ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಿಸ್ತೂಲ್ ಹಿಡಿದ ವ್ಯಕ್ತಿ ಪತ್ತೆ?
ಬೆಂಗಳೂರು, ಮೇ 07 : ಉದ್ಯಾನ ನಗರಿ ಬೆಂಗಳೂರು ಬೆಚ್ಚಿ ಬೀಳುವಂತಹ ಸುದ್ದಿಯೊಂದು ಬಂದಿದೆ. ಪಿಸ್ತೂಲ್ ಹಿಡಿದ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ನಿಲ್ದಾಣ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ನಗರದ ಮೆಜೆಸ್ಟಿಕ್ನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮೇ 6ರಂದು ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೆಟ್ರೋ ನಿಲ್ದಾಣದ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
8 ರಾಜ್ಯದಲ್ಲಿ ಉಗ್ರರ ದಾಳಿ ಸಾಧ್ಯತೆ : ನೀಲಮಣಿ ರಾಜು ತುರ್ತು ಪತ್ರ
ಪಿಸ್ತೂಲ್ ಹೊಂದಿದ್ದ ವ್ಯಕ್ತಿ ಮೆಟ್ರೋ ನಿಲ್ದಾಣ ಪ್ರವೇಶಿಸಲು ಪ್ರಯತ್ನ ಪಟ್ಟಿದ್ದಾನೆ. ಆದರೆ, ನಿಲ್ದಾಣದಲ್ಲಿರುವ ಮೆಟಲ್ ಡಿಕೆಕ್ಟರ್ನಲ್ಲಿ ಪಿಸ್ತೂಲ್ ಇರುವುದು ಪತ್ತೆಯಾಗಿದೆ. ತಕ್ಷಣ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದಾನೆ. ಆತನನ್ನು ಹಿಡಿಯಲು ಭದ್ರತಾ ಸಿಬ್ಬಂದಿ ನಡೆಸಿದ ಪ್ರಯತ್ನ ಫಲ ನೀಡಿಲ್ಲ.
ಮೆಟ್ರೋ ಪಿಲ್ಲರ್ನಲ್ಲಿ ದೋಷ, ಸದ್ದಿಲ್ಲದೆ ತೇಪೆ ಹಚ್ಚಿದ ಅಧಿಕಾರಿಗಳು
ಪಿಸ್ತೂಲ್ ಹಿಡಿದು ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿ ಉದ್ದನೆಯ ಗಡ್ಡ ಬಿಟ್ಟಿದ್ದ, ಕೈಯಲ್ಲಿ ಯಾವುದೇ ಬ್ಯಾಗ್ ಇರಲಿಲ್ಲ. ಸಿಸಿಟಿವಿಯಲ್ಲಿ ವ್ಯಕ್ತಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಿರುವ ದೃಶ್ಯ ಸೆರೆಯಾಗಿದೆ. ನಿಲ್ದಾಣದ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋ 2 ನೇ ಹಂತ: ನಿಲ್ದಾಣದ ವಿಶೇಷತೆಗಳೇನು?
ದಕ್ಷಿಣ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ಸೇರಿದಂತೆ ಹಲವು ಅಧಿಕಾರಿಗಳು ಶ್ವಾನದಳದೊಂದಿಗೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸುಮಾರು 40 ವರ್ಷ ಪ್ರಾಯದ ಅನಾಮಧೇಯ ವ್ಯಕ್ತಿ ಹಿಂದಿ ಮಾತನಾಡುತ್ತಿದ್ದ. ವ್ಯಕ್ತಿಯನ್ನು ಹಿಡಿಯಲು ಮೆಟ್ರೋ ಭದ್ರತಾ ಸಿಬ್ಬಂದಿ ಮಾಡಿದ ಪ್ರಯತ್ನ ವಿಫಲವಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ರವಿ ಚನ್ನಣ್ಣನವರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಅನಾಮಧೇಯ ವ್ಯಕ್ತಿಯ ಹುಡುಕಾಟಕ್ಕೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲಾಗಿದೆ' ಎಂದು ಹೇಳಿದ್ದಾರೆ.
'ಅನಾಮಧೇಯ ವ್ಯಕ್ತಿ ಯಾರು, ಎಲ್ಲಿಂದ ಬಂದ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು, ಧೈರ್ಯದಿಂದ ಇರಬೇಕು' ಎಂದು ರವಿ ಚನ್ನಣ್ಣವರ್ ಮನವಿ ಮಾಡಿದ್ದಾರೆ.