ಬೆಂಕಿ ಇಟ್ಟ ಅಪ್ಪನಿಗೆ ಏನೂ ಆಗಬಾರದು ಎಂದು ಮಗ ವೈದ್ಯರಿಗೆ ಸುಳ್ಳು ಹೇಳಿದ್ದ ಗೊತ್ತಾ?
ಬೆಂಗಳೂರು, ಏ. 08: ಸಾರ್. ನನ್ನ ಮಗ ಜೀವನದಲ್ಲಿ ಏನೂ ಸರಿಯಾದದ್ದನ್ನು ಮಾಡಲಿಲ್ಲ. ಸಿಎ ಓದು ಅರ್ಧಕ್ಕೆ ನಿಲ್ಲಿಸಿದ್ದ. ವ್ಯವಹಾರ ನೋಡಿಕೊಳ್ಳಲು ಹೇಳಿದ್ದೆ. ಅಲ್ಲಿಯೂ ಸರಿಯಾಗಿ ಮಾಡಲಿಲ್ಲ. ಹಣಕಾಸು ಲೆಕ್ಕಾಚಾರದಲ್ಲೂ ತಪ್ಪು ಮಾಡುತ್ತಲೇ ಇದ್ದ. ಮಗ ಹಾಳಾಗಿ ಹೋಗ್ತಾನೆ, ಮನೆ ಹಾಳು ಮಾಡ್ತಾನೆ ಅಂತ ನೋವು ತಿನ್ನುತ್ತಿದ್ದೆ. ಅವರಿಗೆ ಹೆದರಿಸಿ ಸರಿ ಪಡಿಸುವ ಉದ್ದೇಶದಿಂದ ಥಿನ್ನರ್ ಹಾಕಿದೆ. ನನ್ನ ಕೈಯಾರೆ ನನ್ನ ಮಗನನ್ನು ಕೊಂದು ಬಿಟ್ಟೆ..
ಚಾಮರಾಜಪೇಟೆಯ ಆಜಾದ್ ನಗರದಲ್ಲಿ ಮಗನನ್ನು ಕೊಂದು ಜೈಲಿಗೆ ಹೋದಾಗ ಆತನ ಅಪ್ಪ ಸುರೇಂದ್ರ ಪೊಲೀಸರ ಮುಂದೆ ಕಣ್ಣೀರು ಹಾಕಿ ನೋವಿನ ಮಾತುಗಳನ್ನು ಹಂಚಿಕೊಂಡಿದ್ದಾನೆ. ತನ್ನ ಮಗ ಚೆನ್ನಾಗಿರಬೇಕು ಎಂದು ಪ್ರತಿಯೊಬ್ಬ ತಂದೆ- ತಾಯಿ ಆಸೆ ಪಡುವುದು ಸಹಜ. ಅದೇ ರೀತಿ ಆಸೆ ಸುರೇಂದ್ರ ಅವರು ಇಟ್ಟುಕೊಂಡಿದ್ದರು. ಆದರೆ ಕೋಪದ ಕೈಗೆ ಬುದ್ದಿ ಕೊಟ್ಟ ಪರಿಣಾಮ ತನ್ನ ಮಗನನ್ನು ತನ್ನ ಕೈಯಾರೆ ಕೊಂದು ಜೈಲು ಸೇರಿದ್ದಾನೆ.
ಏ. 1 ರಂದು ಹಣಕಾಸಿನ ಲೆಕ್ಕಾಚಾರದಲ್ಲಿ 12 ಸಾವಿರ ರೂ. ವ್ಯತ್ಯಾಸ ಬಂದಿತ್ತು. ಈ ವಿಚಾರವಾಗಿ ತಂದೆ ಸುರೇಂದ್ರ ಮತ್ತು ಅವರ ಪುತ್ರ ಅರ್ಪಿತ್ ನಡುವೆ 20 ನಿಮಿಷ ಜಗಳವಾಗಿತ್ತು. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅರ್ಪಿತ್ ಮೇಲೆ ಥಿನ್ನರ್ ಹಾಕಿ ಬೆಂಕಿ ಕಡ್ಡಿ ಗೀಚಿ ಬೆಂಕಿ ಇಟ್ಟಿದ್ದಾರೆ. ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದ ಅರ್ಪಿತ್ ಬೆಂಕಿಯಿಂದ ಗಾಯಗೊಂಡಿದ್ದ.

