ನರಗುಂದ ರೈತ ಬಂಡಾಯ ಸ್ಮರಿಸಿದ ರೈತರು
ಬೆಂಗಳೂರು, ಜು.21: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯಾ ಉದ್ಯಾನದಲ್ಲಿ 39 ನೇ ರೈತ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ರೈತರು ತಮ್ಮ ಕಷ್ಟವೆಲ್ಲವನ್ನು ನುಂಗಿಕೊಂಡು ಇಡೀ ದೇಶಕ್ಕಾಗಿ ದುಡಿಯುತ್ತಾರೆ, ಅವರು ತಮ್ಮ ಉಪಯೋಗಕ್ಕಾಗಿ ಮಾತ್ರ ಬೆಳೆಯನ್ನು ಬೆಳೆದಿದ್ದರೆ ಯಾರಿಗೂ ಇಂದು ಊಟಕ್ಕೆ ಆಹಾರವಿರುತ್ತಿರಲಿಲ್ಲ, ಆದರೆ ಈ ದೇಶ ಪ್ರತಿಯಾಗಿ ರೈತರಿಗೆ ಏನು ನೀಡಿದೆ ಎಂದು ರೈತರು ಪ್ರಶ್ನಿಸಿದರು.
ರೈತರು ಹಿಂದಿನಿಂದಲೂ ದೇಶಕ್ಕೆ ಅನ್ನ, ಬಟ್ಟೆ ಕೊಡುತ್ತಾ ಬಂದಿದ್ದಾರೆ. ತಮಗೆ ಕಳಪೆಯಾಗಿರುವುದನ್ನು ಇಟ್ಟುಕೊಂಡು ಉತ್ತಮವಾದುದನ್ನೇ ಸಮಾಜಕ್ಕೆ ಕೊಡುತ್ತಿದ್ದಾರೆ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಕೊನೆಗೆ ಕಸ ಗುಡಿಸುವವನಿಗೂ ಒಂದು ನಿರ್ದಿಷ್ಟ ಸಂಬಳ, ಸವಲತ್ತುಗಳಿವೆ.

ಇದ್ಯಾವುದೂ ಇಲ್ಲದ ರೈತರಿಗೆ ಕನಿಷ್ಠ ವೈಜ್ಞಾನಿಕ ಬೆಲೆಯನ್ನೂ ಕೊಡುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಕೂಡಲೇ ಇಂತಹ ವಿಚಾರಗಳ ಬಗ್ಗೆ ಗಮನಹರಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜೇಗೌಡ ಒತ್ತಾಯಿಸಿದರು.
ರಾಜ್ಯದ ರಾಜಕೀಯ ಮುಖಂಡರು ರೈತರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿದ್ದಾರೆ. ನಾವು ಹಮ್ಮಿಕೊಂಡ ರೈತ ಹುತಾತ್ಮ ದಿನಕ್ಕೆ ಹಲವು ರಾಜಕೀಯ ನಾಯಕರನ್ನು ಆಹ್ವಾನಿಸಿದ್ದೆವು. ಆದರೆ ಯಾರೊಬ್ಬರೂ ಇತ್ತ ತಲೆ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications