ಮಾಸ್ಕ್ ಧರಿಸದಿದ್ದರೆ 1 ಸಾವಿರ ದಂಡ: ಬಿಬಿಎಂಪಿಯಿಂದ ಜನರ ಲೂಟಿ
ಬೆಂಗಳೂರು, ಅ.4: ಕೊರೊನಾಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸುವ ಮೂಲಕ ಜನರ ಲೂಟಿಗೆ ಮುಂದಾಗಿದೆ.
ಈ ಹಿಂದೆ ಮಾಸ್ಕ್ ಹಾಕದವರಿಗೆ 200 ರು ದಂಡ ನಿಗದಿ ಮಾಡಲಾಗಿತ್ತು. ದಂಡದ ರೂಪದಲ್ಲಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದು ಬಂದಿತ್ತು. ನಂತರ ಹಣದ ಆಸೆಗೆ ಬಿದ್ದ ಸರ್ಕಾರವು, ನಗರ ಭಾಗದಲ್ಲಿ ದಂಡದ ಮೊತ್ತವನ್ನು 1 ಸಾವಿರ ರು, ಗ್ರಾಮೀಣ ಭಾಗದಲ್ಲಿ500 ರು ಗೆ ದಂಡದ ಮೊತ್ತ ಹೆಚ್ಚಳ ಮಾಡಿದೆ. ಈ ಮೂಲಕ ಜನ ಸಾಮಾನ್ಯರ ಲೂಟಿಗೆ ಹೊರಟಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 1 ಸಾವಿರ ರೂ. ದಂಡ
ಜುಲೈ ತಿಂಗಳಿನಿಂದ ದಂಡ ಹಾಕಲು ಪ್ರಾರಂಭಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಸುಮಾರು 58 ಲಕ್ಷ ರು ದಂಡ ಸಂಗ್ರಹವಾಗಿದೆ. ''ಆಯ್ದುಕೊಂಡು ತಿನ್ನುವವನ ಬಳಿ ಕಿತ್ಕೊಂಡು ತಿಂದರಂತೆ'' ಎನ್ನುವ ಎಂಬ ಮಾತಿನಂತೆ ಜನರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರವೇ ಹಗಲು ದರೋಡೆಗೆ ನಿಂತಿದೆ. ಇದುವರೆಗೂ ಒಂದೇ ಒಂದು ಮಾಸ್ಕ್ ವಿತರಿಸದ ಸರ್ಕಾರ ಹೆದರಿಸಿ, ಬೆದರಿಸಿ ಜನರ ಬಳಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿಯುತ್ತಿದೆ.
ಬಿಬಿಎಂಪಿ ನೇಮಿಸಿರುವ ಮಾರ್ಷಲ್ಗಳು ಜನರ ಹತ್ತಿರ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಬಿಬಿಎಂಪಿ ಮತ್ತಷ್ಟು ಮಾರ್ಷಲ್ಗಳನ್ನು ನೇಮಿಸಿಕೊಂಡು ಜನರನ್ನು ಹೆದರಿಸುತ್ತಿದೆಯೇ ಹೊರತು, ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಲು ಈ ಕಾನೂನು ದಾರಿ ಮಾಡಿಕೊಟ್ಟಿದೆ.
ಸೋಲಿಗೆ ಹೆದರಿ ಬಿಬಿಎಂಪಿ ಚುನಾವಣೆ ಮುಂದೂಡಿಕೆ: ಎಎಪಿ
ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕೆ ಹೋದರೆ ಅವನ ದಿನದ ಆದಾಯ 350 ರಿಂದ 400 ರು ಇದೆ. ಇಂತಹ ಕಡೆ 500 ರು ದಂಡ ವಿಧಿಸುವ ಮೂಲಕ ಪಿಡಿಒಗಳು ಲೂಟಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಂತಾಗಿದೆ.
ನಿಯಂತ್ರಣಕ್ಕೆ ಸಿಗದೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಮಾಸ್ಕ್ ಕಡ್ಡಾಯ ಆದರೆ ಗೂಂಡಾಗಳ ರೀತಿ ಹೆದರಿಸಿ, ಹಣ ಸುಲಿಗೆ ಮಾಡಿ ಅರಿವು ಮೂಡಿಸುವ ಅಗತ್ಯವಿಲ್ಲ. ಲೂಟಿಗೆ ನಿಂತಿರುವ ಮಾರ್ಷಲ್ಗಳಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಸೂಕ್ತ ಸೂಚನೆ ನೀಡಬೇಕು ಹಾಗೂ ಕೂಡಲೇ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಹಾಗೂ ಉಚಿತವಾಗಿ ಸರ್ಕಾರದಿಂದ ಮಾಸ್ಕ್ ವಿತರಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹೇಳಿದ್ದಾರೆ.