ಕುಡಿದ ಮತ್ತಿನಲ್ಲಿ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಭೂಪ
ಬೆಂಗಳೂರು ಏಪ್ರಿಲ್ 8: ಇತ್ತೀಚೆಗೆ ವಿಮಾನದಲ್ಲಿ ಮದ್ಯಪಾನಿಗಳ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕುಡಿದು ಪ್ರಯಾಣದ ವೇಳೆ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದು, ಹಲ್ಲೆ, ದಾಳಿ, ಅಶ್ಲೀಲ ವರ್ತನೆ, ತುರ್ತು ಬಾಗಿಲು ತೆರೆಯಲು ಯತ್ನಿಸುವುದು ಇತ್ಯಾದಿ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕಳೆದ ದಿನ ಅಂತಹದ್ದೇ ಪ್ರಕರಣವೊಂದು ವಿಮಾನದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮದ್ಯಪಾನ ಮಾಡಿದ್ದ ಪ್ರಯಾಣಿಕನೊಬ್ಬ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಘಟನೆ ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಕಳೆದ ದಿನ (ಏಪ್ರಿಲ್ 7) ಸಂಭವಿಸಿದೆ.
ಹೀಗಾಗಿ 40 ವರ್ಷದ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ಶುಕ್ರವಾರ ಬೆಳಿಗ್ಗೆ 7:56 ಕ್ಕೆ ವಿಮಾನ ಸಂಖ್ಯೆ 6E 308 ನಲ್ಲಿ ನಡೆದಿದೆ. ವಿಮಾನಯಾನ ಸಂಸ್ಥೆಯು ಅಧಿಕೃತ ಹೇಳಿಕೆಯಲ್ಲಿ, ವ್ಯಕ್ತಿಯು ಮದ್ಯದ ಸ್ಥಿತಿಯಲ್ಲಿದ್ದ ಎಂದು ಹೇಳಲಾಗಿದೆ.

ವಿಮಾನ ಸಾಮಾನ್ಯವಾಗಿ ಟೇಕ್ ಆಫ್ ಆಗುವ ಮೊದಲು ಏರ್ಲೈನ್ ಸಿಬ್ಬಂದಿ ಸದಸ್ಯರು, ತುರ್ತು ನಿರ್ಗಮನದ ಬಗ್ಗೆ ಸ್ಪಷ್ಟವಾದ ಸೂಚನೆಗಳನ್ನು ನೀಡುತ್ತಾರೆ. ಅದನ್ನು ಅರಿತುಕೊಂಡು ಪ್ರಯಾಣ ಮಾಡಬೇಕಾಗುತ್ತದೆ. "ವಿಮಾನ 6E 308 ರಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅಮಲೇರಿದ ಸ್ಥಿತಿಯಲ್ಲಿ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ" ಎಂದು IndiGo ಹೇಳಿದೆ.
"ಈ ವರ್ತನೆಯನ್ನು ಗಮನಿಸಿದ ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಪ್ಟನ್ಗೆ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಪ್ರಯಾಣಿಕರಿಗೆ ಸೂಕ್ತವಾಗಿ ಎಚ್ಚರಿಕೆ ನೀಡಲಾಗಿದೆ. ವಿಮಾನದ ಸುರಕ್ಷಿತ ಕಾರ್ಯಾಚರಣೆಯಲ್ಲಿ ಯಾವುದೇ ರಾಜಿ ಇಲ್ಲ" ಎಂದು ಏರ್ಲೈನ್ ಹೇಳಿದೆ.

