿದ್ದರು.
ಈ ಮುಂಚೆಯೂ ಒಮ್ಮೆ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ದಲಿತ ಹೋರಾಟಗಾರರು ಪ್ರೆತಿಭಟನೆ ನಡೆಸಿದ್ದರು.












Click it and Unblock the Notifications