ಮೈಸೂರು ಮಾರ್ಗವಾಗಿ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು : ನಳಿನ್ ಕುಮಾರ್ ಕಟೀಲ್ ಮಹತ್ವದ ಮಾಹಿತಿ
ಕರ್ನಾಟಕ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು ಲಭ್ಯವಾಗಲಿದೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚರಿಸುವುದು ಖಚಿತವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಮೈಸೂರು ಮೂಲಕ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲಾಗುವುದು. ಮಂಗಳೂರು-ಬೆಂಗಳೂರು ನಡುವೆ ವಿದ್ಯುದ್ಧೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸದ್ಯ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಶೀಘ್ರದಲ್ಲೇ ಮಂಗಳೂರಿನವರೆಗೆ ವಿಸ್ತರಿಸಲಾಗುವುದು ಎಂದು ಕಟೀಲ್ ಮಾಹಿತಿ ನೀಡಿದ್ದಾರೆ. ಮಹತ್ವದ ಗಂಜಿಮುಟ್ಟಾ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೂ ಶೀಘ್ರವೇ ಶಂಕುಸ್ಥಾಪನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರ ಆರಂಭವಾದರೆ ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಜನರಿಗೆ ಭಾರಿ ಅನುಕೂಲವಾಗಲಿದೆ. ಈಗಾಗಲೇ ಹಲವು ರೈಲುಗಳು ಲಭ್ಯವಿದ್ದರೂ, ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣದ ಅನುಭವಕ್ಕಾಗಿ ಮಂಗಳೂರು-ಬೆಂಗಳೂರು ಜನ ಕಾಯುತ್ತಿದ್ದಾರೆ.
ಮೈಸೂರು ಮಾರ್ಗವಾಗಿ ಈ ರೈಲು ಚಲಿಸುವುದರಿಂದ ಪ್ರವಾಸೋದ್ಯಮಕ್ಕೆ ಕೂಡ ಹೆಚ್ಚಿನ ಪ್ರೋತ್ಸಾಹ ಸಿಗುವ ಸಾಧ್ಯತೆ ಇದೆ. ಈಗಾಗಲೇ ವಂದೇ ಭಾರತ್ ಎಕ್ಸ್ಪ್ರೆಸ್ ದೇಶಾದ್ಯಂತ ಜನಪ್ರಿಯವಾಗುತ್ತಿದೆ. ಟಿಕೆಟ್ ದರ ಸ್ವಲ್ಪ ದುಬಾರಿಯಾದರೂ ಪ್ರಯಾಣಿಕರು ವಂದೇ ಭಾರತ್ ರೈಲಿನ ಪ್ರಯಾಣವನ್ನು ಇಷ್ಟಪಟ್ಟಿದ್ದಾರೆ.
ಜುಲೈನಲ್ಲಿ ಧಾರವಾಡ-ಬೆಂಗಳೂರು ನಡುವೆ ಸಂಚಾರ
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜುಲೈ ತಿಂಗಳಿನಿಂದ ಸಂಚಾರ ಆರಂಭಿಸಲಿದೆ. ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಆರಂಭಿಸಲು ಎಲ್ಲಾ ಸಿದ್ದತೆಗಳು ಪೂರ್ಣವಾಗಿದ್ದು, ಜುಲೈನಲ್ಲಿ ಅಧಿಕೃತವಾಗಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭವಾದರೆ ಉತ್ತರ ಕರ್ನಾಟಕ ಮತ್ತು ರಾಜಧಾನಿ ನಡುವೆ ಪ್ರಯಾಣ ಮಾಡುವವರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಹೈದರಾಬಾದ್-ಬೆಂಗಳೂರು, ಬೆಂಗಳೂರು-ಕೊಯಮತ್ತೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಬಗ್ಗೆ ಕೂಡ ರೈಲ್ವೆ ಇಲಾಖೆ ಚಿಂತನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮಾರ್ಗಗಳಲ್ಲಿ ಕೂಡ ವಂದೇ ಭಾರತ್ ರೈಲುಗಳು ಸಂಚರಿಸಲಿವೆ.












Click it and Unblock the Notifications