ಕರ್ನಾಟಕದ ರಾಜಧಾನಿಯಲ್ಲಿ ಬಂದಿಳಿದ ನಂತರ ಪಾನಮತ್ತ ಪ್ರಯಾಣಿಕನನ್ನು ಸಿಐಎಸ್ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಮತ್ತು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಲಾಯಿತು.
ಇದು ಅದ್ವಿತೀಯ ಘಟನೆಯಲ್ಲ. ಈ ಹಿಂದೆ, ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಲ್ಯಾಂಡಿಂಗ್ಗೆ ಸಮೀಪಿಸುತ್ತಿದ್ದಾಗ ತುರ್ತು ನಿರ್ಗಮನದ ಬಾಗಿಲನ್ನು ತೆಗೆಯಲು ಪ್ರಯತ್ನಿಸಿದ್ದರು. ತುರ್ತು ನಿರ್ಗಮನವನ್ನು ವಿನಾಕಾರಣ ತೆರೆಯಲು ಪ್ರಯತ್ನಿಸಿದ್ದಕ್ಕಾಗಿ 40 ವರ್ಷದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕುಡಿದು ವಿಮಾನದಲ್ಲಿ ರಂಪಾಟ
ಕುಡಿದ ಮತ್ತಿನಲ್ಲಿ ಸಿಬ್ಬಂದಿ ಹಾಗು ಸಹಪ್ರಯಾಣಿಕರನ್ನು ನಿಂದಿಸಿದ ಆರೋಪದ ಮೇರೆಗೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾದ ಘಟನೆ ಇತ್ತೀಚೆಗೆ ನಡೆದಿದೆ.
ಮಾರ್ಚ್ 23 ರಂದು ಈ ಘಟನೆ ನಡೆದಿದ್ದು, ಬಂಧಿತರಿಬ್ಬರು ಗಲ್ಫ್ ದೇಶದಿಂದ ಪ್ರಯಾಣಿಸಿದ್ದರು. ದುಬೈ-ಮುಂಬೈ ಇಂಡಿಗೋ ವಿಮಾನ ಹತ್ತಿದ ಇಬ್ಬರು, ಒಂದು ವರ್ಷದ ಬಳಿಕ ಮುಂಬೈಗೆ ಪ್ರಯಾಣಿಸುತ್ತಿದ್ದ ಖುಷಿಯಲ್ಲಿ ವಿಮಾನದೊಳಗೆ ಮದ್ಯ ಸೇವಿಸಲಾರಂಭಿಸಿದ್ದರು.
ಎಣ್ಣೆ ಪರಮಾತ್ಮ ಹೊಟ್ಟೆಗಿಳಿದರೆ ಕೇಳ್ಬೇಕ, ಈ ಲೋಕದ ಅರಿವೇ ಇರಲ್ಲ, ನಾವು ಎಲ್ಲಿದ್ದೀವಿ, ಏನ್ಮಾಡ್ತಿದ್ದೀವಿ ಅನ್ನೋ ಪರಿಜ್ಞಾನ ಸಹ ಇರಲ್ಲ, ಈ ಇಬ್ಬರ ಕತೆನೂ ಹಾಗೆ ಆಗಿತ್ತು. ವಿಮಾನದೊಳಗೆ ಹೊಟ್ಟೆ ತುಂಬಾ ಕುಡಿದು ಸಿಬ್ಬಂದಿ, ಸಹಪ್ರಯಾಣಿಕರನ್ನು ನಿಂದಿಸಲು ಶುರುಮಾಡಿದ್ದರು. ಬಸ್ಸೊ, ಆಟೋನೊ ಆಗಿದ್ರೆ ಮಧ್ಯದಲ್ಲಿ ನಿಲ್ಲಿಸ ಬಹುದಿತ್ತು. ವಿಮಾನದಲ್ಲಿ ಹಾಗಾಗಲ್ಲ, ಸಿಬ್ಬಂದಿಗಳು ಸಹಪ್ರಯಾಣಿಕರು ಗದರಿಸಿ ಸುಮ್ಮನಿರುವಂತೆ ಹೇಳಿದರು, ಕುಡುಕರಿಬ್ಬರ ಆರ್ಭಟ ಹೆಚ್ಚಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ ಅವರನ್ನು ಬಂಧಿಸಲಾಗಿದೆ.
ಇನ್ನೂ ಕಳೆದ ಸೆಪ್ಟಂಬರ್ನಲ್ಲಿ ದೆಹಲಿ-ನ್ಯೂಯಾರ್ಕ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಕೂತಿದ್ದ ಸೀಟಿಗೆ ಮೂತ್ರ ಮಾಡಿದ ಘಟನೆ ನಡೆದಿತ್ತು.












Click it and Unblock the Notifications