ಕೋವಿಡ್ 19: ಜನರ ಸಂಕಷ್ಟಕ್ಕೆ ಮಿಡಿಯುತ್ತಿರುವ ಮರ್ಸಿ ಮಿಷನ್
ಬೆಂಗಳೂರು, ಮೇ 05: ಕೊರೊನಾ ಸೋಂಕಿನ ಎರಡನೇ ಅಲೆ ಅಕ್ಷರಶಃ ಜನರನ್ನು ನರಕಕ್ಕೆ ದೂಡಿದೆ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರು ಅದೆಷ್ಟೋ ಮಂದಿ, ದುಡ್ಡಿದ್ದರೂ ಕುಟುಂಬದವರನ್ನು ಉಸಿಳಿಕೊಳ್ಳಲಾಗದೆ ಅಸಹಾಯಕತೆ ತೋರುತ್ತಿರುವವರು ಇನ್ನೆಷ್ಟೋ, ಆಸ್ಪತ್ರೆ ಹಾಸಿಗೆ, ಆಕ್ಸಿಜನ್ ಸಿಗದೆ ಪ್ರಾಣಬಿಟ್ಟವರು ಮತ್ತೆಷ್ಟೋ...
ಹೀಗಿರುವಾಗ ಇಂತಹ ಜನರ ಕಣ್ಣೀರೊರಿಸುತ್ತಿದೆ ಮರ್ಸಿ ಮಿಷನ್ ತಂಡ, ಹಸಿದವರಿಗೆ ಆಹಾರ ಒದಗಿಸುತ್ತಿದೆ, ಅಶಕ್ತರಿಗೆ ವೈದ್ಯಕೀಯ ಆಮ್ಲಜನಕ ಒದಗಿಸುವ ಜತೆಗೆ ಸತ್ತವರ ಶವಸಂಸ್ಕಾರಕ್ಕೂ ನೆರವಾಗುತ್ತಿದೆ. ಅದರ ಹೆಸರು ಮರ್ಸಿ ಮಿಷನ್.
ಕಳೆದ ವರ್ಷ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದ ಈ ತಂಡ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪಿತ್ತು. ಪ್ರಮುಖ ಹೋಟೆಲ್ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ನಗರದ ವಿವಿಧ ಭಾಗಗಳಲ್ಲಿ 35 ಅಡುಗೆ ಮನೆಗಳನ್ನು ಸ್ಥಾಪಿಸಿ ಅಲ್ಲಿ ಸಿದ್ಧವಾದ ಒಟ್ಟು 12.3 ಲಕ್ಷ ಆಹಾರ ಪೊಟ್ಟಣವನ್ನು ವೈದ್ಯರು, ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಕೊಳಗೇರಿಯಲ್ಲಿ ವಾಸಿಸುವ ಜನರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿತ್ತು, ಈಗಲೂ ಅದನ್ನು ಮುಂದುವರೆಸಿದೆ.

ಮರ್ಸಿ ಮಿಷನ್ 600 ಆಕ್ಸಿಜನ್ ಸಿಲಿಂಡರ್ಗಳನ್ನು ಹೊಂದಿದ್ದು, ಅಗತ್ಯವಿರುವ ಆಸ್ಪತ್ರೆಗಳಿಗೆ ಒದಗಿಸುತ್ತಿದೆ. ಬೆಂಗಳೂರಿನ ರೈಲ್ವೆ ಆಸ್ಪತ್ರೆಯಲ್ಲಿ ಕಳೆದ 3 ಗಂಟೆಯಿಂದ ಆಕ್ಸಿಜನ್ ಸರಬರಾಜು ಇರಲಿಲ್ಲ, ಆಸ್ಪತ್ರೆಯಲ್ಲಿ 50 ಮಂದಿ ರೋಗಿಗಳಿದ್ದರು, ಅದರಲ್ಲಿ 15 ಮಂದಿ ಐಸಿಯುನಲ್ಲಿದ್ದರು.
80 ಆಕ್ಸಿಜನ್ ಸಿಲಿಂಡರ್ಗಳು ಆಗಮಿಸಬೇಕಿತ್ತು ಆದರೆ ಇನ್ನೂ ಬಂದಿರಲಿಲ್ಲ. ಆಸ್ಪತ್ರೆಗೆ 80 ಸಿಲಿಂಡರ್ಗಳನ್ನು ಪೂರೈಸುವ ಮೂಲಕ ಮರ್ಸಿ ಮಿಷನ್ ಸಹಾಯ ಮಾಡಿದೆ.
ಒಂದು ವಾರದ ಹಿಂದೆ ಎಚ್ಬಿಎಸ್ ಆಸ್ಪತ್ರೆಯಲ್ಲಿ ಕೂಡ ಇಂತಹದೇ ಘಟನೆ ನಡೆದಿದ್ದು, ಆ ಆಸ್ಪತ್ರೆಗೂ ಕೂಡ ಸಹಾಯಹಸ್ತ ಚಾಚಿದ್ದಾರೆ.
ಎರಡನೇ ಅಲೆ ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಹಾಸಿಗೆ, ಆಮ್ಲಜನಕ ಹಾಗೂ ರೆಮ್ಡೆಸಿವಿರ್ ಚುಚ್ಚುಮದ್ದಿನ ಸಮಸ್ಯೆ ತಲೆದೋರಿದೆ. ಈ ಸಂಬಂಧ ನಮ್ಮ ಸಹಾಯವಾಣಿಗೆ ಸಾವಿರಾರು ಕರೆಗಳು ಬರುತ್ತಿವೆ. ಇದಕ್ಕೆ ತ್ವರಿತಗತಿಯಲ್ಲಿ ಸ್ಪಂದಿಸುವ ಕೆಲಸವನ್ನು ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಮಾಡುತ್ತಿದೆ.
ಮಸಿ ಪ್ಲಾಸ್ಮಾ, ಮರ್ಸಿ ಟೆಲಿಮೆಡಿಸಿನ್ ಎಂಬ ತಂಡವನ್ನೂ ರಚಿಸಿದೆ. ಟೆಲಿಮೆಡಿಸಿನ್ ತಂಡದಲ್ಲಿ ನುರಿತ ವೈದ್ಯರಿದ್ದಾರೆ. ಮರ್ಸಿ ಏಂಜೆಲ್ ತಂಡ ಶವಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ನಮ್ಮಲ್ಲಿ ಒಟ್ಟು 9 ಆಂಬ್ಯುಲೆನ್ಸ್ಗಳಿವೆ, ಆ ಪೈಕಿ ಎರಡು ಆಂಬ್ಯುಲೆನ್ಸ್ ಅನ್ನು ಶವ ಸಾಗಿಸಲು ಮೀಸಲಿಟ್ಟಿದ್ದೇವೆ. ಮರ್ಸಿ ಆಕ್ಸಿಜನ್ ಮೂಲಕ ಸಂಕಷ್ಟದಲ್ಲಿರುವವರು ಹಾಗೂ ಬಡವರಿಗೆ ಆಮ್ಲಜನಕ ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ಸದಸ್ಯ ತನ್ವೀರ್ ಅಹ್ಮದ್ ತಿಳಿಸಿದ್ದಾರೆ.












Click it and Unblock the Notifications