ಮೇಕೆದಾಟುವಿನಿಂದ ಬೆಂಗಳೂರಿಗೆ ಕಾವೇರಿ ನೀರು
ಬೆಂಗಳೂರು, ಮಾ.10 : ಬೆಂಗಳೂರು ಮಹಾನಗರದ ನೀರಿನ ದಾಹವನ್ನು ನೀಗಿಸಲು ಜಲಮಂಡಳಿ ಕಾವೇರಿ ಐದನೇ ಹಂತದ ಯೋಜನೆಯನ್ನು ಸಿದ್ಧಪಡಿಸಿದೆ. ಯೋಜನೆಯಂತೆ ಮೇಕೆದಾಟು ಬಳಿಯಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ಈಗಾಗಲೇ 2,248 ಕೋಟಿ ರೂ.ಗಳ ಯೋಜನೆಯನ್ನು ತಯಾರಿಸಲಾಗಿದೆ.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ದೊರೆತಿರುವ 17.64 ಟಿಎಂಸಿ ಅಡಿ ನೀರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 10 ಟಿಎಂಸಿ ನೀರನ್ನು ಬೆಂಗಳೂರಿಗೆ ಹಂಚಿಕೆ ಮಾಡಿದ್ದರು. ಇದನ್ನು ಬಳಿಸಿಕೊಂಡು ಕಾವೇರಿ ಐದನೇ ಹಂತದ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕನಕಪುರ ತಾಲ್ಲೂಕಿನ ಮೇಕೆದಾಟು ಹತ್ತಿರದ ಕಾವೇರಿ ನದಿಯಿಂದ ನಿತ್ಯ 75 ಕೋಟಿ ಲೀಟರ್ ನೀರನ್ನು ಪಡೆಯಲು ಯೋಜನೆ ಸಿದ್ಧವಾಗಿದೆ.

ಕಾವೇರಿ ಐದನೇ ಹಂತದ ಯೋಜನೆಗಾಗಿ 2,248 ಕೋಟಿ ವೆಚ್ಚವಾಗಬಹುದು ಎಂದು ಜಲಮಂಡಳಿ ಅಂದಾಜಿಸಿದೆ. ಮೇಕೆದಾಟುವಿನಿಂದ ಉಯ್ಯಂಬಳ್ಳಿ, ಸಾತನೂರು ಮತ್ತು ತಾತಗುಣಿ ಮೂಲಕ ಮೂರು ಹಂತಗಳಲ್ಲಿ ನೀರು ಬೆಂಗಳೂರು ತಲುಪಲಿದೆ. ಈ 10 ಟಿಎಂಸಿ ನೀರಿನಲ್ಲಿ 8 ಟಿಎಂಸಿಯನ್ನು ಬೆಂಗಳೂರು ನಗರಕ್ಕೆ ಬಳಸಿಕೊಂಡು ಉಳಿದ 2 ಟಿಎಂಸಿ ನೀರನ್ನು ಸೂರ್ಯನಗರ, ಆನೇಕಲ್ ಮತ್ತು ಸುತ್ತಲಿನ ಹಳ್ಳಿಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.[ಬೆಂಗಳೂರಿಗೆ ಸಿಕ್ತು 10 ಟಿಎಂಸಿ ನೀರು]
ಯೋಜನೆ ವಿವರ ಹೀಗಿದೆ : ಮೇಕೆದಾಟು ಬಳಿಯಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಬೇಕಾಗಿದೆ. ಮೇಕೆದಾಟುವಿನಿಂದ 11 ಕಿ.ಮೀ. ದೂರದಲ್ಲಿರುವ ಉಯ್ಯಂಬಳ್ಳಿ 400 ಮೀಟರ್ ಎತ್ತರದಲ್ಲಿದ್ದು, ನೀರನ್ನು ಮೇಲ್ಮುಖವಾಗಿ ಪಂಪ್ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 2,700 ಎಂಎಂ ಅಳತೆಯ ಕೊಳವೆ ಮಾರ್ಗ ಅಳವಡಿಸಲಾಗುತ್ತದೆ. [ಬೆಂಗಳೂರಿನಲ್ಲಿ ನೀರಿನ ಸಮಸ್ಯೆ]
ಯೋಜನೆಯಂತೆ ಉಯ್ಯಂಬಳ್ಳಿಯಲ್ಲಿ 2.4 ಕೋಟಿ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಹಾಗೂ ಪಂಪಿಂಗ್ ಘಟಕವನ್ನು ನಿರ್ಮಿಸಲಾಗುತ್ತದೆ. ಉಯ್ಯಂಬಳ್ಳಿಯಿಂದ ಸಾತನೂರು ಮಾರ್ಗವಾಗಿ ತಾತಗುಣಿವರೆಗೆ ಗುರುತ್ವ ಬಲದಿಂದಲೇ ನೀರು ಹರಿದು ಬರಲಿದೆ. ತಾತಗುಣಿಯಲ್ಲಿ ಟ್ಯಾಂಕ್ ಗಳನ್ನು ನಿರ್ಮಿಸಿ, ಅಲ್ಲಿಂದ ನಗರಕ್ಕೆ ನೀರು ಪೂರೈಕೆ ಮಾಡಲು ಯೋಜನೆ ಸಿದ್ಧವಾಗಿದೆ.
ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿಯನ್ನು ಹಂತ-ಹಂತವಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ನಿತ್ಯ 50 ಕೋಟಿ ಲೀಟರ್, ಎರಡನೇ ಹಂತದಲ್ಲಿ 25 ಕೋಟಿ ಲೀಟರ್ ನೀರು ಪಡೆಯಲು ಅಗತ್ಯ ಮೂಲಸೌಕರ್ಯ ನಿರ್ಮಿಸಲಾಗುತ್ತದೆ. ಸದ್ಯ, ಕಾವೇರಿ ಯೋಜನೆಯ 4 ಹಂತಗಳು ಜಾರಿಯಲ್ಲಿದ್ದು, ನಿತ್ಯ 140 ಕೋಟಿ ಲೀಟರ್ ನೀರು ಹಂಚಿಕೆಯಾಗುತ್ತಿದೆ.












Click it and Unblock the Notifications