ಕೆ.ಆರ್. ಪುರಂನಲ್ಲಿ ಕೊಲೆ, ಮತ್ತೆ ಭುಗಿಲೆದ್ದ ಕಸ ವಿಲೇವಾರಿ ವಿವಾದ
ಸುಮಾರು 10 ವರ್ಷಗಳ ದ್ವೇಷಕ್ಕೆ ಕೆ.ಆರ್.ಪುರದ ಚಿಕ್ಕದೇವಸಂದ್ರದಲ್ಲಿ ಮೈದುನನೊಬ್ಬ ಭಾವನನ್ನು ಕೊಲೆ ಮಾಡಿದ್ದಾನೆ.
ಕೆ.ಆರ್ ಪುರಂ (ಬೆಂಗಳೂರು ಗ್ರಾಮಾಂತರ) ಮಾರ್ಚ್ 8: ಚಿಕ್ಕದೇವಸಂದ್ರದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮೈದುನನಿಂದಲೇ ಭಾವನ ಕೊಲೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ದೇವಸಂದ್ರ ನಿವಾಸಿ ಚೆಲುವರಾಯ (35) ಮೃತ ದುರ್ದೈವಿ.
10 ವರ್ಷದ ಹಿಂದೆ, ಚೆಲುವರಾಯನ ಪತ್ನಿ ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಮಂಜುಳಾ ಕುಟುಂಬದವರು ಮಂಜುಳಾ ಅವರ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದರು.

ಆ ಪ್ರಕರಣದಲ್ಲಿ ಚೆಲುವರಾಯ ಎರಡು ವರ್ಷ ಜೈಲು ವಾಸ ಅನುಭವಿಸಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಮದುವೆಯಾಗಿದ್ದ.
ಅದು ಮಂಜುಳಾ ಕುಟುಂಬದಲ್ಲಿ ಚೆಲುವರಾಯನ ಬಗ್ಗೆ ದ್ವೇಷ ಮನೆ ಮಾಡಲು ಕಾರಣವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಜುಳಾ ಸಹೋದರ ರಾಜಕುಮಾರ, ಮಂಗಳವಾರ (ಮಾರ್ಚ್ 7) ತನ್ನ ಮನೆಗೆ ಚೆಲುವರಾಯನನ್ನು ಆಹ್ವಾನಿಸಿದ್ದ.
ಅದರಂತೆ, ರಾಜಕುಮಾರನ ಮನೆಗೆ ಹೋಗಿದ್ದ ಚೆಲುವರಾಯನನ್ನು ತನ್ನ ಸ್ನೇಹಿತರೊಡಗೂಡಿ ರಾಜಕುಮಾರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಚೆಲುವರಾಯನ ಕಣ್ಣಿಗೆ ಖಾರದಪುಡಿ ಎರಚಿ, ಆನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಗ್ರಾಮಸ್ಥರ ದಾಳಿ: ಕಸದ ಲಾರಿ ಚಾಲಕ ಪರಾರಿ
ಬೆಂಗಳೂರಿನ ಕಸ ಸುರಿಯುವ ಸಮಸ್ಯೆ ಮತ್ತೆ ಭುಗಿಲೆದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಗ್ರಾಮಸ್ಥರು ಕಸದ ಲಾರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಾ. 8ರ ಮುಂಜಾನೆ ನಡೆದಿದೆ.
ಇಂದು (ಮಾರ್ಚ್ 8) ಮುಂಜಾನೆ ಎಂದಿನಂತೆ ಕಸ ಸುರಿಯಲು ಬಂದಿದ್ದ ಲಾರಿಯ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದ ದಾಂಧಲೆ ನಡೆಸಿದ್ದಾರೆ. ಘಟನೆಯಿಂದ ಭೀತಿಗೊಂಡ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ವಿಶ್ವನಾಥಪುರ ಪೊಲೀಸರು ಸ್ಥಳಕ್ಕೆ ಭೇಟಿ ಜನರನ್ನು ಶಾಂತಗೊಳಿಸಿದ್ದಾರೆ. ಆದರೂ, ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರುವುದಾಗಿ ತಿಳಿದುಬಂದಿದೆ.
ಟಿ.ವಿ. ಶೋ ರೂಂ ಭಸ್ಮ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾದನಾಯಕನ ಹಳ್ಳಿಯ ಟಿವಿ ಶೋ ರೂಂ ಒಂದು ಬೆಂಕಿಗೆ ಆಹುತಿಯಾಗಿದೆ. ಬೆಂಕಿಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಟಿವಿ. ಫ್ರಿಡ್ಜ್, ವಾಷಿಂಗ್ ಮೆಷೀನ್, ಓವನ್ ಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.












Click it and Unblock the Notifications