ಕೂಡಲೇ ಆತನನ್ನು ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅರ್ಪಿತ್ ಗುರುವಾರ ಮೃತಪಟ್ಟಿದ್ದ. ಈ ಕುರಿತು ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಚಾಮರಜಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸುರೇಂದ್ರ ಅವರನ್ನು ಬಂಧಿಸಿದ್ದಾರೆ. ಆದರೆ, ಬಂಧನ ವೇಳೆ ಘಟನೆ ಬಗ್ಗೆ ಕಣ್ಣೀರು ಹಾಕಿ ನೋವನ್ನು ಹಂಚಿಕೊಂಡಿದ್ದಾರೆ.

ಸ್ವಾಮಿ ಕೋಪದ ಕೈಗೆ ಬುದ್ದಿ ಕೊಟ್ಟು ಜೀವನ ಹಾಳು ಮಾಡಿಕೊಂಡೆ. ನನ್ನ ಕೈಯಾರೆ ನನ್ನ ಮಗನನ್ನು ಕೊಂದುಬಿಟ್ಟೆ. ಆದರೆ ಕೊಲ್ಲುವ ಉದ್ದೇಶ ನನಗೆ ಇರಲಿಲ್ಲ. ಮಗನಿಗೆ ಬುದ್ಧಿ ಕಲಿಸಿ ಸರಿದಾರಿಗೆ ತರುವ ಅಸೆ ಇತ್ತು ಅಷ್ಟೇ. ಮಗ ಜೀವನದಲ್ಲಿ ಏನನ್ನೂ ಸರಿಯಾಗಿ ಮಾಡಲಿಲ್ಲ. ಅವನ ಭವಿಷ್ಯದ ಬಗ್ಗೆ ಆತಂಕ ಮನೆ ಮಾಡಿತ್ತು. ಸಿಎ ಕೆಲಸ ಸರಿ ಮಾಡಲಿಲ್ಲ. ನನ್ನ ವ್ಯಾಪಾರದಲ್ಲಿ ಸೇರಿಸಿಕೊಂಡಿದ್ದೆ. ಅದನ್ನೂ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಹಣಕಾಸು ಲೆಕ್ಕಾಚಾರದಲ್ಲಿ ಪದೇ ಪದೇ ತಪ್ಪು ಮಾಡುತ್ತಿದ್ದ. ಮಗ ಹಾಳಾಗಿ ಹೋಗಬಾರದು ಎನ್ನುವ ಉದ್ದೇಶದಿಂದ ಬುದ್ಧಿ ಕಲಿಸಲು ಪ್ರಯತ್ನಿಸಿದೆ. ಕೋಪಗೊಂಡು ಅವನ ಮೇಲೆ ಥೀನ್ನರ್ ಹಾಕಿದೆ. ಮೊದಲ ಸಲ ಬೆಂಕಿ ಕಡ್ಡಿ ಗೀರಿದಾಗ ಅವನು ಅಲುಗಾಡಲಿಲ್ಲ, ಎರಡನೇ ಸಲ ಕಡ್ಡಿ ಅವನ ಮೇಲೆ ಬಿತ್ತು. ಮೊದಲ ದಿನ ದೂರು ದಾಖಲಿಸಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನಾನೇ ಬೆಂಕಿ ಇಟ್ಟುಕೊಂಡೆ
ಇನ್ನು ಅಪ್ಪ ಬೆಂಕಿ ಹಚ್ಚಿ ಕೊಂದರೂ ತನ್ನ ತಂದೆಯ ಮೇಲಿನ ಪ್ರೀತಿ ಅರ್ಪಿತ್ ಗೆ ಕಡಿಮೆ ಇರಲಿಲ್ಲ. ನಾನು ಸತ್ತರೂ ಪರವಾಗಿಲ್ಲ ನನ್ನ ತಂದೆಗೆ ಏನೂ ಆಗಬಾರದು ಎಂದೇ ಭಾವಿಸಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಕೇಳಿದಾಗ, ಆಕಸ್ಮಿಕವಾಗಿ ಬೆಂಕಿ ಅವಘಡ ಆಯಿತು. ನಾನೇ ಬೆಂಕಿ ಇಟ್ಟುಕೊಂಡೆ ಎಂದು ಹೇಳಿಕೆ ನೀಡಿದ್ದರು. ಸಾವು ಬದುಕಿನ ಹೋರಾಟದಲ್ಲೂ ಅಪ್ಪನಿಗೆ ಏನೂ ಆಗಬಾರದು ಎಂದು ಮಗ ಆಸೆ ಪಟ್ಟಿದ್ದ. ಆದರೆ ಅರ್ಪಿತ್ ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಅಪ್ಪ ಸುರೇಂದ್ರ ಜೈಲು ಸೇರಿದ್ದಾನೆ.












Click it and Unblock the Notifications